ಜೆಡಿಎಸ್ ಭಿನ್ನಮತ ಅಂತಿಮ ಘಟ್ಟಕ್ಕೆ, ಮುಂದೇನು?
ಬೆಂಗಳೂರು, ಜೂನ್ 11 : ಹಲವು ದಿನಗಳಿಂದ ಪಕ್ಷದ ವರಿಷ್ಠರು ಮತ್ತು ಜೆಡಿಎಸ್ ಭಿನ್ನಮತೀಯ ಶಾಸಕರ ನಡುವೆ ನಡೆಯುತ್ತಿದ್ದ ಜಟಾಪಟಿ ಇಂದು ತಾರ್ಕಿಕ ಅಂತ್ಯ ಕಂಡಿದೆ. ರಾಜ್ಯಸಭೆ ಚುನಾವಣೆಯಲ್ಲಿ 8 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪಕ್ಷದ ವಿಪ್ ಉಲ್ಲಂಘನೆ ಮಾಡಿದರು. ವರಿಷ್ಠರಿಗೆ ಮುಖಭಂಗ ಉಂಟುಮಾಡಿದರು.
ಕಳೆದ ಕೆಲವು ದಿನಗಳಿಂದ ಜಮೀರ್ ಅಹಮದ್ ಖಾನ್, ಇಕ್ಬಾಲ್ ಅನ್ಸಾರಿ, ಚೆಲುವರಾಯ ಸ್ವಾಮಿ, ಬಾಲಕೃಷ್ಣ ಮುಂತಾದವರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದರು. ಆದರೆ, ಶನಿವಾರ ಭಿನ್ನಮತೀಯ ಶಾಸಕರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು ಸ್ವತಃ ಪಕ್ಷದ ವರಿಷ್ಠರಿಗೆ ತಲೆನೋವು ತಂದಿದೆ. [ದೇವೇಗೌಡ, ಎಚ್ಡಿಕೆಗೆ ಇಕ್ಬಾಲ್ ಅನ್ಸಾರಿ ಬಹಿರಂಗ ಸವಾಲು!]
ರಾಜ್ಯಸಭೆ ಚುನಾವಣೆಯಲ್ಲಿ ಐವರು ಶಾಸಕರು ಕಾಂಗ್ರೆಸ್ 3ನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಮತ ನೀಡುತ್ತೇವೆ ಎಂದು ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಘೋಷಣೆ ಮಾಡಿದ್ದರು. ಈ ಭಿನ್ನಮತೀಯರ ಗುಂಪಿಗೆ ಇನ್ನೂ ಮೂರು ಜನ ಸೇರಿ ಎಂಟು ಶಾಸಕರು ಬಂಡಾಯದ ಕಹಳೆ ಊದಿದ್ದಾರೆ. ['ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ']
'ಭಿನ್ನಮತೀಯರ ಜೊತೆ ಮಾತುಕತೆ ನಡೆಸುವುದು ಮುಗಿದ ಅಧ್ಯಾಯ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದ್ದರಿಂದ, ಬಂಡಾಯ ಶಾಸಕರನ್ನು ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ. ಭಾನುವಾರ ಈ ಕುರಿತು ಸಭೆ ನಡೆಯಲಿದ್ದು, ತೆಗೆದುಕೊಳ್ಳುವ ತೀರ್ಮಾನವೇನು? ಎಂಬುದು ಕುತೂಹಲ ಮೂಡಿಸಿದೆ. ['ಜೆಡಿಎಸ್ ಪಕ್ಷ ತಾಯಿ ಇದ್ದಂತೆ, ತಾಯಿ ಮರೆತರೆ ಅನ್ನ ಸಿಗುವುದಿಲ್ಲ']
'ಜೆಡಿಎಸ್ ಪಕ್ಷ ದೇವೇಗೌಡ ಮತ್ತು ಅವರ ಮಕ್ಕಳ ಸ್ವಂತ ಬಸ್ ಇದ್ದ ಹಾಗೆ. ನಾವೆಲ್ಲ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೆ. ಜೆಡಿಎಸ್ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರೆ, ದೇವೇಗೌಡರು ಅವರನ್ನು ದೂರವಿಡುತ್ತಿದ್ದಾರೆ' ಇದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಕೆಲವು ದಿನಗಳ ಹಿಂದೆ ಹೇಳಿದ್ದ ಮಾತು.
ಕಠಿಣ ನಿರ್ಧಾರ ಅಂದ್ರು ಎಚ್ಡಿಕೆ : ಭಿನ್ನಮತೀಯ ಚಟುವಟಿಕೆಗಳಿಂದ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಸಾಕಾಗಿ ಹೋಗಿದೆ. 'ಮೂರು ವರ್ಷಗಳಿಂದ ಇವರನ್ನು ಸಹಿಸಿಕೊಂಡಿದ್ದೇವೆ. ಈ ಬಾರಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ಶನಿವಾರ ವಿಧಾನಸೌಧದಲ್ಲಿ ಕುಮಾರಸ್ವಾಮಿ ಹೇಳಿದರು. ಅದು ಏನು ಎಂದು? ಕಾದು ನೋಡಬೇಕು.
ವರಿಷ್ಠರ ಮುಂದಿನ ನಡೆ ಏನು? : ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಬೆಂಲಿಸಿದ ಶಾಸಕರು ತಕ್ಷಣದಿಂದಲೇ ಜಾರಿಗೆ ಬರುವಂತೆ ಜೆಡಿಎಸ್ ಅಮಾನತುಗೊಳಿಸಬಹುದು. ಇಲ್ಲವಾದಲ್ಲಿ ಕೊನೆಯ ಪ್ರಯತ್ನವಾಗಿ ಭಿನ್ನಮತೀಯರ ಜೊತೆ ಮಾತುಕತೆ ನಡೆಸಬಹುದು.
ಬಂಡಾಯ
ಶಾಸಕರು
*
ಜಮೀರ್
ಅಹಮದ್
ಖಾನ್
(ಚಾಮರಾಜಪೇಟೆ)
*
ಕೆ.ಗೋಪಾಲಯ್ಯ
(ಮಹಾಲಕ್ಷ್ಮೀ
ಪುರ)
*
ಅಖಂಡ
ಶ್ರೀನಿವಾಸಮೂರ್ತಿ
(ಪುಲಿಕೇಶಿ
ನಗರ)
*
ಚೆಲುವರಾಯ
ಸ್ವಾಮಿ
(ನಾಗಮಂಗಲ)
*
ಎಚ್.ಸಿ.ಬಾಲಕೃಷ್ಣ
(ಮಾಗಡಿ)
*
ಇಕ್ಬಾಲ್
ಅನ್ಸಾರಿ
(ಗಂಗಾವತಿ)
*
ರಮೇಶ್
ಬಂಡಿಸಿದ್ದೇಗೌಡ
(ಶ್ರೀರಂಗಪಟ್ಟಣ)
*
ಭೀಮಾ
ನಾಯಕ್
(ಹಗರಿಬೊಮ್ಮನಹಳ್ಳಿ)