Karnataka Rain Report: ಮೇ 17 ದಿನಗಳಲ್ಲಿ ರಾಜ್ಯಕ್ಕೆ ಭರ್ಜರಿ ಮಳೆ ದಾಖಲು, ನಿಮ್ಮ ಜಿಲ್ಲೆಗಳಿಗೆ ಎಷ್ಟಾಗಿದೆ?
ಬೆಂಗಳೂರು, ಮೇ 18: ಕರ್ನಾಟಕದಲ್ಲಿ ಮುಂಗಾರು ಮಳೆ ಬರುವ ಮೊದಲೇ ಪೂರ್ವ ಮುಂಗಾರು (Pre Monsoon Rain) ಮಳೆ ಅಬ್ಬರಿಸುತ್ತಿದೆ. ಮೇ ತಿಂಗಳ ಆರಂಭದಿಂದ ಹಿಡಿದು ಈವರೆಗೆ ಭರ್ಜರಿ ಮಳೆ ದಾಖಲಾಗಿದೆ. ಈ ಮೂಲಕ ಬೇಸಿಗೆ, ಬಿಸಿ ತಾಪಮಾನ ಭಯ ದೂರವಾಗಿಸಿದ್ದು, ವಾತಾವರಣ ತಂಪಾಗಿದೆ.
ಪ್ರತಿ ವರ್ಷ ಮೇ ತಿಂಗಳಲ್ಲಿ ಉತ್ತಮ ಮಳೆ ಬರುತ್ತದೆಯಾದರೂ ಈ ಭಾರಿ ಬಂದ ಮಳೆ ಅತ್ಯಧಿಕವಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ. ಫೆಬ್ರವರಿಯಿಂದ ತೀವ್ರ ಶಾಖಕ್ಕೆ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಮೇ ತಿಂಗಳ ಮಳೆ ತಂಪೆರೆದಿದೆ. ಮೇ 1ರಿಂದ 17ರವರೆಗೆ ಕರ್ನಾಟಕದಲ್ಲಿ ದಾಖಲೆ ಮಟ್ಟದಲ್ಲಿ ಮಳೆ ಸುರಿದಿದೆ.

ಕರ್ನಾಟಕಕ್ಕೆ ವಾಡಿಕೆಯಂತೆ ಈ ಹದಿನೇಳು ದಿನಗಳ (ಮೇ 1-17) ಅವಧಿಯಲ್ಲಿ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಸೇರಿ ವಾಡಿಕೆ 34 ಮಿಲಿ ಮೀಟರ್ ಮಳೆ ಆಗಬೇಕು. ಆದರೆ 51 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಬರೋಬ್ಬರಿ ಶೇ. 51ರಷ್ಟು ಅಧಿಕ ಮಳೆ ದಾಖಲಾದಂತಾಗಿದೆ. ಜಿಲ್ಲೆಗಳು ಮತ್ತು ವಿಭಾಗವಾರು ಮಳೆ ಮಾಹಿತಿಗೆ ಮುಂದೆ ಓದಿ.
ವಿಭಾಗವಾರು ಮಳೆ ದಾಖಲಾತಿ ವಿವರ
ಮೇ ತಿಂಗಳ ಅದೇ ಹದಿನೇಳು ದಿನಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಭಾಗದಲ್ಲಿ ವಾಡಿಕೆಗಿಂತ ಶೇ. 44 ರಷ್ಟು ಅಧಿಕ ಮಳೆ (72 ಮಿ.ಮೀ.) ದಾಖಲಾಗಿದೆ. ಇನ್ನು ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇಕಡಾ 80ರಷ್ಟು ಅಧಿಕ ಮಳೆ (38 ಮಿ.ಮೀ.) ಬಿದ್ದಿದೆ. ಮಲೆನಾಡಿನ ಭಾಗದ ಜಿಲ್ಲೆಗಳಲ್ಲಿ ಒಟ್ಟು ವಾಡಿಕೆಗಿಂತ 46ರಷ್ಟು (69 ಮಿ.ಮೀ.) ಹೆಚ್ಚು ಮಳೆ ಬಿದ್ದಿದೆ.
ಈ ಮೂಲಕ ಮೇ ತಿಂಗಳಲ್ಲಿ ಕರ್ನಾಟಕ ಈಗಾಗಲೇ ಅತ್ಯಧಿಕ ಮಳೆ ಸ್ವೀಕರಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ ಅವಧಿಯಲ್ಲಿ ಆದ ಮಳೆ ಎಷ್ಟು?
ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯೇ ಆಗಿರಲಿಲ್ಲ. ಮಾರ್ಚ್ ತಿಂಗಳ ಹದಿನೇಳು ದಿನದ ಅವಧಿಯಲ್ಲಿ (ಮಾರ್ಚ್ 1-17) ದಕ್ಷಿಣ ಒಳನಾಡಿನಲ್ಲಿ ಭಾಗಕ್ಕೆ ಶೇಕಡಾ -26ರಷ್ಟು ಮಳೆ ಕೊರತೆ ಆಗಿತ್ತು. ಅಂದು ಈ ಭಾಗದಲ್ಲಿ ವಾಡಿಕೆ ಅಂದರೆ ಸಾಮಾನ್ಯವಾಗಿ 96ಮಿಲಿ ಮೀಟರ್ ಮಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಆಗಿದ್ದು ಕೇವಲ 72 ಮಿಲಿ ಮೀಟರ್ ಮಾತ್ರ. ಉಳಿದ ಕರಾವಳಿ, ಉತ್ತರ ಒಳನಾಡು ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಾರ್ಚ್ ಉತ್ತಮ ಮಳೆ ಆಗಿತ್ತು.
ಮಳೆಗೆ ಕಾರಣವಾದ ಬದಲಾದ ವಾತಾವರಣ
ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಸಂದರ್ಭದಲ್ಲಿ ದಿಢೀರನೇ ವಾತಾವರಣದಲ್ಲಿ ಆದ ಬದಲಾವಣೆ, ಸಮುದ್ರ ಮಟ್ಟದಲ್ಲಿ ಉಂಟಾದ ಸುಳಿಗಾಳಿ, ಸ್ಟ್ರಾಫ್, ತೇವಭರಿತ ಗಾಳಿ ಬೀಸುವ ಪ್ರಮಾಣ ಏರಿಕೆ ಹಾಗೂ ಕರ್ನಾಟಕದ ಭೂಮಿ ಮೇಲ್ಮೈನಲ್ಲಿ ಉಂಟಾದ ಸ್ಟ್ರಫ್ ಪ್ರಭಾವದಿಂದ ನಿರಂತರವಾಗಿ ಮಳೆ ಆಗುತ್ತಿದೆ.

ಮಾರ್ಚ್ ಅಂತ್ಯಕ್ಕೆ ವಾತಾವರಣದಲ್ಲಿ ಕೊಂಚ ಬದಲಾವಣೆ ಆಗುತ್ತಿದ್ದಂತೆ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆ ಸುರಿಯಲು ಆರಂಭಿಸಿದೆ. ಇಂದಿನ ಈ ವಾತಾವರಣವೇ ಮುಂಗಾರು ಮಳೆ (Monsoon rain) ಇದೇ ತಿಂಗಳೇ ಭಾರತ ಆಗಮಿಸಲು ಕಾರಣ ಅಂತಲೂ ಭಾವಿಸಲಾಗಿದೆ. ಮೇ ಅಂತ್ಯಕ್ಕೆ ಮುಂಗಾರು ಕೇರಳ ಪ್ರವೇಶಿಸಿ ನಂತರ ಹಂತ ಹಂತವಾಗಿ ಭಾರತ ವ್ಯಾಪಿಸಲಿದೆ ಎಂದು ಐಎಂಡಿ ಎಚ್ಚರಿಕೆ ಕೊಟ್ಟಿದೆ.
ಶುಕ್ರವಾರ ರಾಜ್ಯದಲ್ಲಿ ಶೇ.193 ರಷ್ಟು ಹೆಚ್ಚು ಮಳೆ
ಇನ್ನೂ ಕಳೆದ 24 ಗಂಟೆಯಲ್ಲಿ ಅಂದರೆ ಶುಕ್ರವಾರದಿಂದ ಶನಿವಾರ ಬೆಳಗ್ಗೆವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಇಲ್ಲಿ ವಾಡಿಕೆ 2 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಬರೋಬ್ಬರಿ 10ಮಿಲಿ ಮೀಟರ್ ಮಳೆ ಆಗಿದೆ. ಇದರಿಂದ ಈ ಭಾಗದಲ್ಲಿ ಅತ್ಯಧಿಕ 381 ಮಿ.ಮೀ. ಮಳೆ ದಾಖಲಾದಂತಾಗಿದೆ.
ಅದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ನಿರೀಕ್ಷೆಯಷ್ಟು ಮಳೆ (04 ಮಿ.ಮೀ.) ಆದರೆ, ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇಕಡಾ 215 ಅಧಿಕ ಮಳೆ, ಮಲೆನಾಡು ಭಾಗದಲ್ಲಿ ಶೇಕಡಾ 210 ಹೆಚ್ಚು ಮಳೆ ಕಂಡು ಬಂದಿದೆ. ನೆನ್ನೆ ಒಂದೇ ದಿನ ರಾಜ್ಯದಲ್ಲಿ ವಾಡಿಕೆ (03ಮಿ.ಮೀ.) ಗಿಂತ 09 ಮಿ.ಮೀ. (ಶೇ.193 ರಷ್ಟು) ಅಧಿಕ ಮಳೆ ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ವರದಿ ಮಾಹಿತಿ ನೀಡಿದೆ.
ಮುಂದಿನ ಒಂದು ವಾರ ನಗರದಲ್ಲಿ ಇದೇ ರೀತಿ ಮಳೆ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಮಳೆ ಆಗುತ್ತಿದೆ. ವಾತಾವರಣ ಹೀಗೆ ತಂಪಾಗಿರಲಿದೆ ಎಂದು ಐಎಂಇ ಮುನ್ಸೂಚನೆ ನೀಡಿದೆ.












Click it and Unblock the Notifications