Gram Panchayat: ಕಂದಾಯ ಇಲಾಖೆಯಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 20: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಡಕ್ ಸೂಚನೆಯೊಂದನ್ನು ನೀಡಿದೆ. ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಬೆಂಗಳೂರು ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಬರೆದಿರುವ ಪತ್ರದಲ್ಲಿ ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವೃಂದದ ಸಂಘಗಳ ನೇತೃತ್ವದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಟೋಬರ್ 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಸೇವೆಗಳನ್ನು ನಿಲ್ಲಿಸಿ ಅನಿರ್ಧಿಷ್ಟಾವಧಿ ಹೋರಾಟ ಮಾಡುವುದಾಗಿ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಲಾಗಿದೆ.

ಸದರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವೃಂದದ ಸಂಘಗಳ ಬೇಡಿಕೆಗಳ ಕುರಿತು ಚರ್ಚಿಸಲು ದಿನಾಂಕ 30.09.2024 ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಆದರೆ ಸದರಿ ಸಭೆಗೆ ಸಂಘದಿಂದ ಯಾರೂ ಹಾಜರಾಗಿರುವುದಿಲ್ಲ.
ಮಾನ್ಯ ಸಚಿವರ ಆದೇಶದಂತೆ ದಿನಾಂಕ 30.09.2024 ರಂದು ಮಧ್ಯಾಹ್ನ 3 ಗಂಟೆಗೆ ಮಾನ್ಯ ಇಲಾಖಾ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಮಾನ್ಯ ಸಚಿವರು ತಮ್ಮ ಕಾರ್ಯಕಲಾಪಗಳನ್ನೆಲ್ಲ ಬದಿಗೊತ್ತಿ, ಸದರಿ ಸಭೆಗೆ ಹಾಜರಾಗಿ ಸಂಘದ ಪ್ರತಿನಿಧಿಗಳಿಗಾಗಿ ಕಾದಿದ್ದರೂ ಸಹ ಸದರಿ ಸಭೆಗೂ ಸಂಘಗಳಿಂದ ಯಾರೂ ಹಾಜರಾಗಿರುವುದಿಲ್ಲ ಎಂದು ಹೇಳಿದೆ.
ನೌಕರರು ಸಭೆಗೆ ಬಂದಿಲ್ಲ: ದಿನಾಂಕ 30.09.2024 ರಂದು ಕರೆದ 2 ಸಭೆಗಳಿಗೆ ನೌಕರರ ವೃಂದದ ಸಂಘಗಳಿಂದ ಯಾರೂ ಹಾಜರಾಗದ ಕಾರಣ, ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಸಭೆ ದಿನಾಂಕ ನಿಗದಿಪಡಿಸಲು ಮಾನ್ಯ ಸಚಿವರು ನಿರ್ದೇಶನ ನೀಡಿದಂತೆ, ದಿನಾಂಕ 01.10.2024ರಂದು ಮಧ್ಯಾಹ್ನ 3.30 ಗಂಟೆಗೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೂ ಸಹ ಸಂಘಗಳಿಂದ ಯಾರೂ ಹಾಜರಾಗಿರುವುದಿಲ್ಲ. ಆದಾಗ್ಯೂ, ಮಾನ್ಯ ಇಲಾಖಾ ಸಚಿವರು, ಸಂಘದವರ ಬೇಡಿಕೆಗಳ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಕಾರಾತ್ಮಕವಾಗಿ ಚರ್ಚಿಸಿರುತ್ತಾರೆ.
ದಿನಾಂಕ 04.10.2024 ರಂದು ಫ್ರೀಡಂ ಪಾರ್ಕ್ ಮೈದಾನ, ಬೆಂಗಳೂರು ಇಲ್ಲಿನ ಪ್ರತಿಭಟನಾ ಸ್ಥಳಕ್ಕೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ರವರು ಖುದ್ದು ಆಗಮಿಸಿ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಸ್ವೀಕರಿಸಿ ಬೇಡಿಕೆಗಳ ಕುರಿತು ಅವರ ಜೊತೆ ಚರ್ಚಿಸಿರುತ್ತಾರೆ.
ಅದೇ ದಿನ ಸಂಜೆ 5.30 ಗಂಟೆಗೆ, ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆಯನ್ನು ಕರೆದು ಸದಸ್ಯರ ಒಕ್ಕೂಟ ಮತ್ತು ನೌಕರರ ವೃಂದದ ಸಂಘಗಳ ರಾಜ್ಯಾಧ್ಯಕ್ಷರು ಮತ್ತು ಪ್ರತಿನಿಧಿಗಳೊಂದಿಗೆ ಅವರ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಸದರಿಯವರ ಬೇಡಿಕೆಗಳ ಕ್ರಮದ ಕುರಿತು ನಡವಳಿಯನ್ನು ಸಹ ನೀಡಲಾಗಿರುತ್ತದೆ.
ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಆದೇಶದಂತೆ ಸಂಘಗಳ ಬೇಡಿಕೆ ಕುರಿತು ಚರ್ಚಿಸಲು ದಿನಾಂಕ 10.10.2024 ರಂದು ಅಪರಾಹ್ನ 3ಗಂಟೆಗೆ ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿರುತ್ತದೆ. ಆದರೂ ಸಹ ಗ್ರಾಮ ಪಂಚಾಯತಿ ನೌಕರರು ಹಾಗೂ ಸಿಬ್ಬಂದಿಗಳು ಕರ್ತವ್ಯಕ ಹಾಜರಾಗದೇ ಇರುವುದು ಕಂಡು ಬಂದಿರುತ್ತದೆ.
ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021 ನಿಯಮ 9ರಂತೆ ಯಾವುದೇ ಸರ್ಕಾರಿ ನೌಕರನು ಸಾರ್ವಜನಿಕ ಸುವ್ಯವಸ್ಥೆಗೆ ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ಭಾಗವಹಿಸತಕ್ಕದಲ್ಲ ಹಾಗೂ ಎಷ್ಟೇ ಸಂಖ್ಯೆಯ ಸರ್ಕಾರಿ ನೌಕರರೊಡನೆ ಸೇರಿ ಯಾವುದೇ ಬಗೆಯ ಮುಷ್ಕರಕ್ಕೆ ತೊಡಗತಕ್ಕದ್ದಲ್ಲ.
ಸರ್ಕಾರದ ಹಂತದಲ್ಲಿ ಈಗಾಗಲೇ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದರಿಂದ ಕೂಡಲೇ ಸಾರ್ವಜನಿಕ ಸೇವೆಗಳಿಗೆ ವ್ಯತ್ಯಯವಾಗದಂತೆ ಕೆಲಸ ನಿರ್ವಹಿಸಲು ನಿರ್ದೇಶನ ನೀಡುವುದು ಹಾಗೂ ಕರ್ತವ್ಯಕ್ಕೆ ಹಾಜರಾಗಲು ವಿಫಲರಾದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳಂತೆ ಕ್ರಮವಹಿಸಲು ತಿಳಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.












Click it and Unblock the Notifications