Karnataka Rains: ಮುಂದಿನ 05 ದಿನ ಭಾರಿ ಮಳೆ ಮುನ್ಸೂಚನೆ, ಇಂದು 12 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್'
ಬೆಂಗಳೂರು, ಸೆಪ್ಟಂಬರ್ 30: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತುಸು ಬಿಡುವು ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಶುರುವಿಟ್ಟುಕೊಂಡಿದ್ದಾನೆ. ರಾಜ್ಯದ ದಕ್ಷಿಣ ಒಳನಾಡಿನಾದ್ಯಂತ ಸಕ್ರಿಯವಾಗಿರುವ ಮಳೆ ಮುಂದಿನ 03 ರಿಂದ 05 ದಿನಗಳ ಕಾಲ ಆರ್ಭಟಿಸಲಿದೆ. ಈ ಪೈಕಿ ಭಾನುವಾರ ಈ ಜಿಲ್ಲೆಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆರಾಯ ಸಕ್ರಿಯವಾಗಿದ್ದು, ಇಂದು ಭಾನುವಾರ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಈ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತ ಅತ್ಯಧಿಕ ಭಾರಿ ಮಳೆ ಸುರಿಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನೂ ಕರಾವಳಿಯ ದಕ್ಷಿಣ ಕನ್ನಡ ಉಡುಪಿ, ಗದಗ ಮತ್ತು ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಧಾರಾಕಾರ ಮಳೆ ಆಗುವ ಸಂಬಂಧ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಚಿಕ್ಕಮಗಳೂರು, ಹಾಸನ, ಕೊಡುಗು ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆಯ ಪ್ರಯುಕ್ತ 'ಯೆಲ್ಲೋ ಅಲರ್ಟ್' ನೀಡಿರುವ ಬಗ್ಗೆ ಮುನ್ಸೂಚನಾ ವರದಿಯಲ್ಲಿ ಹವಾಮಾನ ತಜ್ಞರು ತಿಳಿಸಿದ್ದಾರೆ.
ಸಾಧಾರಣದಿಂದ ಭಾರಿ ಮಳೆ ಎಚ್ಚರಿಕೆ
ಉಳಿದಂತೆ ಮುಂದಿನ ಮೂರರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗಲಿದೆ. ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆ, ಹೆಚ್ಚಾದ ಗಾಳಿಯ ತೀವ್ರತೆಯಿಂದ ರಾಜ್ಯದ ದಕ್ಷಿಣ ಭಾಗದಲ್ಲೂ ಮಳೆ ತೀವ್ರತೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಅಧಿಕ ಮಳೆ
ಇನ್ನೂ ಕಳೆದ ಒಂದೆರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಕಂಡು ಬಂದಿದೆ. ಶನಿವಾರ ರಾತ್ರಿ ದೊಡ್ಡಾನೆಕುಂದಿಯಲ್ಲಿ 1 ಸೆಂಟಿ ಮೀಟರ್ಗೂ ಹೆಚ್ಚು (107mm) ಮಳೆ ದಾಖಲಾಗಿದೆ. ಈ ಮೂಲಕ ಸೆಪ್ಟಂಬರ್ನಲ್ಲಿ ಅತ್ಯಧಿಕ ಮಳೆ ದಾಖಲಾದಂತಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಮುಂದಿನ ಒಂದು ವಾರ ನಗರದಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ ಎಂದು ತಿಳಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಎಚ್ಎಎಲ್ ನಲ್ಲಿ ಉತ್ತಮ ಮಳೆ ದಾಖಲಾಗಿದೆ. ಇಲ್ಲಿ 7 ಮಿ.ಮೀ, ಚಾಮರಾಜನಗರ ಎಂಎಂ ಹಿಲ್ಸ್ 5 ಮಿ.ಮೀ, ಮಂಡ್ಯ 4ಮಿ.ಮೀ, ಚಿಕ್ಕಬಳ್ಳಾಪುರ 4ಮಿ.ಮೀ, ಕೊಳ್ಳೆಗಾಲ 3ಮಿ.ಮೀ, ಗಂಡ್ಲುಪೇಟೆಯಲ್ಲಿ 2 ಮಿ.ಮೀ. ನಷ್ಟು ಮಳೆ ದಾಖಲಾಗಿದೆ.












Click it and Unblock the Notifications