RTPCR ವರದಿ ಇಲ್ಲದ ಈ 2 ರಾಜ್ಯದ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ಬೆಂಗಳೂರು, ಆಗಸ್ಟ್ 02: ಒಂದೊಮ್ಮೆ ಆರ್ಟಿಪಿಸಿಆರ್ ವರದಿ ಇಲ್ಲದಿದ್ದರೆ ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಉಂಟಾಗುವ ಭೀತಿಯ ಮಧ್ಯೆ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶಿಸುವವರಿಗೆ ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ಫಲಿತಾಂಶವು ಕಡ್ಡಾಯ ಮಾಡಲಾಗಿತ್ತು.
ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಬಿಎಂಪಿಯು, ಆರ್ಟಿಪಿಸಿಆರ್ ವರದಿ ಇಲ್ಲದಿದ್ದರೆ ಕ್ವಾರಂಟೈನ್ ಕಡ್ಡಾಯ ಎಂದು ಹೇಳಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಹ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಮೂರನೇ ಅಲೆಯ ಆತಂಕ ಕೂಡ ಕಾಡುತ್ತಿದ್ದು, ಈ ಹಿನ್ನೆಲೆ ಪಾಲಿಕೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳಲು ಮುಂದಾಗಿದೆ.
ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ದಿನದಿನವೂ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಈ ನಿಟ್ಟನಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊಡಗು-ಕೇರಳ-ಮಂಗಳೂರು ಗಡಿಯಲ್ಲಿ ಹೆಚ್ಚಿನ ಅಲರ್ಟ್ ಮಾಡಲಾಗಿದೆ.
ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಅಥವಾ ಎರಡು ಬಾರಿ ವ್ಯಾಕ್ಸಿನ್ ಆದವರಿಗೆ ಮಾತ್ರ ಕೊಡಗು ಎಂಟ್ರಿಗೆ ಅವಕಾಶ ನೀಡಬೇಕು. ಸದ್ಯ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದು, ಕೇರಳದಲ್ಲಿ ಉಲ್ಬಣದಿಂದ ಕೊಡಗಿನಲ್ಲೂ ಆತಂಕ ಶುರುವಾಗಿದೆ.
ಕೇರಳದಿಂದ ಕೊಡಗಿಗೆ ಹರಡದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಇನ್ನು ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಬೆನ್ನಲ್ಲೇ ಮಂಗಳೂರು ಗಡಿಯಲ್ಲಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಂಗಳೂರಿನ ಕರ್ನಾಟಕ-ಕೇರಳ ಗಡಿ ತಲಪಾಡಿಯಲ್ಲಿ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ.
ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೂಲಕ ತಪಾಸಣೆ ಚುರುಕು ಮಾಡಲಾಗಿದ್ದು, ಕೇರಳದಿಂದ ಬರುವ ಕಾರು, ಬೈಕ್, ಬಸ್ಸು ಸೇರಿ ಎಲ್ಲಾ ರೀತಿಯ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.
ಒಂದು ಡೋಸ್ ಕೋವಿಡ್ ಲಸಿಕೆ ಅಥವಾ ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಯಾವುದೂ ಇಲ್ಲದೇ ಬರುವ ಪ್ರಯಾಣಿಕರಿಗೆ ಗಡಿಯಲ್ಲೇ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿ ನೇಮಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದಿಂದ ಬರುವ ಬಸ್ ಪ್ರಯಾಣಿಕರನ್ನು ಗಡಿಯಲ್ಲಿ ಇಳಿಸಿ ತಪಾಸಣೆ ಮಾಡುವಂತೆ ಸೂಚಿಸಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಯು 3ನೇ ಅಲೆಯ ಎಚ್ಚರಿಕೆಯನ್ನು ನೀಡುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಆರ್.ಮೌಲ್ಯ (ರಿಪ್ರೊಡೆಕ್ಟಿವ್ ನಂಬರ್) ಶೇ.0.85ರಷ್ಟಿದ್ದು, ಯಾವುದೇ ಸಮಯದಲ್ಲಿ ಈ ದರ ಶೇ.1ಕ್ಕೆ ತಲುಪುವ ಸಾಧ್ಯತೆಗಳಿವೆ. ಈ ರೀತಿಯಾಗಿದ್ದೇ ಆದರೆ, ಪರಿಸ್ಥಿತಿ ಕಠಿಣವಾಗಲಿದೆ ಎಂದು ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಬಾಬು ಅವರು ಹೇಳಿದ್ದಾರೆ.
ಸೋಂಕಿನ ಪ್ರವೃತ್ತಿಯನ್ನು ಪರಿಶೀಲಿಸಿದರೆ ಅದನ್ನು ನಿರ್ಣಯಿಸಲು ಹಲವಾರು ಮಾರ್ಗಗಳಿವೆ. ಆರ್.ಮೌಲ್ಯವನ್ನು ಪರಿಶೀಲಿಸುವುದಾದರೆ ಇದು ಜೂನ್ 20ರವರೆಗೆ ಕಡಿಮೆ ಪ್ರಮಾಣದಲ್ಲಿತ್ತು. ಬಳಿಕ ಹೆಚ್ಚಾಗತೊಡಗಿತ್ತು.
ಪ್ರಸ್ತುತ ಈ ಮೌಲ್ಯ ಶೇ.0.85ರಷ್ಟಿದೆ. ಇದು ಯಾವುದೇ ಸಮಯದಲ್ಲಿ ಬೇಕಾದರೂ ಶೇ.1ಕ್ಕೆ ತಲುಪಬಹುದು. 3ನೇ ಅಲೆ ಕೂಡ ಎರಡನೇ ಅಲೆ ರೀತಿಯಲ್ಲಿಯೇ ಇರಲಿದೆ. ನಾವು ತೆಗೆದುಕೊಳ್ಳುವ ಕಠಿಣ ಕ್ರಮಗಳ ಮೇಲೆ ಸಾವು-ನೋವುಗಳು ಅವಲಂಬಿತವಾಗಿರುತ್ತವೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆಗಳ ಸಮರ್ಪಕ ಪೂರೈಕೆಯಿಲ್ಲ. ಹೀಗಾಗಿ ಲಸಿಕೆಗಳಿಗೆ ಕಾಯುತ್ತಿರುವ ಸಮಯದಲ್ಲೇ ನಾವು ಸೂಕ್ಷ್ಮ ಯೋಜನೆಗಳನ್ನು ರೂಪಿಸಬೇಕಿದೆ.
ಫಲಾನುಭವಿಗಳ ಒಂದೆಡೆ ಸೇರಿದ ಕೋವಿನ್ ಆ್ಯಪ್ ನಲ್ಲಿ ಹೆಸರುಗಳನ್ನು ನೊಂದಾಯಿಸುವ ಕೆಲಸ ಮಾಡಬೇಕು. ಲಸಿಕೆ ಲಭ್ಯವಾದ ಕೂಡಲೇ ಫಲಾನುಭವಿಗಳು ಲಸಿಕೆ ಪಡೆಯುವಂತೆ ಮಾಡಬೇಕು. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಲಾಗಿತ್ತು.
ಕೋವಿಡ್ ಮೂರನೇ ಅಲೆ ಎದುರಿಸಲು ಬಿಬಿಎಂಪಿ ಸಿದ್ಧತೆ
ಕೊರೊನಾ ಮೂರನೇ ಅಲೆಗೆ ಬಿಬಿಎಂಪಿ ಸಕಲ ಸಿದ್ಧತೆ ನಡೆಸಿರುವ ವಿಚಾರದ ಬಗ್ಗೆ ಮಾತನಾಡಿ, ಸದ್ಯ ಎರಡನೇ ಅಲೆಯ ವ್ಯವಸ್ಥೆ ಹಾಗೇ ಉಳಿದಿದೆ. ಇನ್ನು ಮುಂದೆ ಫಿಜಿಕಲ್ ಟ್ರಯಾಜ್ ಕಡ್ಡಾಯವಾಗಿ ಮಾಡಲಾಗುತ್ತದೆ. 400ರಷ್ಟು ಬೆಡ್ ಮಾತ್ರ ಸರ್ಕಾರಿ ಕೋಟಾದಲ್ಲಿ ಪೇಷಂಟ್ ಇದ್ದಾರೆ. ಎಲ್ಲ ದೊಡ್ಡ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಖಾಸಗಿ, ಸರ್ಕಾರಿ ಆಸ್ಪತ್ರೆ ಎಲ್ಲ ಕಡೆ ಸೂಚನೆ ನೀಡಲಾಗಿದೆ. ಪೊಬತ್ತಿಯಲ್ಲಿರುವ ಆಸ್ಪತ್ರೆಯಲ್ಲಿ ಪಾಲಿಕೆ ಪ್ರತ್ಯೇಕ ಆಕ್ಸಿಜನ್ ಪ್ಲಾಂಟ್ ರೆಡಿ ಮಾಡಿಕೊಂಡಿದೆ .
ವೀಕೆಂಡ್ ಲಾಕ್ಡೌನ್ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಕಾಟ ಹೆಚ್ಚಾಗುವ ಸಾಧ್ಯತೆ ಇದ್ದು, ವಾರಾಂತ್ಯ ಲಾಕ್ ಬಗ್ಗೆ ಪಾಲಿಕೆ ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಆಯುಕ್ತರು, ಸಾಮಾನ್ಯ ಜನ ಜೀವನ ನಡೆಸಬೇಕಾಗಿದೆ. ಸೋಂಕಿಗೆ ಪೂರ್ವ ಸಿದ್ಧತೆ ಆಗಬೇಕಾಗಿದೆ. ಸರ್ಕಾರದ ಹಂತದಲ್ಲಿ ಅಂತಿಮ ತೀರ್ಮಾನ ಆಗಲಿದೆ. ಸದ್ಯಕ್ಕೆ ಕೇಸ್ ಸಂಖ್ಯೆ 500ಕ್ಕಿಂತ ಕಡಿಮೆ ಇದೆ. ಕಂಟೇನ್ಮೆಂಟ್ ಮೆಂಟ್ ವಿಚಾರದಲ್ಲಿ ಕಠಿಣ ಕ್ರಮ ವಹಿಸಲಾಗಿದೆ ಎಂದು ಹೇಳುವ ಮೂಲಕ ವೀಕೆಂಡ್ ಲಾಕ್ ಡೌನ್ ಬಗ್ಗೆ ಆಯುಕ್ತರು ಸುಳಿವು ನೀಡಿದರು.
ಮಹಾರಾಷ್ಟ್ರ, ಕೇರಳ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು, ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ. ಟೆಸ್ಟ್ ಇಲ್ಲದೇ ಬರುವವರು ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕು. ಈಗಾಗಲೇ ಕೇರಳ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಶಿಫಾರಸು ಮಾಡಿದೆ. ಈ ಬಗ್ಗೆ ಬಿಬಿಎಂಪಿ, ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಲಿದೆ. ವಲಯ ಮಟ್ಟದ ಅಧಿಕಾರಿಗಳಿಗೆ ಸಾಂಸ್ಥಿಕ ಕ್ವಾರಂಟೈನ್ಗೆ ಸೂಚನೆ ನೀಡಲಾಗಿದೆ. ಇಂದಿನಿಂದ ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ. ಇನ್ನು ಆರ್ಟಿಪಿಸಿಆರ್ ಟೆಸ್ಟ್ 24 ಗಂಟೆಯೊಳಗೆ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
Recommended Video
ಬೆಂಗಳೂರಿನಲ್ಲಿ ಲಸಿಕೆ ಅಭಾವ ಹೆಚ್ಚಿದೆ
ಬೇಡಿಕೆಗೆ ತಕ್ಕಂತೆ ಜುಲೈನಲ್ಲಿ ವ್ಯಾಕ್ಸಿನ್ ಸಿಕ್ಕಿಲ್ಲ. ಶೇ.17 ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಪಾಲಿಕೆಗೆ ನಿತ್ಯ ಒಂದೂವರೆ ಲಕ್ಷ ವ್ಯಾಕ್ಸಿನ್ ಬೇಕಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಬೇಡಿಕೆ ಇಡಲಾಗಿದೆ. ಈಗಿನ್ನೂ ಎರಡನೇ ಅಲೆ ಮುಗಿದಿಲ್ಲ ಅಂತಾರೆ, ಮತ್ತೆ ಕೆಲವರು ಮೂರನೇ ಅಲೆ ಆರಂಭ ಎಂದು ಹೇಳುತ್ತಿದ್ದಾರೆ. ಹೀಗಾಗಿ ತಜ್ಞರು ಅಲೆ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ. ವ್ಯಾಕ್ಸಿನ್ ಪಡೆದವರಿಗೆ ರಿಸ್ಕ್ ಕಡಿಮೆ ಇದೆ. 45+ ವಯೋಮಾನದವರು ಅತಿ ಹೆಚ್ಚು ಲಸಿಕೆ ಪಡೆದಿದ್ದಾರೆ. ಎಲ್ಲರಿಗೂ ಲಸಿಕೆ ಕೊಡಲು ಮತ್ತಷ್ಟು ಬೇಡಿಕೆ ಇದೆ ಎಂದು ಹೇಳಿದರು.