ಶುಕ್ರವಾರ ನಡೆದ ತುರುಸಿನ ರಾಜಕೀಯ ಬೆಳವಣಿಗೆಗಳ ವಿವರ
ನಾಳೆ (ಶನಿವಾರ) ಸಂಜೆ ಕರ್ನಾಟಕ ರಾಜಕೀಯಕ್ಕೆ ಹೊಸ ತಿರುವು ಸಿಗಲಿದೆ, ಇಡೀ ದೇಶದ ಕಣ್ಣು ನಾಳೆ ಸಂಜೆ ವೇಳೆಗೆ ವಿಧಾನಸೌಧದ ಮೇಲೆಯೇ ನೆಟ್ಟಿರುತ್ತದೆ. ಅಧಿಕಾರದ ಗದ್ದುಗೆ ಮೇಲೆ ಬಿಜೆಪಿ ಕೂರುತ್ತದೆಯೋ ಅಥವಾ ಜೆಡಿಎಸ್-ಕಾಂಗ್ರೆಸ್ ಮೈತ್ರಿಯೋ? ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆ ಇದೆ.
ಬಿಜೆಪಿಯು ನಾಳೆ ಸಂಜೆ 4 ಗಂಟೆಗೆ ಬಹುಮತ ಸಾಬೀತು ಪಡಿಸಲೇ ಬೇಕಿದೆ, ಹಾಗಾಗದಲ್ಲಿ ಬಹುಮತ ಇರುವ ಜೆಡಿಎಸ್-ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೆ ಹಿಡಯಲಿದೆ. ಬಿಜೆಪಿಯೂ ಅಧಿಕಾರದ ರೇಸ್ನಲ್ಲಿ ತುರುಸಿನ ಪೈಪೋಟಿ ನೀಡುತ್ತಿದ್ದು, ಸುಲಭಕ್ಕೆ ಸೋಲೊಪ್ಪಿಕೊಳ್ಳುವ ಲಕ್ಷಣಗಳಿಲ್ಲ.
ಇಂದು ದಿನವೆಲ್ಲಾ ವಿವಿಧ ರಾಜಕೀಯ ಬೆಳವಣಿಗೆಗಳಾಯಿತು. ಮೂರು ಪಕ್ಷದ ರಾಜಕಾರಣಿಗಳಿಗೆ ಇಂದು ಬಿಡುವಿಲ್ಲದ ದಿನ. ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲೂ ಕೆಲವು ಪ್ರಮುಖ ಘಟನೆಗಳು ನಡೆದವು. ಇಂದು (ಶುಕ್ರವಾರ) ಏನೇನೆಲ್ಲಾ ನಡೆದವು ಒಂದು ಝಲಕ್ ನೋಡೋಣ ಬನ್ನಿ.

ಸುಪ್ರೀಂಕೋರ್ಟ್ ಆದೇಶ ಬಿಜೆಪಿಗೆ ಶಾಕ್
ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ತ್ರಿ ಸದಸ್ಯ ಪೀಠ ಶನಿವಾರ ಬಹುಮತ ಸಾಬೀತು ಮಾಡುವಂತೆ ಸೂಚನೆ ನೀಡಿತು.

ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ
ನಾಳೆ ವಿಧಾನಸಭೆ ಅಧಿವೇಶನ ನಡೆಸಲು ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ವೀರಾಜಪೇಟೆ ಶಾಸಕ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲರು ಆಯ್ಕೆ ಮಾಡಿದರು. ಅವರಿಗೆ ಪ್ರಮಾಣ ವಚನ ಬೋಧನೆಯೂ ನಡೆಯಿತು.

ಬೋಪಯ್ಯ ಆಯ್ಕೆ ವಿರೋಧಿಸಿ ಮತ್ತೆ ಕೋರ್ಟ್ಗೆ
ರಾಜ್ಯಪಾಲರು ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿರುವುದರ ವಿರುದ್ದ ಕಾಂಗ್ರೆಸ್-ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮತ್ತೆ ರಾಜ್ಯಪಾಲರ ನಿರ್ಣಯದ ವಿರುದ್ಧ ಸುಪ್ರೀಂ ಮೆಟ್ಟಿಲೇರಿತು. ಇಂದೇ ವಿಚಾರಣೆ ನಡೆಸುವಂತೆ ಕಾಂಗ್ರೆಸ್ ಪಕ್ಷ ಸುಪ್ರೀಂ ಅನ್ನು ಒತ್ತಾಯಿಸಿದೆ.

ಸಭೆಗಳ ಮೇಲೆ ಸಭೆ ನಡೆಸಿದ ನಾಯಕರು
ಹೈದರಾಬಾದ್ನ ಐಶಾರಾಮಿ ಹೊಟೆಲ್ ಒಂದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಹೋಗಿ ತಲುಪಿದರು. ಅಲ್ಲಿ ದಿನ ಪೂರ್ತಿ ಸಭೆಗಳ ಮೇಲೆ ಸಭೆಗಳು ನಡೆದವು, ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಮಾತನಾಡಿ ಎಲ್ಲರ ಬೆಂಬಲ ಬಯಸಿದರು, ಸಂಜೆ ವೇಳೆಗೆ ಸಿದ್ದರಾಮಯ್ಯ ಸಹ ಹೈದರಾಬಾದ್ ತಲುಪಿದರು ಅವರೂ ಕೂಡ ಸಭೆ ನಡೆಸಿದರು.

ಸಿದ್ದರಾಮಯ್ಯಗೆ ಶಾಸಕಾಂಗ ನಾಯಕನ ಪಟ್ಟ
ಸಂಜೆ ವೇಳೆಗೆ ಹೈದರಾಬಾದ್ನ ಹೊಟೆಲ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲಾಯಿತು. ವಿಶೇಷವೆಂದರೆ ಈ ಸಭೆಯಲ್ಲಿ ಕುಮಾರಸ್ವಾಮಿ ಕೂಡಾ ಭಾಗವಹಿಸಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿಸಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ನಿನ್ನೆ ನಡೆದ ಸಭೆಯಲ್ಲಿ ಪರಮೇಶ್ವರ್ ಅನ್ನು ಶಾಸಕಾಂಗ ಸಭೆಯ ನಾಯಕರನ್ನಾಗಿಸಲಾಗಿತ್ತು.

ಇಬ್ಬರು ಶಾಸಕರ ಹೈಜಾಕ್
ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು, ತಮ್ಮ ಪರವಾಗಿದ್ದ ಇಬ್ಬರು ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದರು. ಆದರೆ ಇಬ್ಬರೂ ನಮ್ಮ ಪಕ್ಷಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದರು. ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಕಾರಣದಿಂದ ಶಾಸಕರು ಹೈದರಾಬಾದ್ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಕಾಂಗ್ರೆಸ್ಗೆ ರೆಡ್ಡಿ ಗಾಳ ಆಡಿಯೋ ರಿಲೀಸ್
ಮಾಜಿ ಬಿಜೆಪಿ ಮಂತ್ರಿ ಜನಾರ್ದನ ರೆಡ್ಡಿ ಅವರು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದನ್ನು ಕಾಂಗ್ರೆಸ್ನ ಉಗ್ರಪ್ಪ ಬಿಡುಗಡೆ ಮಾಡಿದರು. ಆಡಿಯೋ ಕ್ಲಿಪ್ನಲ್ಲಿ ಬಸನಗೌಡ ದದ್ದಲ ಅವರಿಗೆ ಹಣ ಹಾಗೂ ಮಂತ್ರಿ ಪದವಿಯ ಆಮೀಷ ಒಡ್ಡಿರುವ ಬಗ್ಗೆ ಮಾತನಾಡಿರುವುದು ದಾಖಲಾಗಿತ್ತು. ಆದರೆ ಜನಾರ್ದನ ರೆಡ್ಡಿ ಅವರು ಆಡಿಯೋವನ್ನು ನಕಲಿ ಎಂದರು.












Click it and Unblock the Notifications