ಕರ್ನಾಟಕ: ಗಾಯಗೊಂಡ ಆನೆ ಮರಿಗೆ ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ
ಬೆಂಗಳೂರು, ಅಕ್ಟೋಬರ್ 06: ಸಫಾರಿ ವೇಳೆ ಗಾಯಗೊಂಡಿದ್ದ ಆನೆ ಮರಿ ಕಂಡು ಮರುಗಿದ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರು ತುರ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಾಗೂ ರಾಹುಲ್ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಬುಧವಾರ ತೆರಳಿದ್ದರು. ಈ ಸಂದರ್ಭದಲ್ಲಿ ವೇಳೆ ಗಾಯಗೊಂಡಿದ್ದ ಆನೆ ಮರಿ ಕಂಡು ಮರುಗಿದ್ದಾರೆ. ಸಫಾರಿ ಮುಗಿಸಿ ಬಂದ ಬಳಿಕ ರಾಹುಲ್ ಗಾಂಧಿ ಕೂಡಲೇ ಮುಖ್ಯಮಂತ್ರಿಗಳಿಗೆ ಪತ್ರ ಒಂದನ್ನು ಬರೆದಿದ್ದಾರೆ. ಆನೆ ಮರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.

ಕೆಲವು ದಿನಗಳಿಂದ ನಡೆದ ಭಾರತ್ ಜೋಡೋ ಯಾತ್ರೆಗೆ ಕೊಂಚ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಬಿನಿಯ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ನಂತರ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗೆ ನಾಗರಹೊಳೆಗೆ ಭೇಟಿ ಕೊಟ್ಟಿದ್ದರು. ಕೆಲ ಕಾಲ ಸಫಾರಿ ಹೊರಟು ಅರಣ್ಯ ಸೊಬಗು ಕಣ್ತುಂಬಿಕೊಂಡರು.
ಮರಿ ಆನೆ ಕಂಡು ರಾಹುಲ್ ಪತ್ರ
ಸಫಾರಿ ತೆರಳಿದ್ದ ವೇಳೆ ರಾಹುಲ್ ಗಾಂಧಿ ಅವರಿಗೆ ತಾಯಿಯ ಜೊತೆಗಿದ್ದ ಮರಿ ಆನೆ ಕಂಡಿದೆ. ಆದರ ಆ ಮರಿ ಆನೆ ಗಾಯಗೊಂಡಿದ್ದು, ನೋವಿನಿಂದ ಪರಿತಪಿಸುತ್ತಿದೆ. ಹೀಗಾಗಿ ಸಫಾರಿ ಮುಗಿಸಿದ ಕೂಡಲೇ ಅವರು ಮುಖ್ಯಮಂತ್ರಿಗಳಿಗೆ ಚಿಕಿತ್ಸೆ ಕುರಿತು ಪತ್ರ ಬರೆದಿದ್ದಾರೆ.
ಮರಿ ಆನೆಗೆ ಬಾಲ ಹಾಗೂ ಸೊಂಡಿಲಿನಲ್ಲಿ ಗಾಯಗಳು ಆಗಿವೆ. ನೋವಿನಿಂದ ಅದು ನರಳಾಡುತ್ತಿದ್ದು, ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ನಿಸರ್ಗದತ್ತವಾಗಿ ಗುಣವಾಗಬಹುದು ಎಂದು ಅಭಿಪ್ರಾಯವು ಇದೆ. ಆದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳ ಹಾಗೂ ಮೂಕ ಪ್ರಾಣಿಗಳು ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದಾಗ ನೈಸರ್ಗಿಕ ಪ್ರಕ್ರಿಯೆ ಹೊರತಾಗಿ ಯೋಚಿಸಬೇಕಾಗುತ್ತದೆ. ಹೀಗಾಗಿ ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಆದಷ್ಟ ಬೇಗನೆ ಆನೆ ಮರಿಗೆ ಚಿಕಿತ್ಸೆ ಕೊಡಿಸಿ ರಕ್ಷಿಸಿ. ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆತರೆ ಆ ಪುಟ್ಟ ಆನೆ ಮರಿಯ ಜೀವ ಉಳಿಯುತ್ತದೆ ಎಂಬ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಕೂಡಲೇ ನೆರವು ನೀಡುತ್ತೀರಿ ಎಂಬ ಭರವಸೆ ಇದೆ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
ಸೋನಿಯಾ ದೇವಾಲಯಕ್ಕೆ ಭೇಟಿ
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿಜಯದಶಮಿ ಹಬ್ಬದ ಹಿನ್ನೆಲೆ ಎಚ್.ಡಿ.ಕೋಟಿ ತಾಲ್ಲೂಕಿನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಕಬಿನಿ ಹಿನ್ನಿರಿನಲ್ಲಿರುವ ಭೀಮನಕೊಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸೋನಿಯಾ ಗಾಂಧಿ ಮಹದೇಶ್ವರನ ದರ್ಶನ ಪಡೆದಿದ್ದಾರೆ.












Click it and Unblock the Notifications