Karnataka rain: ಕರಾವಳಿಯಲ್ಲಿ ದುರ್ಬಲವಾದ ಮಳೆ ಒಳನಾಡಿನಲ್ಲಿ ಸೆ.26ರವರೆಗೆ ಸಕ್ರಿಯ
ಬೆಂಗಳೂರು, ಸೆಪ್ಟಂಬರ್ 22: ಬರಗಾಲ ಎದುರಿಸಿದ್ದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿದ ಮುಂಗಾರು ಮಳೆ ದುರ್ಬಲಗೊಂಡಿದ್ದು, ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತಕ್ಕ ಮಟ್ಟಿಗೆ ಕರುಣೆ ತೋರಿದೆ. ಒಳನಾಡಿನ ಮೂರು ಜಿಲ್ಲೆಗಳಿಗೆ ಭಾರಿ ಮಳೆ ಬರುವ ಪ್ರಯುಕ್ತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ವಿವಿಧೆಡೆ ಮುಂಗಾರು ಮಳೆ ನಿರೀಕ್ಷೆಯಷ್ಟು ಸುರಿಯದೇ ರೈತರನ್ನು ಸಂಕಷ್ಟಕ್ಕೆ ದೂಡಿತು. ಅದಲ್ಲದೇ ಜುಲೈನಲ್ಲಿ ಜೋರು ಸುರಿದಿದ್ದ ಮಳೆ, ಇತ್ತೀಚೆಗೆ ಕೆಲವೆಡೆ ಧಾರಾಕಾರವಾಗಿ ಸುರಿದಿತ್ತು. ಇದೀಗ ಮತ್ತೆ ದುರ್ಬಲವಾಗುವ ಲಕ್ಷಣಗಳು ಕಂಡು ಬಂದಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವರದಿ ಪ್ರಕಾರ, ಉತ್ತರ ಒಳನಾಡಿನ ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ನಾಳೆ ಶನಿವಾರ ಸೆಪ್ಟಂಬರ್ 23ರಂದು ಅತ್ಯಧಿಕ ಮಳೆ ಆಗಲಿದೆ. ಈ ಸಂಬಂಧ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬಾಗಲೋಟೆ, ಬೆಳಗಾವಿ, ರಾಯಚೂರು, ಹಾವೇರಿ, ಗದಗ, ಕೊಪ್ಪಳ, ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂದಿನಿಂದ ಸೆಪ್ಟಂಬರ್ 26 ರವರೆಗೆ ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಕೆಲವೆಡೆ ಜೋರು ಮಳೆ ಬೀಳಲಿದೆ.
ನಾಳೆ, ನಾಡಿದ್ದು ಎರಡು ದಿನ ವ್ಯಾಪಕ ಮಳೆ
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ಶಿವಮೊಗ್ಗ, ತುಮಕೂರು, ದಾವಣಗೆರೆ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಮುಂದಿನ ಶನಿವಾರ ಮತ್ತ ಭಾನುವಾರ ಎರಡು ದಿನ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೆಲವು ದಿನಗಳಿಂದ ರಾಜ್ಯದ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಆಗಾಗ ಕಂಡು ಬರುತ್ತಿದ್ದ ಮಳೆ ಮತ್ತೆ ಕಡಿಮೆಯಾಗಿದೆ. ತಂಪು ವಾತಾವರಣ ಕಡಿಮೆ ಆಗಿ, ಕ್ರಮೇಣ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತೆ ಶುಷ್ಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳು ಇವೆ.
ಕಲ್ಯಾಣ ಕರ್ನಾಟಕದಲ್ಲಿ ಭಾರಿ ಮಳೆ ದಾಖಲು
ಕಳೆದ 24 ಗಂಟೆಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅತ್ಯಧಿಕ ಮಳೆ ಆಗಿದೆ. ಕಲಬುರಗಿಯ ಸೇಡಂನಲ್ಲಿ7 ಸೆಂಟಿ ಮೀಟರ್ ಮಳೆ ಆಗಿದೆ. ಕಲಬುರಗಿಯ ಇನ್ನಿತರ ಕಡೆಗಳಲ್ಲಿ ಮಳೆ ಹೆಚ್ಚಾಗಿದೆ. ಉತ್ತರ ಕನ್ನಡ, ರಾಯಚೂರು, ಧಾರವಾಡ, ಕೊಡಗು, ಬೀದರ್ ಸೇರಿದಂತೆ ವಿವಿಧೆಡೆ ಉತ್ತಮ ಮಳೆ ದಾಖಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ನಾಲ್ಕೈದು ದಿನ ಆಗಾಗ ಜಿಟಿ ಜಿಟಿ ಮಳೆ ಸುರಿಯಲಿದೆ. ಇದರಲ್ಲಿ ಇಂದು ಶುಕ್ರವಾರ ಮಾತ್ರ ರಾತ್ರಿ ಅತ್ಯಧಿಕ ಮಳೆ ದಾಖಲಾಗುವ ಸಾಧ್ಯತೆಗಳು ಇವೆ. ಇಂದು ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಕಂಡು ಬಂದಿದೆ.












Click it and Unblock the Notifications