ಬೇಡದ ವಿಷಯದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ
ಬೆಂಗಳೂರು, ಸೆಪ್ಟೆಂಬರ್. 03: ರಾಜ್ಯಕ್ಕೆ ಬೇಡದ ವಿಷಯದಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಅಪಘಾತಗಳ ದಾಖಲೆ ಸರಣಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ಒಂದು ವರ್ಷದ ಅವಧಿಯಲ್ಲಿ ಕರ್ನಾಟಕವೊಂದರಲ್ಲೇ ಬರೋಬ್ಬರಿ 2744 ಪ್ರಕರಣಗಳು ನಡೆದಿದೆ.
ಹೌದು... ಈ ಆಘಾತಕಾರಿ ಸುದ್ದಿಯನ್ನು ಅರಗಿಸಿಕೊಳ್ಳಲೇಬೇಕು. ಅಪಘಾತಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ನಡೆದ ಒಟ್ಟು ಅಪಘಾತಗಳ ಪಟ್ಟಿಯಲ್ಲಿ ಕರ್ನಾಟಕ ದೊಡ್ಡ ಪಾಲನ್ನು ಪಡೆದುಕೊಂಡರೆ ಕೇರಳ ನಂತರದ ಸ್ಥಾನದಲ್ಲಿದೆ.
ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಮಾಡಿರುವ ಸಮೀಕ್ಷೆ ಹಲವಾರು ಸಂಗತಿಗಳನ್ನು ಬಿಚ್ಚಿಟ್ಟಿದ್ದು, ರಸ್ತೆ ಅಪಘಾತದ ಕರಾಳ ಮುಖವನ್ನು ತೆರೆದಿಟ್ಟಿದೆ. ಇದರ ಜತೆಗೆ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳು, ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆಯಲ್ಲಿ ಯಾವ ರೀತಿಯಾಗಿ ಜಾಗೃತಿ ಮೂಡಿಸಬೇಕು ಎಂಬುದನ್ನು ಪ್ರತಿಯೊಬ್ಬರು ಚಿಂತಿಸಬೇಕು ಎಂದು ಸಲಹೆ ನೀಡಿದೆ.
ಯುವಕರೇ ಹೆಚ್ಚು
2014 ರ ರಸ್ತೆ ಅಪಘಾತಗಳ ವರದಿಯನ್ನು ನೋಡಿದರೆ ಹಲವಾರು ಮಾಹಿತಿಗಳು ಸಿಗುತ್ತವೆ. ದೇಶಾದ್ಯಂತ 75000 ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 15 ರಿಂದ 34 ವರ್ಷ ಒಳಗಿನವರೇ ಇದರಲ್ಲಿ ಅಧಿಕ. ಶೇ. 82 ಪುರುಷರು ತಮ್ಮ ಜೀವವನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. ಇದರಲ್ಲಿ 2744 ಪ್ರಕರಣಗಳು ಕರ್ನಾಟಕದಲ್ಲೇ ನಡೆದಿದೆ.
ಜಾಗೃತಿ ಅಗತ್ಯ
ಯುವಜನತೆಗೆ ರಸ್ತೆ ಸುರಕ್ಷತೆ ಬಗ್ಗೆ ಮತ್ತಷ್ಟು ತಿಳಿವಳಿಕೆ ನೀಡಬೇಕಾಗಿದೆ. ಕುಟುಂಬದಲ್ಲಿಯೂ ಈ ಬಗ್ಗೆ ಚರ್ಚೆ ಹುಟ್ಟಿಕೊಂಡರೆ ಜಾಗೃತಿ ಮೂಡಿಸಲು ಸಾಧ್ಯ ಎಂದು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೇರಳವೂ ಕಡಿಮೆ ಏನಿಲ್ಲ
ವರದಿ ಹೇಳುವಂತೆ ಕೇರಳವನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ 13 ರಾಜ್ಯಗಳಲ್ಲಿಯೇ ಶೇ. 83.2 ಅಪರಾಧ ಪ್ರಕರಣಗಳು ನಡೆದಿವೆ. ರಾಜ್ಯದ 26628ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ 26219 ಜನರು ಸಹ ತಮ್ಮ ಜೀವಕ್ಕೆ ರಸ್ತೆ ಅಪಘಾತದಿಂದ ಕುತ್ತು ತಂದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಹೆಚ್ಚಿನ ಸಂಶೋಧನೆ ನಡೆಯಬೇಕಿದೆ
ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಮಾಡಿರುವ ಸಮೀಕ್ಷೆ ಅನೇಕ ಸಂಗತಿಗಳನ್ನು ಬಹಿರಂಗ ಮಾಡಿದ್ದು ಅಪಘಾತದಲ್ಲಿ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಸ್ಥಿತಿ ಹೇಗಿದೆ. ನಿಜವಾಗಿಯೂ ಅವರಿಗೆ ಸರ್ಕಾರ ಮತ್ತು ವಿಮೆಯ ಸೌಲಭ್ಯ ದೊರೆತಿದೆಯೇ? ಎಂಬ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ ಎಂದು ಹೇಳಿದೆ.