ಗಡ್ಡಕ್ಕೆ ಬೆಂಕಿ : ಅತೃಪ್ತರ ಆಕ್ರೋಶ ತಣಿಸಲು ಹಿರಿಯ ಕಾಂಗ್ರೆಸ್ ಮಂತ್ರಿಗಳ ರಾಜೀನಾಮೆ?
ಬೆಂಗಳೂರು, ಜುಲೈ 06 : ಗಡ್ಡಕ್ಕೆ ಧಗಧಗನೆ ಬೆಂಕಿ ಹತ್ತಿರುವ ಸಂದರ್ಭದಲ್ಲಿ, ಭುಗಿಲೆದ್ದಿರುವ ಆಕ್ರೋಶದ ಜ್ವಾಲೆಯನ್ನು ತಣಿಸಲು ಬಾವಿಯನ್ನು ತೋಡಲು ಕಾಂಗ್ರೆಸ್ ಮುಂದಾಗಿದೆ. ಕ್ರೈಮ್ಯಾಕ್ಸ್ ಹಂತಕ್ಕೆ ತಲುಪಿರುವ ಕರ್ನಾಟಕ ರಾಜಕೀಯ ಬೃಹನ್ನಾಟಕ ಬಹುರೋಚಕ ಹಂತಕ್ಕೆ ತಲುಪಿದೆ.
ರಾಜಕೀಯ ಅಂಗಳದಲ್ಲಿ ಹಾಗಾಗಬಹುದು, ಹೀಗಾಗಬಹುದು ಎಂದು ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಡಿಕೆ ಶಿವಕುಮಾರ್ ಅವರು ಅತೃಪ್ತರನ್ನು ಮನವೊಲಿಸುತ್ತಾರಾ? ಡಿಕೆಶಿ ಮನವೊಲಿಕೆಗೆ ಬಗ್ಗಿ ರಾಜೀನಾಮೆ ಹಿಂದೆ ಪಡೆಯುತ್ತಾರಾ? ಅತೃಪ್ತರು ಬಿಜೆಪಿ ಸೇರುತ್ತಾರಾ? ಅಥವಾ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಸರಕಾರ ರಚಿಸಲು ಆಹ್ವಾನಿಸುತ್ತಾರಾ?
ಮೈತ್ರಿ ಸರಕಾರ ಉಳಿಯಲ್ಲ ಎಂಬ ಬಗ್ಗೆ ದೇವೇಗೌಡರಿಗೆ ಮುಂಚೆಯೇ ಗೊತ್ತಾ?
ಇವುಗಳಲ್ಲಿ ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ, ಅಷ್ಟರಲ್ಲಿ ಒಂದು ಸುದ್ದಿ ವಿಧಾನಸೌಧದ ಮೊಗಸಾಲೆಯಿಂದ ಹೊರಬಿದ್ದಿದೆ. ಅದೇನೆಂದರೆ, ಅತೃಪ್ತರನ್ನು ತೃಪ್ತಿಪಡಿಸಲು ಸಂಪುಟದಲ್ಲಿರುವ ಕೆಲ ಹಿರಿಯ ಸಚಿವರಿಗೆ ರಾಜೀನಾಮೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿದ್ದು, ಅತೃಪ್ತರಿಗೆ ಆ ಸ್ಥಾನಗಳನ್ನು ಕೊಟ್ಟು ಬಾಯಿ ಮುಚ್ಚಿಸುವ ನಿರ್ಧಾರಕ್ಕೆ ಬಂದಿದೆ.
ಆದರೆ, ಈ ಆಮಿಷಗಳಿಗೆ ಬಂಡಾಯ ಶಾಸಕರು ಒಪ್ಪುತ್ತಾರಾ? ರಾಮಲಿಂಗಾ ರೆಡ್ಡಿ ಅಂಥ ಹಿರಿಯ, ನಿಷ್ಠಾವಂತ ನಾಯಕರೇ ರಾಜೀನಾಮೆ ಬಿಸಾಕಿದ್ದಾರೆಂದರೆ, ಕಾಂಗ್ರೆಸ್ಸಿನಲ್ಲಿನ ಆಂತರಿಕ ಕಚ್ಚಾಟ ಯಾವ ಮಟ್ಟಿಗೆ ತಲುಪಿದೆ ಎಂಬುದನ್ನು ಊಹಿಸಬಹುದು. ಹಲವಾರು ತಿಂಗಳುಗಳ ಕಾಲ ತಮ್ಮಲ್ಲಿ ಹುದುಗಿಸಿಟ್ಟಿದ್ದ ಕುರ್ಚಿಯ ಆಸೆ ಸಿಗದಿದ್ದರಿಂದ ಬಂಡಾಯ ಶಾಸಕರು ಜ್ವಾಲಾಮುಖಿಯಂತೆ ಸ್ಫೋಟಿಸಿದ್ದಾರೆ.
ದೋಸ್ತಿ ಸರ್ಕಾರದ ಅಂತ್ಯ? : ಕ್ಷಣ ಕ್ಷಣದ ಮಾಹಿತಿ Live Updates
ಮೂಲಗಳ ಪ್ರಕಾರ, ಮೈತ್ರಿ ಸರಕಾರದಲ್ಲಿ ಮಂತ್ರಿಗಳಾಗಿರುವ ಹಿರಿಯ ಶಾಸಕರಾದ ಕೆಜೆ ಜಾರ್ಜ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯುಟಿ ಖಾದರ್ ಮುಂತಾದವರಿಗೆ ರಾಜೀನಾಮೆ ನೀಡಲು ನಿರ್ದೇಶನ ನೀಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಕೆಲ ತಿಂಗಳ ಹಿಂದೆಯಷ್ಟೇ, ಬಂಡಾಯದ ಬಿಸಿ ಮುಟ್ಟಿಸಿದ್ದ ಎಂಬಿ ಪಾಟೀಲ, ಆರ್ ವಿ ದೇಶಪಾಂಡೆ ಮುಂತಾದವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿತ್ತು.
ಹೋಗಿದ್ದು 12 ಜನ, ರಾಜೀನಾಮೆ ಕೊಟ್ಟಿದ್ದು 11 ಶಾಸಕರು!
ಆದರೆ, ಕಳೆದ ಬಾರಿ ಸಂಪುಟ ವಿಸ್ತರಣೆ ಮಾಡಿದಾಗ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಬದಲು ಸ್ವತಂತ್ರವಾಗಿ ಗೆದ್ದಿದ್ದ ಶಾಸಕರಿಗೆ ಕಾಂಗ್ರೆಸ್ ಮಣೆ ಹಾಕಿತೋ, ಆವಾಗಲೇ ಅತೃಪ್ತಿಯ ನೀರು ಕುದಿಯಲು ಆರಂಭಿಸಿತ್ತು. ಇದೀಗ ಎಲ್ಲವೂ ಸ್ಪೋಟಗೊಂಡಿದ್ದು, ಇದನ್ನು ಶಮನ ಮಾಡಲು ವಿಭಿನ್ನ ಯತ್ನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೈಹಾಗಬೇಕಾಗಿದೆ.