ಬೊಮ್ಮಾಯಿ ಬಜೆಟ್ನಲ್ಲಿ ದೂರದೃಷ್ಟಿಯಿಲ್ಲ ಎಂದಿದ್ದೇಕೆ ರಾಜ್ಯ ರೈತ ಸಂಘ?
ಬೆಂಗಳೂರು, ಮಾರ್ಚ್ 4: ಕರ್ನಾಟಕದ 2022-23ನೇ ಸಾಲಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಚೊಚ್ಚಲ ಬಜೆಟ್ನಲ್ಲಿ ದೂರದೃಷ್ಟಿ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದೂಷಿಸಿದೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್ನಲ್ಲಿ ಹಲವು ಕ್ಷೇತ್ರಗಳಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಆದರೆ ಕೃಷಿ ಮತ್ತು ಗ್ರಾಮೀಣ ಪ್ರದೇಶಕ್ಕೆ ನೀಡಿರುವ ಕಾರ್ಯಕ್ರಮಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯಕ್ರಮಗಳಿಗೆ ಶಕ್ತಿ ತುಂಬುವಂತೆ ತೋರುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
Karnataka Budget 2022 Live Updates: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಭಾಷಣ ಮುಕ್ತಾಯ
ಕರ್ನಾಟಕ ಬಜೆಟ್ ಜನಸಾಮಾನ್ಯರಿಗೆ ಹೆಚ್ಚು ಹೊರೆಯಲ್ಲದ, ರೈತರ ಪಾಲಿಗೆ ನಿರಾಸೆಯ ಬಜೆಟ್ ಆಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ದೂಷಿಸಿದ್ದಾರೆ. ಕೊರೊನಾ ಪಿಡುಗು, ಅತಿವೃಷ್ಟಿ, ಹಾನಿಯಿಂದ ಸಂಕಷ್ಟಕ್ಕೀಡಾದ ರೈತರ ಅಭಿವೃದ್ಧಿಗೆ ಪೂರಕವಾದ ನೈಜ ಯೋಜನೆಗಳು ಕಂಡುಬರುತ್ತಿಲ್ಲ, ಇದರಿಂದ ರೈತರಿಗೆ ನಿರಾಸೆಯಾಗಿದೆ ಎಂದಿದ್ದಾರೆ.
ಕರ್ನಾಟಕದ ಕೃಷಿ ಮತ್ತು ರೈತರಿಗೆ ಅನುಕೂಲ ಕಲ್ಪಿಸುವಲ್ಲಿ ರಾಜ್ಯ ಬಜೆಟ್ ಹೇಗೆ ವಿಫಲವಾಗಿದೆ ಎಂಬುದರ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಅದರಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ಈ ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಪಟ್ಟಿ ಮಾಡಿದ ಅಂಶಗಳು:
- ಕೃಷಿಯು ರೈತರಿಗೆ ಆದಾಯವನ್ನು ನೀಡುತ್ತದೆಯೇ ಅಥವಾ ನಷ್ಟವನ್ನು ನೀಡುತ್ತದೆಯೋ, ಆದಾಯ ಬರುತ್ತಿದ್ದರೆ ಎಷ್ಟು ನಷ್ಟವಾಗುತ್ತಿದ್ದರೆ ಅದರ ಪ್ರಮಾಣ ಎಷ್ಟಿರುತ್ತದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಒಂದು ವೈಜ್ಞಾನಿಕವಾ ತಿಳುವಳಿಕೆ ಅಗತ್ಯವಿರುತ್ತದೆ. ಆ ದಿಕ್ಕಿನಲ್ಲಿ ರೈತರ ಆದಾಯ ಖಾತ್ರಿ ಆಯೋಗವನ್ನು ರಚಿಸಿ, ಅದರ ವರದಿಯನ್ನು ಸಮಾಜ ಮುಂದಿಡಬೇಕು. ಈ ವರದಿ ಆಧಾರದಲ್ಲಿ ರೈತರ ಆರ್ಥಿಕ ಕಾರ್ಯಕ್ರಮಗಳನ್ನು ಪ್ರಕಟಿಸಬೇಕು.
- ಸರ್ಕಾರದವು ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಿ ಬಿಡುವುದರಿಂದ ರೈತರಿಗೇನೂ ಆರ್ಥಿಕ ಶಕ್ತಿ ಬರುವುದಿಲ್ಲ. ಈ ಬೆಲೆಯು ಮಾರುಕಟ್ಟೆಯಲ್ಲಿ ಕನಿಷ್ಠಕ್ಕಿಂತ ಕನಿಷ್ಠಕ್ಕೆ ಜಾರದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಂತಹ ಸಂದರ್ಭದ ನಿರ್ವಹಣೆಗಾಗಿ ಆವರ್ತ ನಿಧಿಯನ್ನು ಸ್ಥಾಪನೆ ಮಾಡಬೇಕಾಗುತ್ತದೆ, ಆದರೆ ಅದನ್ನೂ ಮಾಡಿಲ್ಲ.
- ಅತಿವೃಷ್ಠಿ ಆಗುವಂತೆ ಮಳೆಯಿಂದ ಅಥವಾ ಬರಗಾಲ ಹಾಗೂ ಕೊರೊನಾದಂತಹ ಮಾರಕ ರೋಗಗಳು ಬಂದಾಗಲೇ ಸರ್ಕಾರ ತಕ್ಷಣ ಪರ್ಯಾಯ ಕಾರ್ಯಕ್ರಮಗಳನ್ನು ನೆರವೇರಿಸಲು ವಿಪತ್ತು ನಿಧಿಯನ್ನು ಸ್ಥಾಪಿಸುವುದು ತೀರಾ ಅತ್ಯಗತ್ಯವಾಗಿದೆ. ಯಾವುದೇ ವಿಪತ್ತಿನ ಸಂದರ್ಭದಲ್ಲಿ ಪದೇಪದೆ ಕೇಂದ್ರದ ಎದುರಿಗೆ ಅಂಗಲಾಚುವ ಬದಲು ರಾಜ್ಯ ಸರ್ಕಾರವೇ ಇದಕ್ಕೊಂದು ವಿಪತ್ತು ನಿಧಿಯನ್ನು ತೆರೆಯಬೇಕು.
- ದುಡಿಯುವ ವರ್ಗದ ಜನರಿಗೆ ಸಾಲಮನ್ನಾ ಮಾಡುವಂತಹ ಕಾರ್ಯಕ್ರಮಗಳನ್ನು ಸರ್ಕಾರ ಘೋಷಣೆ ಮಾಡಿಲ್ಲ. ಏಕೆಂದರೆ ರೈತರು ಮಾಡಿರುವ ಸಾಲವು ಆಹಾರ ಉತ್ಪಾದನೆಗೆ ಸರ್ಕಾರವು ನೀಡಿರುವ ಸಾಲವಾಗಿರುತ್ತದೆ. ರೈತರ ಸಾಲಮನ್ನಾದ ಜೊತೆಗೆ ರೈತರ ಖಾಸಗಿ ಸಾಲದಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟುನ ನಿಟ್ಟಿನಲ್ಲಿ ಸಾಲದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಸಂಪೂರ್ಣ ಬಡ್ಡಿಯಿಲ್ಲದೇ ಸಾಲವನ್ನು ನೀಡುವುದನ್ನು ಜಾರಿಗೊಳಿಸಬೇಕು.
- ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿಗಳ ಅನುಕೂಲಕ್ಕೆ ತಿದ್ದುಪಡಿಯಾದ ನೀತಿಗಳನ್ನು ಕೈಬಿಟ್ಟು ಮಾರುಕಟ್ಟೆಯನ್ನು ಸಂಪೂರ್ಣ ಆನ್ ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುವಂತೆ ರೂಪಿಸಬೇಕು.
- ನೀರಾವರಿ ಯೋಜನೆಯನ್ನು ಬೊಮ್ಮಾಯಿ ಸರ್ಕಾರದ ಅಲ್ಪಾವಧಿ ಸರ್ಕಾರ ಎಲ್ಲಾ ಯೋಜನೆಗಳನ್ನು ಅಲ್ಪಸ್ವಲ್ಪ ಹಂಚಿಕೆ ಮಾಡಿ ಯಾವುದುನ್ನೂ ಬಿಡುವುದಿಲ್ಲ, ಯಾವುದನ್ನೂ ಕಡೆಗಣಿಸುವುದಿಲ್ಲ ಎಂಬ ಸರ್ಕಾರದ ಕಾರ್ಯಕ್ರಮವನ್ನು ಕಾಲಮಿತಿಯೊಳಗೆ ಯಾವುದು ಮುಕ್ತಾಯಗೊಳ್ಳುವುದಿಲ್ಲ. ಯಾವುದೇ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು ಮತ್ತು ಮುಕ್ತಾಯಗೊಳಿಸಬೇಕು.
- ರೈತರ ಉತ್ಪನ್ನಗಳನ್ನು ಸಂಸ್ಕರಿಸಿ ರಫ್ತು ಮಾಡುವುದಕ್ಕೆ ಸರ್ಕಾರವು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನೀಡಬೇಕು.
- ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚು ಮಾಡುವುದು ಈ ಬಾರಿಯ ಕೃಷಿ ಬೆಳವಣಿಗೆ ಶೇಕಡಾ 2ರಷ್ಟು ಹೆಚ್ಚಾಗಿರುವುದು ಗಮನಾರ್ಹವಾಗಿದೆ. ಆದರೆ ಉತ್ಪಾದನೆಯನ್ನು ಸಮಾನವಾಗಿ ಅದರ ಮಾರುಕಟ್ಟೆಯನ್ನು ವಿಸ್ತರಿಸುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.
- ಹೈನುಗಾರಿಕೆ ಕೇವಲ ಪಶು ಚಿಕಿತ್ಸಾಲಗಳನ್ನು ನಿರ್ಮಾಣ ಮಾಡುವುದು, ಗೋಶಾಲೆ ಸಂಖ್ಯೆಯನ್ನು ಹೆಚ್ಚಿಸುವುದು. ಗೋವುಗಳ ದತ್ತು ಪ್ರೋತ್ಸಾಹಕ್ಕೆ ವಿಶೇಷ ಹೆಸರು ಇಡುವುದರಿಂದ ಯಾವುದೇ ಉತ್ತೇಜನ ಸಿಕ್ಕಂತೆ ಕಾಣುವುದಿಲ್ಲ.
- ಹಾಲಿನ ದರದಲ್ಲಿ ರೈತರಿಗೆ 10 ರೂಪಾಯಿ ಹೆಚ್ಚಿಗೆ ನೀಡುವ ಕಾರ್ಯಕ್ರಮವನ್ನು ರೂಪಿಸಿದರೆ, ಉಳಿದ ಕಾರ್ಯಕ್ರಮಗಳನ್ನು ಅವರೇ ನಿರ್ವಹಿಸುತ್ತಾರೆ.
- ರೇಷ್ಮೆ, ತೆಂಗು, ದಾಳಿಂಬೆ, ದ್ರಾಕ್ಷಿ, ತೊಗರಿ ಒಳಗೊಂಡಂತೆ ಎಲ್ಲಾ ಅಭಿವೃದ್ಧಿ ಬೋರ್ಡ್ ಅನ್ನು ನಿರ್ಮಾಣ ಮಾಡಬೇಕು.
- ನೀರಾವರಿ ಯೋಜನೆಗಳಲ್ಲಿ ಸರ್ಕಾರ ಘೋಷಣೆ ಮಾಡಿರುವ ಕೃಷ್ಣ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಮೇಕೆದಾಟು ಮತ್ತು ತುಂಗಭದ್ರಾ ಯೋಜನೆಗಳು ಸಂಪೂರ್ಣವಾಗಿ ಕಾಲಮಿತಿಯೊಳಗೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು.
- ರಾಜ್ಯದ ವಿದ್ಯುತ್ ಶಕ್ತಿ ಉತ್ಪಾದನೆಗೆ ಹೆಚ್ಚು ಅವಶ್ಯವಿರುವ ಸೌರ ವಿದ್ಯುತ್ ಉತ್ಪಾದನೆಗೆ ಗ್ರಾಮೀಣ ವಿದ್ಯಾವಂತರು ಯುವಕರು ದೊಡ್ಡ ಪ್ರಮಾಣದಲ್ಲಿ ಪ್ರತಿ ತಾಲೂಕಿನಲ್ಲಿ ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬೇಕೆಂದು ಸರ್ಕಾರ ಘೋಷಣೆ ಮಾಡಿ ದರ ನಿಗದಿ ಮಾಡಿ ಗ್ರಾಮೀಣ ರೈತರಿಗೆ ಮತ್ತು ರೈತರ ಮಕ್ಕಳಿಗೆ ಅವಕಾಶ ನೀಡಬೇಕಾಗಿದೆ.
- ಕೇವಲ ಕುರಿಗೆ ಸೀಮಿತವಾಗಿ ರೂಪಿಸುವಂತೆ ಹಸು ಸಾಕಾಣಿಕೆ ಗ್ರಾಮೀಣ ಕೋಳಿ ಸಾಕಾಣಿಕೆ, ಹಂದಿ, ಮೀನು ಈ ಎಲ್ಲಾ ಸಾಕುಪ್ರಾಣಿಗಳಿಗೆ ವಿಮಾ ಸೌಲಭ್ಯ ಒದಗಿಸಬೇಕು. ವಿಮಾ ಸೌಲಭ್ಯ ಆಯಾ ಕುಟುಂಬಗಳಿಗೆ ನೀಡಬೇಕು.
- ಕೃಷಿಯನ್ನು ಸಮಾಜ ವಿಜ್ಞಾನದ ಮೊದಲ ಪಾಠವಾಗಿ ಪಠ್ಯಪುಸ್ತಕದಲ್ಲಿ ಎಲ್ಲ ಮಕ್ಕಳು ಅಭ್ಯಾಸ ಮಾಡುವಂತೆ ಜಾರಿಗೊಳಿಸಬೇಕು
- ರೈತರ ಆತ್ಮಹತ್ಯೆಗೆ ಸಂಬಂಧಪಟ್ಟ ಹಾಗೆ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಐಎಸ್ಇಎಸ್ ರೈತರನ್ನು ಒಳಗೊಂಡತಹ ಸಮಿತಿಯನ್ನು ನೇಮಕ ಮಾಡಬೇಕು
- ರೈತರ ಎಲ್ಲಾ ಕೃಷಿ ಉಪಕರಣಗಳು ಶೇ.90ರಷ್ಟು ಸಹಾಯಧನವನ್ನು ಘೋಷಿಸಬೇಕು.
ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ:
Recommended Video
ಆರೋಗ್ಯ ಯಶಸ್ವಿನಿ ಯೋಜನೆ ಜಾರಿ, ಹನಿ ನೀರಾವರಿಗೆ ಎಲ್ಲಾ ರೈತರಿಗೂ ಶೇ.75ರಷ್ಟು ಸಹಾಯಧನ, ಪುಣ್ಯಕೋಟಿ ಯೋಜನೆ, ಮಂಡ್ಯ ಮೈಸೂರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಆರಂಭಕ್ಕೆ ಒತ್ತು, ರೈತ ಶಕ್ತಿ ಯೋಜನೆಗಳೆಲ್ಲ ನಿರೀಕ್ಷೆಗೆ ತಕ್ಕಂತೆ ಸಹಕಾರಿಯಾಗಲಿದೆ. ಸೆಕೆಂಡರಿ ಕೃಷಿ ನಿರ್ದೇಶನಾಲಯದ ಮೂಲಕ ರೈತರ ಆದಾಯ ದ್ವಿಗುಣ ಮಾಡಲು ಚಿಂತನೆ ನಡೆಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಹುಸಿಗೊಳಿಸಿದ್ದಾರೆ. ಅದೇ ರೀತಿ ಈ ಬಗ್ಗೆ ಬಜೆಟ್ ಮೇಲ್ನೋಟಕ್ಕೆ ಜನಪ್ರಿಯವಲ್ಲದ ಸಾಧಾರಣ ಬಜೆಟ್ ರೀತಿ ಕಾಣುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ ಕಾಣುತ್ತಿಲ್ಲ. ರೈತರ ನಿರೀಕ್ಷೆ ಹುಸಿಯಾಗಿದ್ದು, ತುಟಿಗೆ ತುಪ್ಪ ಸವರುವ ಕೆಲಸವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.