Karnataka Heat Wave: ವಾಯುಭಾರ ಕುಸಿತದ ಎಫೆಕ್ಟ್, ರಾಜ್ಯಕ್ಕೆ IMD ಕೊಟ್ಟ ಮುನ್ಸೂಚನೆ ಏನು?
ಬೆಂಗಳೂರು, ಫೆಬ್ರವರಿ 01: ಕರ್ನಾಟಕದಾದ್ಯಂತ ಫೆಬ್ರವರಿ 1ರಿಂದಲೇ ಅತ್ಯಧಿಕ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿತ್ತು. ರಾಜ್ಯದ ಜನರು ಬೇಸಿಗೆ ಆರಂಭವಾಯಿತು, ಬಿಸಿಲು ಈಗಲೇ ಮೈಸುಡುತ್ತಿದೆ ಎನ್ನುವಾಗ IMD ಸುಮಾರು 20 ಜಿಲ್ಲೆಗಳಿಗೆ ಮಳೆ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ಜನವರಿ ಅಂತ್ಯಕ್ಕೆ ಬದಲಾದ ಹವಾಮಾನ ಸನ್ನಿವೇಶದಲ್ಲಿ ಮಳೆಯ ಯಾವ ಲಕ್ಷಣವು ಇಲ್ಲ. ಫಸಲು ಕೈಗೆ ಬಂದ ರೈತರು ಆತಂಕಪಡುವ ಅಗತ್ಯವಿಲ್ಲ ಏಕೆಂದರೆ ಮಳೆ, ಮರೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ರಾಜ್ಯದಲ್ಲಿ ನಿರೀಕ್ಷಿತ ಮಳೆ ಇಂದಿನಿಂದ ಆಗದೇ, ರಾಜ್ಯಾದ್ಯಂತ ಒಣಹವೆಯ ವಿಸ್ತರಣೆಗೊಳ್ಳಲಿದೆ. ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುವ ಬಿಸಿಲಿನ ವಾತಾವರಣ, ರಾಜ್ಯವ್ಯಾಪಿ ವಿಸ್ತರಣೆಗೊಂಡಿದೆ. ಬಂಗಾಳಕೊಲ್ಲಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತವಾದರೂ ಸಹಿತ ರಾಜ್ಯದಲ್ಲಿ 'ಉಷ್ಣ ಅಲೆ' ಮುಂದುವರಿಯಲಿದೆ ಹೊರತು, ಮಳೆ ಬೀಳುವ ಯಾವುದೇ ಮುನ್ಸೂಚನೆಗಳು ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಿಂದ ಸ್ಪಷ್ಟವಾಗಿದೆ.

ಬಂಗಾಳಕೊಲ್ಲಿಯ ನೈಋತ್ಯ ಭಾಗದ ಪೂರ್ವ ದಿಕ್ಕಿನಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ.ವರೆಗೆ ಎತ್ತರದವರೆಗೆ ವಾಯುಭಾರ ಕುಸಿತ ಸಂಭವಿಸಿವೆ. ಬೇರೆ ಬೇರೆ ಭಾಗಗಳಿಂದ ಬರುವ ಗಾಳಿಯು ಇದೇ ದಿಕ್ಕಿನಲ್ಲಿ ಜಮಾವಣೆ ಆಗುತ್ತಿದೆ. ದಕ್ಷಿಣ ಕೇರಳದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಇದೆ ಎಂಬುದನ್ನು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ. ಈ ಕುರಿತು ಐಎಂಡಿ ಬೆಂಗಳೂರಿನ ಹವಾಮಾನ ತಜ್ಞ, ಕಚೇರಿ ಮುಖಸ್ಥರಾದ ಡಾ. ರಾಜವೇಲ್ ಮಾಣಿಕ್ಕಂ ಅವರು ಮಾಹಿತಿ ಪ್ರಕಟಿಸಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ಒಂದು ವಾರ ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಿಗೂ ಒಣಹವೆ ಮುಂದುವರಿಯಲಿದೆ. ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಆಗಿದ್ದು, ಚಳಿ ಸಂಪೂರ್ಣ ಮಾಯವಾಗಿದೆ. ಮಂಜಿನ ವಾತಾವರಣ, ಕೊಂಚ ಮಳೆ ನಿರೀಕ್ಷಿಸಿದ್ದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಮಂಡ್ಯ, ರಾಮನಗರ, ಮೈಸೂರು, ಹಾಸನ, ಚಾನರಾಜನಗರ, ಕೋಲಾರ,ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಹ ಬಿಸಿಲಿನ ಆರ್ಭಟಕ ಕಂಡು ಬರಲಿದೆ.
ಈಗಾಗಲೇ ಬಿಸಿಯ ಅಲೆ ಅನುಭವಕ್ಕೆ ಒಳಗಾಗಿದ್ದ ಉತ್ತರ ಒಳನಾಡಿನ ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗಲಿದೆ.

ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್
ಸದ್ಯ ರಾಜ್ಯದಲ್ಲಿ ಕಾರವಾರ, ಕಲಬುರಗಿಗಳಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇನ್ನೂಳಿದಂತೆ ಬಹುತೇಕ ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಕಂಡು ಬಂದಿದೆ. ನಿತ್ಯವು ರಾಜ್ಯಾದ್ಯಂತ 30ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.
14 ರಿಂದ 19 ಕನಿಷ್ಠ ತಾಪಮಾನ ಏರಿಕೆ
ಬೆಂಗಳೂರಿನಲ್ಲಿ ಕಳೆದ ವಾದ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು, ಅದೀಗ 18ರಿಂದ 19 ಡಿಗ್ರಿ ಸೆಲ್ಸಿಯಸ್ಗೆ ಏರಿಕೆ ಕಂಡಿದೆ. ಈ ಮೂಲಕ ಮಳೆ, ಮಂಜುವಾತಾವರಣಕ್ಕೆ, ಚಳಿಗೆ ಮುಕ್ತಿ ದೊರೆತಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಸಂಪೂರ್ಣವಾಗಿ ಬೇಸಿಗೆ ಆವರಿಸುತ್ತಿರುವುದು ಇಂದಿನ ವರದಿಯಿಂದ ಖಚಿತವಾಗಿದೆ.












Click it and Unblock the Notifications