ಯಾರಿಗೂ ಬೇಡವಾದ 'ಮುಜರಾಯಿ' ಖಾತೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕಲರವ
"ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಯಾವತ್ತು ಫಲಕೊಡದೆ ಇರದು. ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಂಡರೆ, ಎಲ್ಲಾ ಖಾತೆಯು ದೇವರ ಖಾತೆಯೇ" ಇದು ರಾಜ್ಯ ಮುಜರಾಯಿ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮಾತು.
ಸಚಿವ ಸ್ಥಾನ ಕೊಟ್ಟಂತಾಗಬೇಕು, ಆದರೆ, ಅದು ಅಷ್ಟು ಪ್ರಭಾವೀ ಇಲಾಖೆಯಾಗಿರಬಾರದು ಎನ್ನುವುದೇನಾದರೂ ಇದ್ದರೆ ಅದು ಮುಜರಾಯಿ ಇಲಾಖೆ. ಆದರೆ, ಈ ಖಾತೆಯನ್ನು ಯಡಿಯೂರಪ್ಪ ನೀಡಿದಾಗ, ಖುಷಿಯಿಂದಲೇ ಈ ಜವಾಬ್ದಾರಿಯನ್ನು ವಹಿಸಿಕೊಂಡ ಕೋಟ, ಈ ಖಾತೆಯಲ್ಲೀಗ ಸಂಚಲನ ಮೂಡಿಸುತ್ತಿದ್ದಾರೆ.
ಖಾತೆಯಾವುದಾದರೇನು, ನಿಭಾಯಿಸಲು ಇಚ್ಚಾಶಕ್ತಿ ಇರಬೇಕೆಂದು ತೋರಿಸಿಕೊಟ್ಟಿರುವ ಸಚಿವರು, ಹಲವು ಸುಧಾರಣಾ ಕ್ರಮಗಳನ್ನು ಇಲಾಖೆಯಲ್ಲಿ ಜಾರಿಗೆ ತಂದು, ಇಲಾಖೆಯ ಮಹತ್ವನ್ನು ತೋರಿಸಿಕೊಡುತ್ತಿದ್ದಾರೆ.
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ರಾಜಕೀಯ ಎನ್ನುವುದೇ ಆಕಸ್ಮಿಕವಾಗಿ ಬಂದಂತಹ ಉಡುಗೊರೆ. ಹಂತ ಹಂತವಾಗಿ ಬೆಳೆಯುತ್ತಾ, ತಮ್ಮ ನಿಷ್ಕಳಂಕ ವ್ಯಕ್ತಿತ್ವದಿಂದ, ರಾಜ್ಯ ರಾಜಕೀಯದಲ್ಲಿ ಈ ಹಂತಕ್ಕೆ ಬಂದು ನಿಂತಿದ್ದಾರೆ. ಕಳೆದ ಕೆಲವು ತಿಂಗಳಿನಲ್ಲಿ, ಕೋಟ ಪೂಜಾರಿ, ತೆಗೆದುಕೊಂಡ ಮಹತ್ವದ ಕ್ರಮಗಳು:

ಮುಜರಾಯಿ ಇಲಾಖೆಗೆ ನಿಜವಾಗಿಯೂ ಕಳೆ ಬಂದಿದ್ದು ಕೋಟ ಶ್ರೀನಿವಾಸ ಪೂಜಾರಿಯವರಿಂದ
ಮುಜರಾಯಿ ಇಲಾಖೆಗೆ ನಿಜವಾಗಿಯೂ ಅರ್ಥ/ಕಳೆ ಬಂದಿದ್ದು ಕೋಟ ಶ್ರೀನಿವಾಸ ಪೂಜಾರಿಯವರಿಂದ ಎಂದರೆ ತಪ್ಪಾಗಲಾರದು. ಹಿಂದಿನ ತಮ್ಮ ಅವಧಿಯಲ್ಲೂ ಮತ್ತೀಗ, ಯಡಿಯೂರಪ್ಪನವರಿಗೆ ವಿಶೇಷ ಒತ್ತಡವನ್ನು ಹಾಕಿ, ಇಲಾಖೆಗೆ ಹೆಚ್ಚಿನ ಅನುದಾನವನ್ನು ತರುವಲ್ಲಿ ಸಚಿವರು ಯಶಸ್ವಿಯಾಗುತ್ತಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯಗಳ ಜೀರ್ಣೋದ್ದಾರಕ್ಕೆ ಕಾರಣರಾಗಿದ್ದಾರೆ.

ಇಲಾಖೆಗೆ ಒಂದು ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ
ಇಲಾಖೆಗೆ ಒಂದು ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಸಚಿವ ಕೋಟ ಪೂಜಾರಿ, ಈ ಪೈಕಿ 650 ಸಿಬ್ಬಂದಿಗಳಿಗೆ ದೇವಸ್ಥಾನದಿಂದ ಬರುವ ಆದಾಯದಿಂದ ವೇತನ ನೀಡುವ ನಿರ್ಧಾರವನ್ನು ತೆಗೆದುಕೊಂಡರು. ಗುತ್ತಿಗೆ ಆಧಾರದಲ್ಲಿರುವ ಸಿಬ್ಬಂದಿಗಳ ವೇತನ ಪರಿಷ್ಕರಣೆ, ಪಿಎಫ್, ಇಎಸ್ಐ ಸೌಲಭ್ಯ ನೀಡುವ ವಿಚಾರದಲ್ಲಿ ಸಿಎಂ ಜೊತೆ ಚರ್ಚಿಸಿರುವ ಸಚಿವರಿಂದ ಸೂಕ್ತ ಕ್ರಮದ ಭರವಸೆ ಬಂದಿದೆ.

ಹಿಂದೂ ದೇವಾಲಯಗಳಿಂದ ಬರುವ ಆರ್ಥಿಕ ಸಂಪನ್ಮೂಲ
ಹಿಂದೂ ದೇವಾಲಯಗಳಿಂದ ಬರುವ ಆರ್ಥಿಕ ಸಂಪನ್ಮೂಲಗಳು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಮೀಸಲು ಎನ್ನುವ ಪ್ರಮುಖ ನಿರ್ಧಾರವನ್ನು ಕೋಟ ಶ್ರೀನಿವಾಸ ಪೂಜಾರಿ ತೆಗೆದುಕೊಂಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಬರುವ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ ಅದೇ ದೇವಾಲಯಗಳ ಅಭಿವೃದ್ಧಿಗೆ ಬಳಸುವ ಪ್ರಮುಖ ನಿರ್ಧಾರವನ್ನು ಕೋಟ ಶ್ರೀನಿವಾಸ ಪೂಜಾರಿ ತೆಗೆದುಕೊಂಡಿದ್ದಾರೆ. ಜೊತೆಗೆ, ಅನ್ಯ ಧರ್ಮದವರ ಯಾವುದೇ ಕಾರ್ಯಕ್ರಮಗಳಿಗೆ ಹಿಂದೂ ದೇವಾಲಯದಲ್ಲಿನ ಆದಾಯದ ಒಂದು ಪೈಸೆಯನ್ನೂ ಬಳಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಮುಜರಾಯಿ ಇಲಾಖೆ ಬಂದಿದೆ.

ಸಾಮೂಹಿಕ ವಿವಾಹ ನಡೆಸುವ 'ಸಪ್ತಪದಿ'
ರಾಜ್ಯದಲ್ಲಿನ ಬಡವರಿಗೆ ಅನುಕೂಲವಾಗಲೆಂದು ರಾಜ್ಯದ ಪ್ರಮುಖ ಮುಜರಾಯಿ ದೇವಾಲಗಳಲ್ಲಿ ಸಾಮೂಹಿಕ ವಿವಾಹ ನಡೆಸುವ 'ಸಪ್ತಪದಿ' ಎನ್ನುವ ಪ್ರಮುಖ ಯೋಜನೆಯನ್ನು ಸಚಿವರು ಜಾರಿಗೆ ತಂದಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಅಂತರ್ ಜಾತಿ ವಿವಾಹಕ್ಕೂ ಪ್ರೋತ್ಸಾಹ ನೀಡುವ (ಪೋಷಕರ ಒಪ್ಪಿಗೆ ಇದ್ದರೆ) ನಿರ್ಧಾರಕ್ಕೆ ಬರಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ, ಉತ್ತಮ ಆದಾಯವಿರುವ ರಾಜ್ಯದ 110 ದೇವಾಲಯಗಳಲ್ಲಿ 2020ರ ಏ .26ರಂದು ಸಾಮೂಹಿಕ ವಿವಾಹ ನಡೆಸಲು ನಿರ್ಧಾರ.

ಪ್ರಚಾರ ರಥಯಾತ್ರೆ
ಐವತ್ತು ಸಾವಿರ ಪ್ರೋತ್ಸಾಹ ಧನದ ಮೂಲಕ ಸಪ್ತಪದಿ ಸಾಮೂಹಿಕ ವಿವಾಹದ ಪ್ರಚಾರಕ್ಕೆ ರಾಜ್ಯದ ಹನ್ನೆರಡು ದೇವಸ್ಥಾನಗಳಿಂದ ಪ್ರಚಾರ ರಥಯಾತ್ರೆ ನಡೆಸಲು ಸಚಿವರು ನಿರ್ಧರಿಸಿದ್ದಾರೆ. ಬೆಂಗಳೂರಿನ ಬನಶಂಕರಿ, ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಮಣ್ಯ, ಉಡುಪಿಯ ಕೊಲ್ಲೂರು, ದ.ಕನ್ನಡದ ಕುಕ್ಕೇ, ಬೆಳಗಾವಿಯ ಯಲ್ಲಮ್ಮ, ಹಾಸನದ ಹಾಸನಾಂಬೆ, ನಂಜನಗೂಡಿನ ಶ್ರೀಕಂಠೇಶ್ವರ, ಮೈಸೂರಿನ ಚಾಮುಂಡೇಶ್ವರಿ, ತುಮಕೂರಿನ ಯಡಿಯೂರು, ಕೋಲಾರದ ಚಿಕ್ಕತಿರುಪತಿ, ಕೊಪ್ಪಳದ ಹುಲಿಗಮ್ಮ, ಮಂಡ್ಯದ ನಿಮಿಷಾಂಬ ದೇವಾಲಯಗಳಲ್ಲಿ ಯಾತ್ರೆ ಸಾಗಲಿದೆ.

ಮದ್ಯದಂಗಡಿಗೆ ದೇವರ ಹೆಸರು ಬೇಡ
ಮದ್ಯದಂಗಡಿಗೆ ನಮ್ಮ ಸಮುದಾಯದಲ್ಲಿನ ದೇವರ ಹಾಗೂ ರಾಷ್ಟ್ರೀಯ ಪುರುಷರ ಹೆಸರನ್ನ ಸೇರಿಸದಿರುವಂತೆ ಇಲಾಖೆಗೆ ಸಚಿವರು ತಿಳಿಸಿದ್ದು ವ್ಯಾಪಕ ಚರ್ಚೆಗೆ ಗುರಿಯಾಗಿತ್ತು. ಇದನ್ನು ಕಾಯ್ದೆ ರೂಪದಲ್ಲಿ ತರಬಹುದು. ಆದರೆ, ಕಾಯ್ದೆ ತಂದರೆ ಬಲವಂತ ಮಾಡಿದಂತಾಗುತ್ತದೆ. ಹಾಗಾಗಿ, ಯಾರು ದೇವರ ಹೆಸರಲ್ಲಿ ಅಥವಾ ರಾಷ್ಟ್ರೀಯ ಪುರುಷರ ಹೆಸರಲ್ಲಿ ಮದ್ಯದಂಗಡಿ ನಡೆಸದಂತೆ ಸಚಿವರು ಸೂಚಿಸಿದ್ದರು.












Click it and Unblock the Notifications