Monsoon Rain: ಕರ್ನಾಟಕದ ಮುಂದಿನ ನಾಲ್ಕು ವಾರಗಳ ಮಳೆ ವಿವರ : ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಆಗಸ್ಟ್ನಲ್ಲಿ ಸಂಪೂರ್ಣವಾಗಿ ಕೈಕೊಟ್ಟಿದ್ದ ಮಳೆ, ಸೆಪ್ಟೆಂಬರ್ ತಿಂಗಳಿನಲ್ಲಿ ಸಾಧಾರಣವಾಗಿದೆ. ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದರೂ, ನದಿಗಳ ನೀರಿನ ಹರಿವು ಹೆಚ್ಚಾಗುವಂತೆ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಕರ್ನಾಟಕದ ಮುಂದಿನ ನಾಲ್ಕು ವಾರಗಳ ಹವಾಮಾನ ವರದಿ ನೀಡಿದ್ದು, ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ.

ಮುಂದಿನ ನಾಲ್ಕು ವಾರಗಳ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗ್ನೇಯ ಭಾರತದಿಂದ ನೈಋತ್ಯ ಮಾನ್ಸೂನ್ ಮುಂದಿನ ವಾರದಿಂದ ಚಲಿಸಲಿದೆ. ಅಕ್ಟೋಬರ್ 2ರಿಂದ ಮಧ್ಯಭಾರತದಿಂದ ಸಾಗಲಿದೆ. ಅಕ್ಟೋಬರ್ ಕೊನೆಯ ವಾರದವರೆಗೆ ರಾಜ್ಯದಲ್ಲಿ ಮಳೆ ಇರಲಿದ್ದು, ನಂತರ ಮುಂಗಾರು ಮುಕ್ತಾಯವಾಗಲಿದೆ ಎಂದು ಹೇಳಿದೆ.
ಈ ಜಿಲ್ಲೆಗಳಲ್ಲಿ ಉತ್ತಮ ಮಳೆ!
ಸೆಪ್ಟೆಂಬರ್ ಕೊನೆಯ ವಾರದಲ್ಲಿ ರಾಜ್ಯದ ಹಲವು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಕೆಆರ್ ಎಸ್ ಒಡಲು ಖಾಲಿಯಾಗುವ ಆತಂಕ ಎದುರಾಗಿತ್ತು, ಮತ್ತೆ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಮುಂದಿನ ನಾಲ್ಕು ವಾರಗಳು ರಾಜ್ಯದ ಪಾಲಿಗೆ ನಿರ್ಣಾಯಕವಾಗಿದ್ದು, ಮಳೆ ಆಗದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಸೆಪ್ಟೆಂಬರ್ ನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾದರೂ ಕಾವೇರಿ ನದಿ ಮೈದುಂಬಿ ಹರಿಯಲಿಲ್ಲ, ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಕೂಡ ನದಿಗಳ ನೀರಿನ ಹರಿವು ಹೆಚ್ಚಾಗುವಂತೆ ಮಳೆಯಾಗಲಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಅದು ಅನಿಶ್ಚಿತತೆಯಿಂದ ಇದ್ದ ಕಾರಣ ಕೃಷಿ ಚಟುವಟಿಕೆಗಳು ಕೂಡ ಸರಿಯಾಗಿ ಸಾಗಿಲ್ಲ.
ಅಕ್ಟೋಬರ್ ತಿಂಗಳಿನಲ್ಲಿ ಬರುತ್ತಾ ಮಳೆ
ಅಕ್ಟೋಬರ್ ತಿಂಗಳಿನಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡು ಅಬ್ಬರಿಸಿದರೆ ರಾಜ್ಯದ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ. ಇಲ್ಲವಾದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಿಸುವ ಆತಂಕ ಇದೆ.
ಅಕ್ಟೋಬರ್ ತಿಂಗಳ ಮೊದಲ ಮೂರು ವಾರಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾದರೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದರೆ ಕಬಿನಿ, ಹಾರಂಗಿ, ಕೆಆರ್ ಎಸ್ ಜಲಾಶಯಗಳಿಗೆ ನೀರು ಹರಿದು ಬರಲಿದೆ. ಹೇಮಾವತಿ ಜಲಾಶಯ ಕೂಡ ಈ ಬಾರಿ ತುಂಬದ ಕಾರಣ ಹಾಸನ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ.












Click it and Unblock the Notifications