ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ: ಗರಿಷ್ಠ, ಸಂಗ್ರಹಣೆ
ಬೆಂಗಳೂರು, ಜು. 21: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂರು ದಿನುಗಳಿಂದ ಅಬ್ಬರಿಸುತ್ತಿದ್ದ ವರುಣ ಸೋಮವಾರ ಕೊಂಚ ತಣ್ಣಗಾಗಿದ್ದಾನೆ. ಆದರೆ ಮಳೆ ಅಪಾರ ಪ್ರಮಾಣದ ಹಾನಿ ಮಾಡಿದ್ದು ರಾಜ್ಯದಲ್ಲಿ 9 ಜನರನ್ನು ಬಲಿಪಡೆದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಕಡಿಮೆಯಾಗಿದೆ. ಮಡಿಕೇರಿ, ನಾಪೋಕ್ಲು, ಕುಶಾಲನಗರ, ಸಿದ್ದಾಪುರ, ಶ್ರೀಮಂಗಲ, ಶಾಂತಳ್ಳಿ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾದ ವರದಿಯಾಗಿದೆ. [ಜೋಗ ಮೈದುಂಬಿದೆ, ಹೋಗೋಣ ಬರ್ತೀರಾ ಆಕಡೆಗೆ]
ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದ್ದು ದಕ್ಷಿಣ ಒಳನಾಡು ಸಾಧಾರಣ ಮಳೆ ಪಡೆದುಕೊಳ್ಳಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಲಾಶಯ ನೀರಿನ ಮಟ್ಟ | |
---|---|
ಆಲಮಟ್ಟಿ | 513ಮೀ (519 ಮೀ) |
ಲಿಂಗನಮಕ್ಕಿ | 1,779 (1819 ಅಡಿ) |
ಭದ್ರಾ | 161(186 ಅಡಿ) |
ತುಂಗಭದ್ರಾ | 1613 (1633 ಅಡಿ) |
ಕೆಆರ್ ಎಸ್ | 108 (124 ಅಡಿ) |
ಹಾರಂಗಿ | 2856 (2859 ಅಡಿ) |
ಹೇಮಾವತಿ | 2910(2992 ಅಡಿ) |
ಕಬಿನಿ | 2283 (2 284 ಅಡಿ) |
ಘಟಪ್ರಭಾ | 2108 (2175 ಅಡಿ) |
ಮಲಪ್ರಭಾ | 2050 (2079 ಅಡಿ) |
ಶೃಂಗೇರಿ ಜಲಾವೃತ
ಕೊಲ್ಲುರಿನಲ್ಲಿ 32 ಸೆಂ ಮಿ ಮಳೆಯಾದ್ದು ಆಗುಂಬೆಯಲ್ಲಿ 27 ಸೆಂ ಮೀ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮಳೆ ಬಿರುಸು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಮಂಡಗದ್ದೆ ಬಳಿ ತುಂಗಾನದಿಯ ನೀರು 2 ಅಡಿಗೂ ಹೆಚ್ಚು ಹರಿಯುತ್ತಿದೆ.
ಚಿಕ್ಕಮಗಳೂರು ಸ್ಥಬ್ಧ
ಧಾರಾಕಾರ ಮಳೆಗೆ ತತ್ತರಿಸಿರುವ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪ, ಶೃಂಗೇರಿ, ಎನ್ ಆರ್ ಪುರ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಬೆಂಗಳೂರಲ್ಲಿ ಧಾರಾಕಾರ ಮಳೆ
ಸೋಮವಾರ ಧಾರಾಕಾರ ಮಳೆ ಸುರಿದಿದ್ದರಿಂದ, ವಿವಿಧೆಡೆ ಹತ್ತು ಮರಗಳು ನೆಲಕ್ಕೆ ಉರುಳಿವೆ. ಶೇಷಾದ್ರಿಪುರದಲ್ಲಿ ಮನೆಯೊಂದರ ಮೇಲೆ ಮತ್ತು ದೊಮ್ಮಲೂರಿನಲ್ಲಿ ಕಾರಿನ ಮೇಲೆ ಮರ ಬಿದ್ದಿದೆ. ಸಂಜೆ ಆರಂಭವಾದ ಮಳೆ ಒಂದೂವರೆ ತಾಸಿಗೂ ಹೆಚ್ಚು ಕಾಲ ಸುರಿಯಿತು. ಇದರಿಂದಾಗಿ ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ವೃತ್ತ, ರಾಜಾಜಿನಗರ, ಕೇಂಬ್ರಿಡ್ಜ್ ಲೇಔಟ್, ಜೆ.ಸಿ. ನಗರ, ಹನುಮಂತನಗರ, ಇಟ್ಟಮಡು ಹಾಗೂ ಕೋರಮಂಗಲದಲ್ಲಿ ಸೇರಿದಂತೆ ಕೆಲವೆಡೆ ಮರಗಳು ಧರೆಗುರುಳಿದ್ದು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಸಹಜ ಸ್ಥಿತಿಗೆ ಭಟ್ಕಳ
ಭಟ್ಕಳದಲ್ಲಿ 24 ಗಂಟೆಯಲ್ಲಿ 31ಸೆಂ.ಮೀ. ಮಳೆ! ಸುರಿದಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಅಸ್ತವ್ಯಸ್ತವಾಗಿದ್ದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕರಾವಳಿಯ ಕುಮಟಾ, ಅಂಕೋಲಾ, ಹೊನ್ನಾವರ ಭಾಗದಲ್ಲೂ ಸೋಮವಾರ ಸಂಜೆಯಿಂದ ಮಳೆ ಇಳಿಮುಖವಬಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಭಾರೀ ಮಳೆಯಾದ ವರದಿಯಾಗಿಲ್ಲ.
ಬಹುತೇಕ ತುಂಬಿದ ಕೆಆರ್ ಎಸ್
ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಕೆ ಆರ್ ಎಸ್ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಕಬಿನಿ ಜಲಾಶಯ ಭರ್ತಿಯಾಗಿ 15 ದಿನಗಳೇ ಕಳೆದದ್ದು ಇದೀಗ ಕೆಆರ್ ಎಸ್ ಬಹುತೇಕ ಭರ್ತಿಯಾಗಿದೆ.