ಏ.24ರಿಂದ ಕರ್ನಾಟಕ ಹೈಕೋರ್ಟ್ ಬೇಸಿಗೆ ರಜೆ, 8 ದಿನ ಮಾತ್ರ ವಿಚಾರಣೆ
ಬೆಂಗಳೂರು, ಏಪ್ರಿಲ್ 24; ಕರ್ನಾಟಕ ಹೈಕೋರ್ಟ್ನ ಬೇಸಿಗೆ ರಜೆ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 24 ರಿಂದ ಮೇ 20ರ ತನಕ ರಜೆ ಇರಲಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಬೇಸಿಗೆ ರಜೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಎಂ. ಚಂದ್ರಶೇಖರ ರೆಡ್ಡಿ ಈ ಕುರಿತು ಅಧಿಸೂಚನೆ ಪ್ರಕಟಿಸಿದ್ದಾರೆ. ಬೇಸಿಗೆ ರಜೆ ಅವಧಿಯಲ್ಲಿ ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡದ ಪೀಠಗಳಲ್ಲಿ ಒಟ್ಟು 8 ದಿನಗಳ ಕಾಲ ಮಾತ್ರ ವಿಚಾರಣೆ ನಡೆಯಲಿದೆ.

ಏಪ್ರಿಲ್ 24ರ ಸೋಮವಾರದಿಂದ ಮೇ 20ರ ತನಕ ಹೈಕೋರ್ಟ್ ಬೇಸಿಗೆ ರಜೆ ಇರಲಿದೆ. ರಜೆ ಅವಧಿಯಲ್ಲಿ ಏಪ್ರಿಲ್ 25, 27, ಮೇ 2, 4, 9, 11, 16 ಮತ್ತು 18ರಂದು ಒಂದು ವಿಭಾಗೀಯ ಪೀಠ ಮತ್ತು ಎರಡು ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಿವೆ.
ಅಧಿಸೂಚನೆಯಲ್ಲಿ ಬೇಸಿಗೆ ರಜೆ ಕಾಲದ ವಿಶೇಷ ಪೀಠಗಳು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಿವೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ ಸ್ವರೂಪದ ಅರ್ಜಿಗಳನ್ನು ವಿಚಾರಣೆ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ.

ರಜಾ ಕಾಲದ ಪೀಠಗಳು ತುರ್ತು ವಿಚಾರಣೆ ಕೋರಿ ಸಲ್ಲಿಸುವ, ತಡೆಯಾಜ್ಞೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಬೇಸಿಗೆ ರಜೆ ಅವಧಿಯ ಪೀಠಗಳ ಮುಂದೆ ತುರ್ತು ವಿಚಾರಣೆ ಕೋರುವ ವಕೀಲರು ಇ-ಫೈಲಿಂಗ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಮೇ 20ರಂದು ರಜೆ ಅವಧಿ ಪೂರ್ಣಗೊಂಡ ನಂತರ ಬೆಂಗಳೂರು, ಕಲಬುರಗಿ ಮತ್ತು ಧಾರವಾಡ ಪೀಠದಲ್ಲಿ ಎಂದಿನಂತೆ ಅರ್ಜಿಗಳ ವಿಚಾರಣೆ ನಡೆಯಲಿದೆ.
ಪ್ರತಿ ವರ್ಷವೂ ರಜೆ; ಕರ್ನಾಟಕ ಹೈಕೋರ್ಟ್ಗೆ ಪ್ರತಿ ವರ್ಷವೂ ಬೇಸಿಗೆಯಲ್ಲಿ ಹೈಕೋರ್ಟ್ಗೆ ರಜೆ ಇರುತ್ತದೆ. ವರ್ಷದ ಕ್ಯಾಲೆಂಡರ್ ಪ್ರಕಟಿಸುವಾಗ ಹೈಕೋರ್ಟ್ನ ಬೇಸಿಗೆ ರಜೆ ಯಾವಾಗ ಇರಲಿದೆ ಎಂದು ವೇಳಾಪಟ್ಟಿ ಪ್ರಕಟ ಮಾಡಲಾಗುತ್ತದೆ. ಈ ಅವಧಿಯಲ್ಲಿ ಆಯ್ದ ದಿನಗಳು ತುರ್ತು ಅರ್ಜಿಗಳ ವಿಚಾರಣೆ ಮಾತ್ರ ನಡೆಯಲಿದೆ.
ತುರ್ತು ಪ್ರಕರಣಗಳ ವಿಚಾರಣೆಯನ್ನು ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವನ್ನ್ಉ ರಚನೆ ಮಾಡಲಾಗುತ್ತದೆ.
ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಒಂದೂವರೆ ತಿಂಗಳು ಲಾಕ್ಡೌನ್ ಆಗಿತ್ತು. ಆ ಅವಧಿಯಲ್ಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಳು, ಸೆಷನ್ಸ್ ನ್ಯಾಯಾಲಯಗಳ ಕಲಾಪ ನಡೆದಿರಲಿಲ್ಲ. ಆದ್ದರಿಂದ ಆಗ ಬೇಸಿಗೆ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠದಲ್ಲಿ ಏಪ್ರಿಲ್ 25 ಮತ್ತು 27ರಂದು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ಟಿ. ಜಿ. ಶಿವಶಂಕರೇಗೌಡ ನೇತೃತ್ವದ ವಿಭಾಗೀಯ ಪೀಠವು ಕಾರ್ಯ ನಿರ್ವಹಣೆ ಮಾಡಲಿದೆ. ನ್ಯಾಯಮೂರ್ತಿಗಳಾದ ರವಿ ವಿ. ಹೊಸಮನಿ ಮತ್ತು ಸಿ. ಎಂ. ಪೂಣಚ್ಚ ನೇತೃತ್ವದ ಏಸಕದಸ್ಯ ಪೀಠಗಳು ಬೇಸಿಗೆ ರಜೆ ಕಾಲದ ಪೀಠಗಳಾಗಿ ಕರ್ತವ್ಯ ನಿರ್ವಹಿಸಲಿವೆ ಎಂದು ಅಧಿಸೂಚನೆ ತಿಳಿಸಿದೆ.
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಮತ್ತು ಸಿ. ಎಂ. ಜೋಶಿ ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ಆಲಿಸಲಿದ್ದಾರೆ. ಬಳಿಕ ಏಕಸದಸ್ಯ ಪೀಠದಲ್ಲಿ ಕುಳಿತು ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
ಕಲಬುರಗಿಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್. ಜಿ. ಪಂಡಿತ್ ಮತ್ತು ಅಶೋಕ್ ಎಸ್. ಕಿಣಗಿ ಮೊದಲು ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲಿದ್ದಾರೆ. ಆನಂತರ ಏಕಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಸೂಚನೆ ಹೇಳಿದೆ.












Click it and Unblock the Notifications