ಲೋಕಾಯುಕ್ತ ಬಲವರ್ಧನೆ ಮಾಡಿ ಅಂತ ಸರ್ಕಾರಕ್ಕೆ ಸಲಹೆ ಕೊಡಲ್ಲ: ನ್ಯಾ. ವಿಶ್ವನಾಥಶೆಟ್ಟಿ
ಬೆಂಗಳೂರು, ಜ. 24: ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕನಸಲ್ಲೂ ಕಾಡುತ್ತಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ "ನಿರುಪಯುಕ್ತ ಸಂಸ್ಥೆ" ಯಾಗಿದ್ದು ಇತಿಹಾಸ. ಭ್ರಷ್ಟಾಚಾರ ನಿಗ್ರಹ ದಳ ಪ್ರತ್ಯೇಕಗೊಂಡ ಬಳಿಕ ಶಿಫಾರಸುಗಳಿಗೆ ಸೀಮಿತವಾಗಿರುವ ಸಂಸ್ಥೆಯ ಲೋಕಾಯುಕ್ತರಾಗಿ ಐದು ವರ್ಷ ಪೂರೈಸಿದ ನ್ಯಾ. ವಿಶ್ವನಾಥ ಶೆಟ್ಟಿ ಪಿ. ಅವರು ಜ. 27 ಕ್ಕೆ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಸಾಧನೆಗಳ ಬಗ್ಗೆ ವಿವರ ನೀಡಿದರು.
ನನ್ನ ಸಲಹೆ ಸರ್ಕಾರ ಸ್ವೀಕರಿಸಲಿಲ್ಲ: ನಾನು ಲೋಕಾಯುಕ್ತ ಸಂಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಎಲ್ಲೂ ಪ್ರಚಾರಕ್ಕೆ ಕೆಲಸ ಮಾಡಿಲ್ಲ. ದಾಳಿ ಮಾಡಿ ಮಾನ ಹಾನಿ ಮಾಡುವುದು ನನಗೆ ಇಷ್ಟ ಇರಲಿಲ್ಲ. ಹೀಗಾಗಿ ದಾಳಿಗಳನ್ನು ಮಾಡಲಿಲ್ಲ. ಇನ್ನು ಲೋಕಾಯುಕ್ತ ಸಂಸ್ಥೆಯಿಂದ ಭ್ರಷ್ಟಾಚಾರ ನಿಗ್ರಹ ದಳ ಬೇರ್ಪಡಿಸಿದ್ದರಿಂದ ಲೋಕಾಯುಕ್ತ ಸಂಸ್ಥೆಗೆ ಶಕ್ತಿ ಇಲ್ಲದಂತೆ ಆಗಿತ್ತು. ಜನರ ಹಿತದೃಷ್ಟಿಯಿಂದ ಎಸಿಬಿ ರದ್ದಾಗಬೇಕು. ಪಾರದರ್ಶಕವಾಗಿ ಇರಬೇಕು ಎಂದ್ರೆ ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ಬೇಕು. ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತರ ವ್ಯಾಪ್ತಿಗೆ ಒಳಪಡಬೇಕು. ಎಸಿಬಿ ರದ್ದು ಕೋರಿ ಸಲ್ಲಿಸಿರುವ ರಿಟ್ ಅರ್ಜಿ ಫೆಬ್ರವರಿಯಲ್ಲಿ ವಿಚಾರಣೆಯಿದೆ ಎಂದು ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.
ನನಗೆ ಯಾವ ಒತ್ತಡವೂ ಬಂದಿಲ್ಲ
ನಾನು ಬಾರ್ ಕೌನ್ಸಿಲ್ ಪ್ರತಿನಿಧಿಯಾಗಿದ್ದೆ. ಬಳಿಕ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯನಾಗಿದ್ದೆ. ನನಗೆ ಮಾಧ್ಯಮದವರ ಜತೆ ನಿಕಟ ಸಂಪರ್ಕ ಇತ್ತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ಕಷ್ಟ ಬಗೆ ಹರಿಸಲು ಹೈಕೋರ್ಟ್, ಸುಪ್ರೀಂಕೋರ್ಟ್ ಎಷ್ಟು ಮುಖ್ಯವೋ, ಫ್ರೀಡಂ ಆಫ್ ಪ್ರೆಸ್ ಕೂಡ ಅಷ್ಟೇ ಮುಖ್ಯ. ಈ ಸಂಸ್ಥೆಯನ್ನು ಬಲಪಡಿಸಲು ಸಹಕಾರ ನೀಡಿದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದೇನೆ. ನನಗೆ ಯಾವ ಕೆಲಸದಲ್ಲೂ ಒತ್ತಡ ಬಂದಿಲ್ಲ. ಎಷ್ಟು ತ್ವರಿತವಾಗಿ ದಕ್ಷತೆಯಿಂದ ಕೆಲಸ ಮಾಡಬೇಕೋ ಅದನ್ನು ನಾನು ಮಾಡಿದ್ದೇನೆ. ಈ ಸಂಸ್ಥೆಗೆ ಬರುವಾಗ ಸ್ವಲ್ಪ ಅಧಿಕಾರ ಕಿತ್ತುಕೊಂಡಿದ್ದಾರೆ ಎಂದು ಗೊತ್ತಿತ್ತು. ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕುಂಠಿತಗೊಂಡಿದೆ. ಹೆಚ್ಚಿನ ಅಧಿಕಾರ ಇದ್ದಿದ್ದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ಅವರು ಇದೇ ವೇಳೆ ತಿಳಿಸಿದರು.
ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸುವುದು ಸರಿಯಲ್ಲ:
ಲೋಕಾಯುಕ್ತರಾಗಿ ತಾವು ಆಸ್ತಿ ವಿವರ ಲೋಕಾಯುಕ್ತದಲ್ಲಿ ಘೋಷಣೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಲೋಕಾಯುಕ್ತರು, ನನಗೆ ಹೆಚ್ಚಿನ ಆದಾಯ ಇಲ್ಲದ ಸಮಯದಲ್ಲಿ ನನ್ನ ಸಹೋದರನ ಮನೆಗೆ ಬಂದು ವಕಾಲತ್ತು ಹಾಕಲು ಶುರು ಮಾಡಿದ್ದೆ. ನಾನು ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ಲೋಕಾಯುಕ್ತರನ್ನು ನೇಮಿಸುವುದು ಸಾಂವಿಧಾನಿಕ ಅಥಾರಿಟಿಯವರು. ಲೋಕಾಯುಕ್ತರನ್ನು ಪರಿಶೀಲನೆ ಮಾಡುವುದು ಸರಿಯಲ್ಲ. ಲೋಕಾಯುಕ್ತರ ಆಸ್ತಿ ವಿವರ ಸಾರ್ವಜನಿಕರಿಗೆ ಸಿಗುವಂತಾದರೆ ಆ ಸಂಸ್ಥೆಯ ಗೌರವ ಕಳೆದಂತಾಗುತ್ತದೆ ಅಂತ ಇದೆ. ಲೋಕಾಯುಕ್ತರ ಮೇಲೆ ಹಾಗೂ ನಿವೃತ್ತ ನ್ಯಾಯಾಧೀಶರ ಮೇಲೆ ನಂಬಿಕೆ ಇಡಬೇಕು ಎಂದು ಆಸ್ತಿ ವಿವರ ಸಲ್ಲಿಸದ ಕ್ರಮವನ್ನು ಲೋಕಾಯುಕ್ತರು ಸಮರ್ಥನೆ ಮಾಡಿಕೊಂಡರು.
ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣ
ದೇವರು ನನ್ನನ್ನು ರಕ್ಷಿಸಿದ್ದಾನೆ. ವ್ಯಕ್ತಿಯ ಮೇಲೆ ದೇವರ ದಯೆ ಇದ್ದರೆ ಏನೂ ಆಗಲ್ಲ ಎಂಬುದು ನನ್ನ ನಂಬಿಕೆ. ಆತ ಆಕ್ರೋಶದಿಂದ ಮಾಡಿದ್ದಾನೆ. ನಮ್ಮ ಪೊಲೀಸ್ ಕೇಸಿನ ಪ್ರಕಾರ, ಲೋಕಾಯುಕ್ತರು ಇಲ್ಲದ ಹಾಗೆ ಮಾಡುವುದು, ಲೋಕಾಯುಕ್ತರನ್ನು ಖಾಲಿ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದಾನೆ. ಲೋಕಾಯುಕ್ತರು ಇಲ್ಲದಿದ್ದರೆ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಯಾರು ತನಿಖೆಗೆ ಒಳಪಡುತ್ತಾರೋ ಅವರಿಗೆ ಪ್ರಯೋಜನ. ನನಗೆ ಲೋಕಾಯುಕ್ತ ಹುದ್ದೆ ಇಷ್ಟು ಸೂಕ್ಷ್ಮ ಹುದ್ದೆ ಎಂದು ಗೊತ್ತಿರಲಿಲ್ಲ. ಹಿಂದಿನ ಲೋಕಾಯುಕ್ತರು ತಿಳಿಸಿದಾಗಲೇ ಅದರ ಸೂಕ್ಷ್ಮತೆ ಬಗ್ಗೆ ಗೊತ್ತಾಗಿತ್ತು ಎಂದು ನ್ಯಾ.ವಿಶ್ವನಾಥ ಶೆಟ್ಟಿ ಮೇಲೆ ನಡೆದ ಚಾಕು ದಾಳಿ ಕುರಿತು ಮೆಲಕು ಹಾಕಿದರು.
ನಂದು ಏಳು ದಿನ ರಜೆ ಅಷ್ಟೆ
ನಾನು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇವಲ ಏಳು ದಿನ ರಜೆ ಹಾಕಿದ್ದೇನೆ. ಚಾಕುವಿನಿಂದ ಇರಿತಕ್ಕೆ ಒಳಗಾದ ಬಳಿಕ 45 ದಿನ ವಿಶೇಷ ರಜೆ ಪಡೆದಿದ್ದೆ. ಆನಂತರ ಒಂದು ದಿನವೂ ರಜೆ ಪಡೆಯಲಿಲ್ಲ. ಐದು ವರ್ಷದ ಅವಧಿಯಲ್ಲಿ ಕೇವಲ ಏಳು ದಿನ ರಜೆ ಪಡೆದಿದ್ದೇನೆ. ಈ ಹಿಂದೆ ಲೋಕಾಯುಕ್ತರಿಗಾಗಿ ಖರೀದಿ ಮಾಡಿದ್ದ ಹಳೇ ಕಾರನ್ನೇ ಬಳಿಸಿದ್ದೇನೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ಲೋಕಾಯುಕ್ತ ಭ್ರಷ್ಟಾಚಾರ ತನಿಖೆ
ಲೋಕಾಯುಕ್ತ ಸಂಸ್ಥೆಯಲ್ಲಿ 23 ಎಸ್ಪಿಗಳಿದ್ದಾರೆ. ಡಿವೈಎಸ್ಪಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆಕ್ಷನ್ 53 ರ ಪ್ರಕಾರ ಯಾವುದೇ ಭ್ರಷ್ಟಾಚಾರ ಸಂಬಂಧ ದೂರುಗಳನ್ನು ಎಸಿಬಿ ತನಿಖೆಗೆ ಶಿಫಾರಸು ಮಾಡಬಹುದು. ಎಸಿಬಿ ತನಿಖೆ ಮಾಡದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬಹುದು. ಎಲ್ಲಾ ಜನ ಪ್ರತಿನಿಧಿಗಳು ತಮ್ಮ ಆಸ್ತಿ ವಿವರ ಸಲ್ಲಿಸಬೇಕು ಎಂದು ಮಾಡಿದ್ದೆ. ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಶಾಸಕರ ವರೆಗೂ ಎಲ್ಲರೂ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬೇಕು ಎಂದು ಮಾಡಲಾಗಿದೆ. ಇನ್ನು 23 ಪ್ರಕರಣಗಳ ತನಿಖೆ ಸಂಬಂಧ ಸಕ್ಷಮ ಪ್ರಾಧಿಕಾರಕ್ಕೆ ಕಳಹಿಸಲಾಗಿದೆ. ಅದರಲ್ಲಿ ಹತ್ತು ಕೇಸು ವಜಾ ಅಗಿವೆ. ಉಳಿದ ಪ್ರಕರಣಗಳನ್ನು ಪೊಲೀಸರ ತನಿಖೆಗೆ ವಹಿಸಲಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ ಎಂದರು.ಇನ್ನು ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಡಿಜಿಪಿ ಹಂತದಲ್ಲಿ ತನಿಖೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದರು.
ವಿಶ್ವನಾಥ ಶೆಟ್ಟಿ ಅಧಿಕಾರ ಅವಧಿ ಪ್ರಕರಣಗಳ ಇತ್ಯರ್ಥ
ನಾನು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ 7680 ದೂರು ಇದ್ದವು. 3242 ಪ್ರಕರಣ ಬಾಕಿ ಇದ್ದವು. ಅದರಲ್ಲಿ ಹದಿನೈದು ವರ್ಷದ ಹಿಂದಿನ ದೂರುಗಳು ಸೇರಿದ್ದವು. 2677 ವಿಚಾರಣ ಪ್ರಕರಣಗಳ ಇತ್ಯರ್ಥಪಡಿಸಲಾಗಿದೆ. 2,122 ಪ್ರಕರಣಗಳ 12(3) ರನ್ವಯ ಹಾಗೂ 587 ಪ್ರಕರಣಗಳ ಲೋಕಾಯುಕ್ತ ಕಾಯ್ದೆ ಕಲಂ 12(1) ರನ್ವಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ 8035 ದೂರು ಮತ್ತು 2430 ವಿಚಾರಣ ಪ್ರಕರಣಗಳು ಬಾಕಿ ಇವೆ ಎಂದು ಇದೇ ವೇಳೆ ತಮ್ಮ ಸಾಧನೆ ಬಗ್ಗೆ ಹೇಳಿಕೊಂಡರು.