ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಎಸ್ವೈಗೆ ಬಿಗ್ ಶಾಕ್
ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ಎಡವಿದೆ ಎನ್ನುವುದು ಒಟ್ಟಾರೆಯಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಯಾಕೆಂದರೆ, ರಾಜ್ಯದ ಅದರಲ್ಲೂ ಬೆಂಗಳೂರಿನ ಪರಿಸ್ಥಿತಿಯನ್ನು ನೋಡಿದರೆ ಬಿಎಸ್ವೈ ಸರಕಾರದ ವೈಫಲ್ಯತೆ ಇದರಲ್ಲಿ ಎದ್ದು ಕಾಣುತ್ತಿದೆ.
ಕೊರೊನಾ ಪರಿಸ್ಥಿತಿ ಕೈಮೀರಿ ಹೋದ ನಂತರ ಸರಕಾರ ಲಾಕ್ ಡೌನ್ ಘೋಷಣೆಯನ್ನು ಮಾಡಿತು. ಜೊತೆಗೆ, ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಮುಂದಕ್ಕೆ ಹಾಕುವಂತೆ ಚುನಾವಣಾ ಆಯೋಗಕ್ಕೆ ಮನವಿಯನ್ನೂ ಸರಕಾರ ಮಾಡಿತು.
ಆದರೆ, ಈಗಾಗಲೇ ಘೋಷಣೆಯಾಗಿದ್ದ ಚುನಾವಣೆ ಮಾತ್ರ ನಿಗದಿಯಂತೇ ನಡೆಯಿತು. ಬಳ್ಳಾರಿ ಮಹಾನಗರಪಾಲಿಕೆ ಚುನಾವಣೆ ಸೇರಿದಂತೆ ವಿವಿಧ ನಗರಸಭೆ, ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ (ಏ 30) ಹೊರಬಿದ್ದಿದೆ.
ಈ ಚುನಾವಣೆಯ ಫಲಿತಾಂಶ ಬಿಜೆಪಿಗೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಅದರಲ್ಲೂ, ಅವರ ಸ್ವಂತ ಜಿಲ್ಲೆಯಲ್ಲೂ ಬಿಜೆಪಿ ಮುಖಭಂಗ ಅನುಭವಿಸಿದೆ. ಇದು, ಮುಖ್ಯಮಂತ್ರಿಗಳಿಗಾದ ತೀವ್ರ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಶ್ರೀರಾಮುಲುಗೆ ಮುಖಭಂಗ
ಸಚಿವ ಶ್ರೀರಾಮುಲು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಒಟ್ಟು 39 ಸ್ಥಾನಗಳ ಪೈಕಿ ಕಾಂಗ್ರೆಸ್ 21 ಸ್ಥಾನದಲ್ಲಿ ಗೆದ್ದರೆ, ಬಿಜೆಪಿ 13 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಲು ಶಕ್ತವಾಗಿದೆ. ಇತರರು 5 ಸ್ಥಾನದಲ್ಲಿ ಗೆದ್ದಿದ್ದು, ಇವರೆಲ್ಲರೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು. ಶ್ರೀರಾಮುಲು ಜೊತೆಗೆ ಯಡಿಯೂರಪ್ಪನವರಿಗೂ ಇದು ಹಿನ್ನಡೆಯಾಗಿದೆ.

ಯಡಿಯೂರಪ್ಪ ತವರು ಜಿಲ್ಲೆಯಲ್ಲೂ ಬಿಜೆಪಿಗೆ ತೀವ್ರ ಹಿನ್ನಡೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮುನ್ಸಿಪಲ್ ಕಾರ್ಪೋರೇಶನ್ ಮತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯತಿಯಲ್ಲೂ ಬಿಜೆಪಿಗೆ ಸೋಲಾಗಿದೆ. ಭದ್ರಾವತಿಯ ಒಟ್ಟು 35ಸ್ಥಾನಗಳ ಪೈಕಿ ಕಾಂಗ್ರೆಸ್ 18 ಸ್ಥಾನವನ್ನು ಗೆದ್ದರೆ, ಜೆಡಿಎಸ್ 11 ಮತ್ತು ಬಿಜೆಪಿ ಕೇವಲ 4ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಇನ್ನು ತೀರ್ಥಹಳ್ಳಿಯ 15 ಸ್ಥಾನಗಳ ಪೈಕಿ, ಕಾಂಗ್ರೆಸ್ 9 ಮತ್ತು ಬಿಜೆಪಿ 6ಸ್ಥಾನದಲ್ಲಿ ಗೆದ್ದಿದೆ.

ರಾಮನಗರ ಡಿಸಿಎಂ ಅಶ್ವಥ್ ನಾರಾಯಣ ಅವರಿಗೆ ಪ್ರತಿಷ್ಠೆಯ ಚುನಾವಣೆ
ಇನ್ನು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ವಿಜಯಪುರ ಪಟ್ಟಣ ಪಂಚಾಯತಿ, ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿದೆ. ಡಿಸಿಎಂ ಅಶ್ವಥ್ ನಾರಾಯಣ ಅವರಿಗೆ ಪ್ರತಿಷ್ಠೆಯ ಚುನಾವಣೆ ಇದಾಗಿತ್ತು, ಆದರೆ, ರಾಮನಗರದಲ್ಲಿ ಬಿಜೆಪಿ ಒಂದು ಸೀಟನ್ನೂ ಗೆಲ್ಲಲಿಲ್ಲ.
Recommended Video

ಸ್ಥಳೀಯ ಸಂಸ್ಥೆಯ ಚುನಾವಣೆ, ಸಿಎಂ ಯಡಿಯೂರಪ್ಪನವರಿಗೆ ಭಾರೀ ಶಾಕ್
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಮಡಿಕೇರಿ ನಗರಸಭೆಯಲ್ಲಿ ಮಾತ್ರ. ಇನ್ನು, ಗುಡಿಬಂಡೆ, ಬೇಲೂರು, ಬೀದರ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಫಲಿತಾಂಶ ಸ್ವಾಭಾವಿಕವಾಗಿ ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನುವ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ಪಟ್ಟಿದ್ದಾರೆ. ಒಟ್ಟಿನಲ್ಲಿ, ಉಪ ಚುನಾವಣೆಗೂ ಮುನ್ನ ಸ್ಥಳೀಯ ಸಂಸ್ಥೆಯ ಚುನಾವಣೆ, ಸಿಎಂ ಯಡಿಯೂರಪ್ಪನವರಿಗೆ ಭಾರೀ ಶಾಕ್ ಅನ್ನು ನೀಡಿದೆ.












Click it and Unblock the Notifications