ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಮಾಧ್ಯಮದ ಶಾಲೆಯಿಲ್ಲದೇ ಮರಾಠಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು
ಬೆಂಗಳೂರು, ನ.25: ಇತ್ತ ರಾಜ್ಯ ಮತ್ತು ಮಹಾರಾಷ್ಟ್ರದ ನಡುವೆ ಗಡಿ ಸಮಸ್ಯೆ ಮತ್ತೆ ಉದ್ಭವವಾಗಿದೆ. ಅತ್ತ ಮಹಾರಾಷ್ಟ್ರದ ಗಡಿಯಲ್ಲಿರುವ ಹಳ್ಳಿಗಳ ಪ್ರೌಢಶಾಲಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ.
ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಕನಿಷ್ಠ 28 ಗಡಿ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ದೂರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗಿಂತ ಹತ್ತಿರದಲ್ಲಿರುವ ಮರಾಠಿ ಮಾಧ್ಯಮ ಶಾಲೆಗಳಿಗೆ ಸೇರಿಸುವಂತಾಗಿದೆ.
ಗಡಿ ವಿವಾದ: ಮುಂದಿನ ವಾರ ಸರ್ವಪಕ್ಷ ಸಭೆ ಕರೆದ ಸಿಎಂ ಬೊಮ್ಮಾಯಿ
ಮಹಾರಾಷ್ಟ್ರದ ಗಡಿಯನ್ನು ಹಂಚಿಕೊಂಡಿರುವ ಬೆಳಗಾವಿ ತಾಲೂಕಿನ ಪಶ್ಚಿಮ ಭಾಗದಲ್ಲಿ ಹಿಂಡಲಗಾ, ಮಣ್ಣೂರು, ಗೋಜಗಾ, ಉಚಗಾಂವ, ಬೆಕ್ಕಿನಕೆರೆ ಮತ್ತು ಕುದುರೆಮನಿಗಳಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ಬೇಡಿಕೆಯಿದೆ. ಹಿಂಡಲಗಾ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 180 ವಿದ್ಯಾರ್ಥಿಗಳಿದ್ದರೆ, ಮಣ್ಣೂರಿನ 110, ಬೆಕ್ಕಿನಕೆರೆ 122, ಉಚಗಾಂವ 112, ಕುದುರೆಮನಿ 63 ವಿದ್ಯಾರ್ಥಿಗಳಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಓದಲು ಮರಾಠಿಗರ ಆಸಕ್ತಿ
ಮರಾಠಿ ಮಾತನಾಡುವವರೂ ಸೇರಿದಂತೆ ವಿವಿಧ ಭಾಷಾ ಸಮುದಾಯಗಳ ಜನರು ತಮ್ಮ ಮಕ್ಕಳ ವೃತ್ತಿ ಭವಿಷ್ಯಕ್ಕಾಗಿ ಕನ್ನಡ ಶಾಲೆಗಳಲ್ಲಿ ಓದಬೇಕೆಂದು ಬಯಸುತ್ತಿದ್ದಾರೆ. ಆದರೆ, ಶಾಲೆಗಳಿಲ್ಲದೆ ಅವರು ತಮ್ಮ ಮಕ್ಕಳನ್ನು ಮಠಾಠಿ ಮಾಧ್ಯಮಕ್ಕ ಸೇರಿಸಬೇಕಾಗುತ್ತದೆ. ಇಲ್ಲದಿದ್ದೇ ಹತ್ತಾರೂ ಕಿಲೋ ಮೀಟರ್ ದೂರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಹುಡುಕಬೇಕಾಗುತ್ತದೆ.
ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಮ್ಮ ಮಕ್ಕಳು ಮಹಾರಾಷ್ಟ್ರದ ಹಳ್ಳಿಗಳ ಮೂಲಕ ಹಾದು 20 ಕಿ.ಮೀ ದೂರದ ಪ್ರೌಢಶಾಲೆಗೆ ಹೋಗಬೇಕಾಗಿದೆ ಎಂದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಕುದುರೆಮನಿ ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ ತುರ್ಕವಾಡಿಕರ್ ಹೇಳಿದ್ದಾರೆ.
ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಿದ ದಾಖಲಾತಿ
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಿನ ದಾಖಲಾತಿ ಕಂಡುಬಂದಿದೆ ಎನ್ನುತ್ತಾರೆ ಬ್ಲಾಕ್ ಶಿಕ್ಷಣಾಧಿಕಾರಿಗಳು. ಆದರೆ, ಸಮಸ್ಯೆಯೆಂದರೆ ಇಲ್ಲಿ ಸರ್ಕಾರಿ ಪ್ರೌಢಶಾಲೆಗಳು ಇಲ್ಲದಿರುವುದು ಆತಂಕಕಾರಿಯಾಗಿದೆ.
ಗಡಿ ಭಾಗದ ಮಕ್ಕಳು ಕನ್ನಡದಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆಗಳು ಕೇಳಿಬರುತ್ತಿವೆ. ಆದರೆ ಸರಕಾರದ ನಿಯಮಗಳು ಮತ್ತು ರಾಜಕೀಯ ನಿರಾಸಕ್ತಿ ಇದಕ್ಕೆರ ಅಡ್ಡಿಯಾಗಿದೆ.
ಕನ್ನಡ ಮಾಧ್ಯಮ ಪ್ರೌಢಶಾಲೆಗಳನ್ನು ಹೆಚ್ಚು ಮಾಡುವಲ್ಲಿ ಚುನಾಯಿತ ಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆರೋಪಿಸಿದ್ದಾರೆ.
ಶಾಲೆ ಬಿಟ್ಟ ಮಕ್ಕಳು ಹೆಚ್ಚಾದ ಕಾರಣ ಒಂದು ಪ್ರೌಢಶಾಲೆ ಸಿಕ್ಕಿದೆ!
1999ರಲ್ಲಿ ಅಶೋಕ ಚಂದರಗಿ ನೇತೃತ್ವದ ಸಮಿತಿಯು ಬೆಳಗಾವಿ ಮತ್ತು ಖಾನಾಪುರ ತಾಲೂಕಿನ 28 ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಪರಿಣಾಮವಾಗಿ ಈ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳು ಸ್ಥಾಪನೆಯಾದವು.
ವಡಗಾಂವ್ ಮತ್ತು ಖಾಸಬಾಗ ಉಪನಗರದಲ್ಲಿ ಶಾಲೆ ಬಿಟ್ಟ ಮಕ್ಕಳು ಹೆಚ್ಚಾದ ಕಾರಣ 2006ರಲ್ಲಿ ವಡಗಾಂವ್ನಲ್ಲಿ ಕನ್ನಡ ಮಾಧ್ಯಮದ ಪ್ರೌಢಶಾಲೆಯೊಂದನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಚಂದರಗಿ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ, 'ಜನರ ಅಗತ್ಯತೆ ಮತ್ತು ಬೇಡಿಕೆಗೆ ಅನುಗುಣವಾಗಿ ಪ್ರೌಢಶಾಲೆಗಳಿಗೆ ಶಿಫಾರಸುಗಳನ್ನು ಕಳುಹಿಸಲಾಗುತ್ತಿದೆ. ಪ್ರೌಢಶಾಲೆಗಳನ್ನು ಅನುಮೋದಿಸಲು ವಿವಿಧ ನಿಯತಾಂಕಗಳಿವೆ. ಇತ್ತೀಚೆಗೆ ಆರು ಸರಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಅದರಲ್ಲಿ ನಾಲ್ಕು ಬೆಳಗಾವಿ ತಾಲೂಕಿನಲ್ಲಿ ಮತ್ತು ಒಂದು ಕಿತ್ತೂರಿನಲ್ಲಿವೆ' ಎಂದಿದ್ದಾರೆ.
ಕನ್ನಡ ಮಾಧ್ಯಮದ ಪ್ರೌಢಶಾಲೆಗಳಿಲ್ಲದೆ ಮರಾಠಿಯಲ್ಲಿ ಶಿಕ್ಷಣ
'ಏಳನೇ ತರಗತಿಯ ನಂತರ ಮಕ್ಕಳು ಶಾಲೆ ಬಿಡದಂತೆ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮದ ಪ್ರೌಢಶಾಲೆಗಳು ಹೆಚ್ಚಬೇಕು. ಕನ್ನಡ ಮಾಧ್ಯಮದ ಪ್ರೌಢಶಾಲೆಗಳ ಅಲಭ್ಯತೆಯಿಂದಾಗಿ ಗಡಿ ಭಾಗದ ಅಥಣಿ, ನಿಪ್ಪಾಣಿ, ಹುಕ್ಕೇರಿ ಗ್ರಾಮಗಳ ಪಾಲಕರು ತಮ್ಮ ಮಕ್ಕಳನ್ನು ಮರಾಠಿ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ' ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದ್ದಾರೆ.
ಇತ್ತೀಚೆಗೆ ಗೋಕಾಕ, ಮೂಡಲಗಿ, ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕಿನಲ್ಲಿ ಏಳು ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.
ರಾಜ್ಯದಾದ್ಯಂತ 90ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಹೀಗೆ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆಯೇ, 5 ಕಿಮೀ ವ್ಯಾಪ್ತಿಯಲ್ಲಿ ಬೇರೆ ಶಾಲೆಗಳಿವೆಯೇ ಎಂಬುದನ್ನು ಪರೀಕ್ಷಿಸಬೇಕು. ಪ್ರಾಥಮಿಕ ಶಾಲೆಗಿಂತ ಪ್ರೌಢಶಾಲೆ ಸ್ಥಾಪಿಸಲು ಹೆಚ್ಚಿನ ಸಂಖ್ಯೆಯ ಶಿಕ್ಷಕರ ಅಗತ್ಯವಿದೆ. ಆರ್ಥಿಕ ಪರಿಣಾಮಗಳ ಜೊತೆಗೆ ಈ ಅಂಶಗಳನ್ನು ಪರಿಗಣಿಸಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣದ ಆಯುಕ್ತ ವಿಶಾಲ್ ಆರ್ ಹೇಳುತ್ತಾರೆ.
(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)