Karnataka Rains: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏಪ್ರಿಲ್ 15ರಿಂದ ಧಾರಾಕಾರ ಮಳೆ: ಜೊತೆಗಿರಲಿ ಛತ್ರಿ
ಬೆಂಗಳೂರು ಏಪ್ರಿಲ್ 15: ಬೆಂಗಳೂರಿನಲ್ಲಿ ಕಳೆದ ದಿನ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿದೆ. ಸಂಜೆಯಿಂದ (ಏಪ್ರಿಲ್ 14) ಶುರುವಾದ ಮಳೆ ರಾತ್ರಿವರೆಗೂ ಬಿಟ್ಟು ಬಿಡದೆ ಸುರಿದಿದೆ. ಇದರಿಂದಾಗಿ ಬಿಸಿಲಿನ ಬೇಗೆಗೆ ಹೈರಾಗಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ನಗರದ ವಿಜಯನಗರನ, ಮಲ್ಲೇಶ್ವರಂ, ಯಶವಂತಪರ, ರಾಜಾಜಿನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇನ್ನೂ ಮುಂದಿನ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ ತಿಂಗಳಲ್ಲೂ ಬೆಂಗಳೂರಿನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಯುಗಾದಿ ಬಳಿಕ ಒಮ್ಮೆ ಧಾರಾಕಾರ ಮಳೆಯಾಗಿದ್ದು ಬಿಟ್ಟರೆ ಕಳೆದ ದಿನದವರೆಗೂ ಹೆಚ್ಚು ಮಳೆ ಬಂದಿಲ್ಲ. ಕಳೆದ ದಿನ ಮಳೆಯಾದರೂ ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಇದೀಗ ಒಂದು ವಾರ ನಗರದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಹೌದು ಏಪ್ರಿಲ್ 15ರಿಂದ ಮುಂದಿನ ಒಂದು ವಾರ ಸಿಲಿಕಾನ್ ಸಿಟಿಯ ಹಲವೆಡೆ ಧಾರಾಕಾರ ಮಳೆಯಾಗುವ ಸೂಚನೆಯನ್ನು ಐಎಂಡಿ ಕೊಟ್ಟಿದೆ. ಅಲ್ಲದೇ ಇಂದು ಕೂಡ ತಾಪಮಾನ ಕಡಿಮೆಯಾಗಿರಲಿದ್ದು ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ. ಹೀಗಾಗಿ ಮಂಗಳವಾರವೂ ನಗರದಲ್ಲಿ ಮಳೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ.
ಕರ್ನಾಟಕದಾದ್ಯಂತ ಎಲ್ಲೆಲ್ಲಿ ಮಳೆ
ಇನ್ನೂ ರಾಜ್ಯದ ಸಂಪೂರ್ಣ ಹವಾಮಾನ ವರದಿ ತಿಳಿಯೋಣ. ಕರ್ನಾಟಕದ ಹಲವೆಡೆ ಮಾರ್ಚ್ನಿಂದಲೇ ಮಳೆ ಶುರುವಾಗಿದೆ. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ಬೀಳುತ್ತಲೇ ಇದೆ. ರಾಜ್ಯದ ಹಲವೆಡೆ ಏಪ್ರಿಲ್ 15ರಿಂದ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಭವಿಷ್ಯವನ್ನು ಐಎಂಡಿ ನುಡಿದಿದೆ. ಚಿಕ್ಕಮಗಳೂರಿನಲ್ಲಿ ಕಳೆದ ದಿನ (ಏಪ್ರಿಲ್ 14) ಆಲಿಕಲ್ಲು ಮಳೆಯಾಗಿದ್ದು, ಕೊಡಗಿನ ಹಲವೆಡೆ ಗಾಳಿಯೊಂದಿಗೆ ಮಳೆಯಾಗಿ ಹಸುಗಳು ಸಾವನ್ನಪ್ಪಿವೆ. ಜೊತೆಗೆ ಮರ ಬಿದ್ದು ಕಾರು ಜಖಂ ಆಗಿದೆ.

ಇಂದು ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ, ವಿಜಯನಗರ ಸೇರಿದಂತೆ ಹಲವೆಡೆ ಸಾಧಾರಣದಿಂದ ಧಾರಾಕಾರ ಮಳೆಯಾಗುವ ಸೂಚನೆ ನೀಡಲಾಗಿದೆ.
ಇನ್ನೂ ರಾಜ್ಯಾದ್ಯಂತ ಮುಂದಿನ ಒಂದು ವಾರ ಅಂದರೆ ಇಂದಿನಿಂದ (ಏಪ್ರಿಲ್ 15) ಏಪ್ರಿಲ್ 20ರವರೆಗೂ ಜೋರು ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಈ ಒಂದು ವಾರದಲ್ಲಿ ಕರಾವಳಿ ಭಾಗಗಳು, ಉತ್ತರ ಕನ್ನಡ ಭಾಗದ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೀದರ್, ಯಾಗದಿರಿ, ವಿಜಯಪುರ, ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಮಿಂಚು ಗಾಳಿ ಸಮೇತ ಮಳೆಯಾಗಲಿದೆ. ಅಲ್ಲದೆ ಶಿವಮೊಗ್ಗ, ಚಾಮರಾಜನಗ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ಮಂಡ್ಯ ಮೈಸೂರು, ರಾಮನಗರ ಮತ್ತಿತರೆಡೆ ಮಳೆಯಾಗಲಿದೆ.
ಹೀಗಾಗಿ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಶುರುವಾಗಿದ್ದು ಜನ ಮನೆಯಿಂದ ಹೊರ ಬರುವಾಗ ಜೊತೆಗೆ ಛತ್ರಿ ಇಟ್ಟುಕೊಂಡು ಓಡಾಡುವುದು ಉತ್ತಮ. ಜೊತೆಗೆ ಮಳೆಗಾಲದಲ್ಲಿ ಹೆಚ್ಚಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಎಚ್ಚರಿಕೆ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.












Click it and Unblock the Notifications