ಕಾಶಿಯಾತ್ರೆ ಯೋಜನೆಯಡಿ 30,000 ಕಾಶಿಯಾತ್ರಾರ್ಥಿಗಳಿಗೆ 5ಸಾವಿರ ರೂ. ಸಹಾಯಧನ
ಬೆಂಗಳೂರು ಜೂ. 28: ಕಾಶಿಯಾತ್ರೆಗೆ ರಾಜ್ಯದ ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯವ್ಯಯದಲ್ಲಿ ಘೋಷಿಸಿದ್ದ ಸಹಾಯಧನ ಯೋಜನೆಗೆ ಅಂತಿಮ ಮಾರ್ಗಸೂಚಿ ನಿಯಗಳನ್ನು ರೂಪಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ. ಇದರಿಂದ ಕಾಶಿ ಯಾತ್ರೆ ಕೈಗೊಂಡಿದ್ದ ರಾಜ್ಯದ ಸಾವಿರಾರು ಯಾತ್ರಾರ್ಥಿಗಳಿಗೆ 5,000ರೂ. ಸಹಾಯಧನ ಸಿಗಲಿದೆ.
ರಾಜ್ಯ ಸರ್ಕಾರ ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನ ನೀಡಲು ತಾತ್ವಿಕ ಅನುಮೋದನೆ ನೀಡಿದೆ. ವಾರ್ಷಿಕ 30,000 ಯಾತ್ರಾರ್ಥಿಗಳಿಗೆ ಐದು ಸಾವಿರ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಿದೆ. ಪ್ರಸಕ್ತ ವರ್ಷ 2022ರ ಏ.1ರಿಂದ ಜೂನ್ 30ರವೆರೆಗೆ ಕಾಶಿಯಾತ್ರೆ ಕೈಗೊಂಡ 18ವರ್ಷ ಮೇಲ್ಪಟ್ಟವರು ಅಗತ್ಯ ದಾಖಲೆ ಸಲ್ಲಿಸಿ ಸರ್ಕಾರದಿಂದ ಸಹಾಯಧನ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ ನಿವಾಸಿಗಳನ್ನು ಕಾಶಿ ವಿಶ್ವನಾಥ ಸ್ವಾಮಿಯ ದೇವಾಲಯಕ್ಕೆ ತೆರಳಲು (ಕಾಶಿಯಾತ್ರೆ) ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ಏ.1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತಂದಿದೆ. ಪ್ರತಿ ವರ್ಷ ಕಾಶಿಯಾತ್ರೆ ಮಾಡುವ 18ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಪ್ರಸ್ತುತ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಸಹಾಯಧನ ಪಡೆಯಲು ಬೇಕಾದ ಅರ್ಹತೆಗಳೇನು?
ಕಳೆದ ಏಪ್ರಿಲ್ 1ಕ್ಕೆ 18ವರ್ಷ ವಯಸ್ಸು ಪೂರೈಸಿದ ಹಾಗೂ ಕರ್ನಾಟಕ ನಿವಾಸಿಗಳು ಮಾತ್ರ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಈ ಸಂಬಂಧ ಪೂರಕ ದಾಖಲೆಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿ ಹಣ ಪಡೆಯಬಹುದು.
ಏ.1ರಿಂದ ಜೂ.30ರೊಳಗೆ ಕಾಶಿ ವಿಶ್ವನಾಥನ ಭಕ್ತರು ಕಾಶಿಗೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಅಥವಾ ದೇವಾಲಯಕ್ಕೆ ಹೋಗಿ ಬಂದ ಬಗ್ಗೆ ಟಿಕೆಟ್, ಪೂಜಾ ರಶೀದಿ ಸೇರಿದಂತೆ ದೇವಾಲಯಕ್ಕೆ ತೆರಳಿ ಬಂದ ಯಾವುದೇ ದಾಖಲೆಗಳನ್ನು ಒದಗಿಸಬೇಕು. ವಯಸ್ಸು ಹಾಗೂ ಅವರು ರಾಜ್ಯ ನಿವಾಸಿಯೇ ಎಂಬುದಕ್ಕೆ ಆಧಾರ್, ಮತದಾನದ ಗುರುತಿನ ಚೀಟಿ, ಪಡಿತರ ಚೀಟಿ ಯನ್ನು ಧಾರ್ಮಿಕ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು.
ಬಯೊಮೆಟ್ರಿಕ್ ಕಡ್ಡಾಯ
ಇನ್ನು ಜುಲೈ 1ರಿಂದ ಯಾತ್ರೆ ಕೈಗೊಳ್ಳುವವರು ಸಂಬಂಧಿಸಿದ ದಾಖಲೆಗಳನ್ನು ವಾರಣಾಸಿಯ ಕರ್ನಾಟಕ ರಾಜ್ಯಛತ್ರದ ಕಚೇರಿ ವ್ಯವಸ್ಥಾಪಕ ಕಚೇರಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದ ವಿವರಗಳ ಸಹಿತ ಆನ್ಲೈನ್ ಮೂಲಕ ಇಲ್ಲವೇ ಖುದ್ದು ಭೇಟಿ ನೀಡಿ ಧಾರ್ಮಿಕ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕಿದೆ.
ಬಯೋಮೆಟ್ರಿಕ್ ಇಲ್ಲದ್ದಿದ್ದರೆ ಅಂತವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಒಬ್ಬರು ಒಂದು ಬಾರಿ ಮಾತ್ರ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಸಹಾಯಧನ ಪಡೆಯುವವರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
15ಕೋಟಿ ಅನುದಾನಕ್ಕೆ ಕೋರಿಕೆ
ರಾಜ್ಯ ಸರ್ಕಾರ 2022-23ರ ಆಯವ್ಯಯದಲ್ಲಿ ಕಾಶಿ ಯಾತ್ರೆಗೆ ಪ್ರೋತ್ಸಾಹಿಸಲು ಸಹಾಯಧನ ನೀಡುವ ಬಗ್ಗೆ ಯೋಜನೆ ಘೋಷಿಸಿತ್ತು. ಅದರಂತೆ ಸಹಾಯಧನ ನೀಡಲು ಮಾರ್ಗಸೂಚಿ ನಿಯಮಗಳನ್ನು ರೂಪಿಸಿ ಇದೀಗ ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ. ಉದ್ದೇಶಿತ 30,000 ಯಾತ್ರಾರ್ಥಿಗಳಿಗಾಗಿ ಒಟ್ಟು 15ಕೋಟಿ ರು. ಅನುದಾನ ಮಂಜೂರು ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕೋರಿದ್ದರು ಎನ್ನಲಾಗಿದೆ.
ವಿಶೇಷ ರೈಲು ವ್ಯವಸ್ಥೆ: ಜೊಲ್ಲೆ
'ಭಾರತ್ ಗೌರವ್' ಯೋಜನೆಯಡಿ ಕಾಶಿಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವ ಚಿಂತನೆಯಲ್ಲಿದ್ದೇವೆ. ಈ ಕುರಿತಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಚರ್ಚಿಸಿದೆ. ಆದಷ್ಟು ಶೀಘ್ರವೇ ಕಾಶಿ ಯಾತ್ರೆಗೆ ವಿಶೇಷ ರೈಲು ಆರಂಭವಾಗಲಿದೆ ಎಂದು ಸಚಿವ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿದ್ದಾರೆ.
Recommended Video