DK Shivakumar: ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲ್ಲ; ಜೆಡಿಎಸ್ 20 ದಾಟಲ್ಲ: ಡಿ ಕೆ ಶಿವಕುಮಾರ್ ಭವಿಷ್ಯ
ಮಂಡ್ಯ,ಮೇ7: ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ 20 ಕ್ಷೇತ್ರದ ಮೇಲೆ ದಾಟುವುದಿಲ್ಲ. ಜೆಡಿಎಸ್ ಪಕ್ಷಕ್ಕೆ ಅವಕಾಶ ಕೊಟ್ಟು ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ನಾಗಮಂಗಲದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರಿಗೆ ನೆರವಾಗಬೇಕು ಎಂದು ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.

ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ಯುವನಿಧಿ ಕಾರ್ಯಕ್ರಮದ ಮೂಲಕ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 2 ವರ್ಷದವರೆಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು.
ಈ ಯೋಜನೆಗಳನ್ನು ಕುಮಾರಸ್ವಾಮಿ, ಸುರೇಶ್ ಗೌಡ, ಬೊಮ್ಮಾಯಿ ಅವರು ನೀಡಲು ಸಾಧ್ಯವೇ? ನಿಮ್ಮ ಮನೆ ಬಾಗಿಲಿಗೆ ಲಕ್ಷ್ಮೀ ಬಂದಿದ್ದಾಳೆ. ನೀವು ಆ ಲಕ್ಷ್ಮಿಯನ್ನು ಮನೆಯೊಳಗೆ ಕರೆದುಕೊಳ್ಳಬೇಕು. ಕೇವಲ ಮಾತು ಕೊಡುವುದಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ನಮ್ಮ ಸರ್ಕಾರದ ಬಂದ ಮೊದಲ ಸಚಿವ ಸಂಪುಟದಲ್ಲೇ ಈ ಯೋಜನೆಗಳು ಜಾರಿಯಾಗಲಿವೆ. ಇಂದು ನಾನು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಕೂತು ಚರ್ಚೆ ಮಾಡಿ 13ರಂದು ಕಾಂಗ್ರೆಸ್ ಗೆಲ್ಲಲಿದೆ, 15ರಂದು ಸರ್ಕಾರ ರಚನೆ ಮಾಡಿ ಮೊದಲ ಸಚಿವ ಸಂಪುಟದಲ್ಲೇ ಯೋಜನೆ ಜಾರಿ ಮಾಡಬೇಕು ನಿರ್ಧರಿಸಿದ್ದೇವೆ.
ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಕೂತೂ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಗಬೇಕಲ್ಲವೇ? ಪ್ರಣಾಳಿಕೆ ಮಾಡುವಾಗ ಚೆಲುವರಾಯಸ್ವಾಮಿ ಅವರು ಮೈಶುಗರ್ ಕಾರ್ಖಾನೆ ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ನೀವೇ ಇದಕ್ಕೆ ಪರಿಹಾರ ನೀಡಬೇಕು ಎಂದರು. ಅದಕ್ಕಾಗಿ ಮಂಡ್ಯದಲ್ಲಿ ಸರ್ಕಾರದಿಂದ ನೂತನ ಸಕ್ಕರೆ ಕಾರ್ಖಾನೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇವೆ. ರೈತರ ಬೆಳೆಗೆ ಬೆಂಬಲ ನೀಡುತ್ತೇವೆ ಎಂದರು.

ಬಿಜೆಪಿ ಅವಧಿಯಲ್ಲಿ ದಿನಬೆಳಗಾದರೆ ಹಗರಣಗಳು. ಬಿಜೆಪಿಯಲ್ಲಿ ಒಬ್ಬ ಲಂಚಕ್ಕೆ ಮತ್ತೊಬ್ಬ ಮಂಚಕ್ಕೆ ಹೋದ. ಅರಸಿಕೆರೆ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸಗೌಡ, ಮಧುಬಂದಗಾರಪ್ಪ ಎಲ್ಲರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಅವರೆಲ್ಲರೂ ದಡ್ಡರೇ? ಬಿಜೆಪಿ ನಾಯಕರುಗಳಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಪುಟ್ಟಣ್ಣ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದ್ದಾರೆ. ಪರಿಷತ್ ಸದ್ಯತ್ವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮಧು ಮಾದೇಗೌಡರು ಹಾಗೂ ದಿನೇಶ್ ಗೂಳಿಗೌಡರು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ ಡಿ.ಕೆ. ಶಿವಕುಮಾರ್ ಕೈ ಬಲಪಡಿಸಬೇಕು ಎಂದರು.
ಇಂದು ಭತ್ತ, ಕೊಬರಿ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. 20 ಸಾವಿರ ಇದ್ದ ಕೊಬ್ಬರಿ ಬೆಲೆ 9 ಸಾವಿರಕ್ಕೆ ಇಳಿದಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ನೀವು ಯೋಚನೆ ಮಾಡಬೇಡಿ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಚೆಲುವರಾಯಸ್ವಾಮಿ ಸರ್ಕಾರದಲ್ಲಿರುತ್ತಾರೆ. ನಾವು ನಿಂತು ನಿಮ್ಮ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ನೀವೆಲ್ಲರೂ ನನ್ನ ಮಿತ್ರ ಚೆಲುವರಾಯಸ್ವಾಮಿ ಅವರನ್ನು ಗೆಲ್ಲಿಸಬೇಕು.












Click it and Unblock the Notifications