ಆತ್ಮಾವಲೋಕನ ಸಭೆಗಳು ನಡೆಯುತ್ತಿರುವುದು ನೋಡಿದರೆ ಬಿಜೆಪಿಯೇ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ: ಕಾಂಗ್ರೆಸ್ನಿಂದ ಸರಣಿ ಗೇಲಿ
ಬೆಂಗಳೂರು, ಜೂನ್ 26: ಕರ್ನಾಟಕದಲ್ಲಿನ ಹೀನಾಯ ಸೋಲಿಗೆ ಬಿಜೆಪಿ ಆತ್ಮಾವಲೋಕನ ಸಭೆಗಳನ್ನು ನಡೆಸುತ್ತಿದೆ. ಈ ಸಭೆಗಳಲ್ಲಿ ಕಾರ್ಯಕರ್ತರ ನಡುವೆ ಜಟಾಪಟಿಗಳು ನಡೆಯುತ್ತಿವೆ. ಕಾರ್ಯಕರ್ತರು ತಮ್ಮದೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಆರೋಪಗಳು ಸಭೆಯಲ್ಲಿ ಕೇಳಿಬಂದಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಆತ್ಮಾವಲೋಕನ ಸಭೆಗಳು ನಡೆಯುತ್ತಿರುವುದು ನೋಡಿದರೆ ಬಿಜೆಪಿ ಪಕ್ಷವೇ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ' ಎಂದು ಗೇಲಿ ಮಾಡಿದೆ.

'ಪಕ್ಷದೊಳಗಿನ ಆಂತರಿಕ ಕಲಹವನ್ನು ನಿಭಾಯಿಸಲಾಗದ ನಳೀನ್ ಕುಮಾರ್ ಕಟೀಲ್ ಅವರದ್ದು ಅಸಾಮರ್ಥ್ಯ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯವಿದೆಯೇ ಬಿಜೆಪಿ? ಬಿಜೆಪಿಯಲ್ಲಿ ಎಲ್ಲರೂ ಸದಾ ಚೂರಿ ಹಿಡಿದುಕೊಂಡೇ ಓಡಾಡುತ್ತಿರುವಂತಿದೆ, ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಳ್ಳಲು' ಎಂದು ಟೀಕಿಸಿದೆ.
ಇದೇ ವೇಳೆ, ಈಶ್ವರಪ್ಪ ಹೇಳಿಕೆ ಟಾಂಗ್ ನೀಡಿರುವ ಕಾಂಗ್ರೆಸ್, 'ಬಾಂಬೆ ಟೀಮ್ ಈಗ ಬಿಜೆಪಿಯಲ್ಲಿ ಅನಾಥರ ಟೀಮ್ ಆಗಿದೆ. 'ವಲಸಿಗ vs ಮೂಲ' ಎಂಬ ಒಳಬೇಗುದಿಗೆ ಈಶ್ವರಪ್ಪ ತುಪ್ಪ ಸುರಿದಿದ್ದಾರೆ' ಎಂದು ಕಟುಕಿದೆ.
'ವಲಸೆ ಬಂದವರಿಂದಲೇ ಶಿಸ್ತು ಮಾಯವಾಗಿದೆ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೀರಾ ಅಥವಾ ಈಶ್ವರಪ್ಪರನ್ನೇ ಬಾಯಿ ಮುಚ್ಚಿಸುತ್ತೀರಾ ಬಿಜೆಪಿ' ಎಂದು ಪ್ರಶ್ನಿಸಿದೆ.

ನಾಯಕನಿಲ್ಲದ ಬಿಜೆಪಿ, ನಾವಿಕನಿಲ್ಲದ ಹಡಗಿನಂತಾಗಿ ಮುಳುಗಿದೆ, ನೆಲ ಕಚ್ಚುವುದೊಂದೇ ಬಾಕಿ ಎಂದೂ ಗೇಲಿಯಾಡಿದೆ.
ಬಿಜೆಪಿಯಲ್ಲಿ ಒಬ್ಬರನ್ನೊಬ್ಬರು ಸೋಲಿಸುವ ಅವಲೋಕನ ನಡೆಯುತ್ತಿದೆ ಎಂದಿರುವ ಕಾಂಗ್ರೆಸ್, 'ಬಿಜೆಪಿಯಲ್ಲಿ ಈಗ ಸೋಲಿನ ಆತ್ಮಾವಲೋಕನದ ಹೆಸರಲ್ಲಿ ಸಂತೋಷ ಕೂಟ ಹಾಗೂ BSY ಕೂಟದ ನಡುವೆ ಒಬ್ಬರನ್ನೊಬ್ಬರು ಸೋಲಿಸುವ ಅವಲೋಕನ ನಡೆಯುತ್ತಿದೆ' ಎಂದು ಟೀಕಿಸಿದೆ.
'ಈ ಸೋಲಿನ ಅವಲೋಕನಾ ಸಭೆಗಳಿಗೆ ಜೋಶಿ, ಸಂತೋಷ್ ಅವರುಗಳು ಬಾಗವಹಿಸದೆ, ತಮ್ಮ ಶಿಷ್ಯಪಡೆಯನ್ನು ಮುಂದೆ ಬಿಟ್ಟಿರುವುದೇಕೆ ಬಿಜೆಪಿ? ಹೀನಾಯ ಸೋಲಿಗೆ ಅವರಿಬ್ಬರೇ ಕಾರಣರಲ್ಲವೇ, ಅವರೇ ಇಲ್ಲದಿದ್ದರೆ ಹೇಗೆ?' ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ ಎಂದೂ ಕಾಂಗ್ರೆಸ್ ಛೇಡಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್- ಬಾಯಿ ತೆರೆದರೆ ಹೊಲಸು ಮಾತುಗಳು.
ಆರ್ ಅಶೋಕ್ - ತಾನೇನು ಮಾತಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ.
ಡಾ ಅಶ್ವತ್ಥ ನಾರಾಯಣ- ಸದಾ ಗಂಡಸ್ಥನದ ಬಗ್ಗೆಯೇ ಚಿಂತೆ.
ಬಸವರಾಜ ಬೊಮ್ಮಾಯಿ - ಪ್ರತಾಪ್ ಸಿಂಹನನ್ನೇ ಎದುರಿಸಲಾಗದವರು ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications