ಕೇರಳದ ಗಡಿ ಕ್ಯಾತೆ; ಸುಪ್ರೀಂ ಮೆಟ್ಟಿಲೇರಲಿದೆ ಕರ್ನಾಟಕ
ಬೆಂಗಳೂರು, ಏಪ್ರಿಲ್ 02 : ಕೊರೊನಾ ಹರಡದಂತೆ ತಡೆಯಲು ದೇಶದ ಪ್ರಮುಖ ರಾಜ್ಯಗಳು ಅಂತರರಾಜ್ಯ ಗಡಿ ಬಂದ್ ಮಾಡಿವೆ. ಕರ್ನಾಟಕವೂ ಸಹ ಕೇರಳಕ್ಕೆ ಸಂಪರ್ಕಿಸುವ ಗಡಿಯನ್ನು ಬಂದ್ ಮಾಡಿದೆ. ಆದರೆ, ಈ ವಿಚಾರ ರಾಜಕೀಯ ಸ್ವರೂಪ ಪಡೆದಿದೆ.
ಕರ್ನಾಟಕ-ಕೇರಳ ಗಡಿ ಮಾರ್ಗವನ್ನು ತೆರೆಯುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ಕರ್ನಾಟಕ ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕದ ಕಾಸರಗೋಡಿನಲ್ಲಿ ಸುಮಾರು 120 ಕೊರೊನಾ ಸೋಂಕಿತರು ಇದ್ದಾರೆ. ನೂರಾರು ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಕಾಸರಗೋಡಿನಿಂದ ಸೋಂಕು ಕರ್ನಾಟಕಕ್ಕೆ ಹಬ್ಬಬಾರದು ಎಂದು ಕರ್ನಾಟಕ ಗಡಿಯನ್ನು ಬಂದ್ ಮಾಡಿದೆ.

ಕೇರಳ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೇಲೆ ಗಡಿ ತೆರೆಯುವಂತೆ ಒತ್ತಡ ಹೇರುತ್ತಿದೆ. ಗಡಿ ತೆರೆದರೆ ಕಾಸರಗೋಡಿನ ರೋಗಿಗಳು ದಕ್ಷಿಣ ಕನ್ನಡದ ಆಸ್ಪತ್ರೆಗಳಿಗೆ ಆಗಮಿಸಲಿದ್ದಾರೆ. ಯಡಿಯೂರಪ್ಪ ಗಡಿಯನ್ನು ತರೆಯದಿರುವ ನಿಲುವನ್ನು ಹೊಂದಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಕುರಿತು ಮಾತನಾಡಿದ್ದು, "ನಮಗೆ ಸುಪ್ರೀಂಕೋರ್ಟ್ಗೆ ಹೋಗುವ ಅವಕಾಶವಿದೆ. ನಾವು ಅರ್ಜಿಯನ್ನು ಸಲ್ಲಿಸಲಿದ್ದೇವೆ" ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಗಡಿ ತೆರೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ದಕ್ಷಿಣ ಕನ್ನಡ, ಕೊಡಗು ಮೂಲಕ ಕೇರಳ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸ್ಥಳೀಯರು ಜೆಸಿಬಿ ಸಹಾಯದಿಂದ ಮಣ್ಣನ್ನು ಸಹ ತಂದು ಸುರಿದಿದ್ದು ವಾಹನಗಳು ಓಡಾಡಲು ಸಾಧ್ಯವಿಲ್ಲದಂತೆ ಮಾಡಿದ್ದಾರೆ.
ಕೇರಳದ ಸಂಸದರೊಬ್ಬರು ಗಡಿಯನ್ನು ತೆರೆಯಲು ಸೂಚನೆ ನೀಡಬೇಕು ಈಗಾಗಲೇ ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈಗ ಕರ್ನಾಟಕ ಸರ್ಕಾರವೂ ಸುಪ್ರೀಂ ಮೊರೆ ಹೋಗಲು ತೀರ್ಮಾನಿಸಿದೆ.












Click it and Unblock the Notifications