ಕರಾವಳಿ, ಮಲೆನಾಡಲ್ಲಿ ಮುಂದುವರಿದ ಮಳೆ ಅಬ್ಬರ
ಬೆಂಗಳೂರು, ಜೂ, 26: ರಾಜ್ಯಾದ್ಯಂತ ಕೊಂಚ ತಣ್ಣಗಾಗಿದ್ದ ವರುಣ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದಾನೆ. ಧಾರಾಕಾರ ಮಳೆಯಾಗುತ್ತಿರುವ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಅತಿ ಹೆಚ್ಚು ಅಂದರೆ 25 ಸೆಂ ಮೀ ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ ಜಿಲ್ಲೆ ಹೊಸನಗರ, ಕೊಡಗು, ಬಾಗಮಂಡಲ, ಆಗುಂಬೆಯಲ್ಲಿ ಧಾರಾಕಾರ ಮಳೆಯಾಗಿದೆ.[ಧಾರಾಕಾರ ಮಳೆಗೆ ಗುಜರಾತ್ ನಲ್ಲಿ ಜಲಪ್ರಳಯ]
ಮುಂದಿನ 24 ಗಂಟೆ ಅವಧಿಯಲ್ಲಿ ರಾಜ್ಯದ ಘಟ್ಟ ಪ್ರದೇಶ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲ ಪ್ರದೇಶಗಳು ಸಾಧಾರಣ ಮಳೆ ಪಡೆದುಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚಿದ ಒಳಹರಿವು
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ ಜಿಲ್ಲರಯಾದ್ಯಂತ ಮಳೆ ಸುರಿಯುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ತೀವ್ರಗೊಂಡಿರುವುದರಿಂದ ಎಲ್ಲಾ ಜಲಾಶಗಳಿಗೆ ಒಳಹರಿವು ಹೆಚ್ಚಿದೆ. ಯಗಚಿ, ಹೇಮಾವತಿ, ಕಬಿನಿ ಮತ್ತು ಕೆಆರ್ಎಸ್ ಜಲಾಗಳ ಮಟ್ಟ ಭಾರೀ ಪ್ರಮಾಣದ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಣೆಕಟ್ಟೆಯಲ್ಲಿ 15 ಅಡಿ ನೀರು ಹೆಚ್ಚಳವಾಗಿದೆ.
ಕತ್ತಲೆಯಲ್ಲಿ ಮಲೆನಾಡು
ಗಾಳಿ ಮಳೆ ಹೊಡೆತಕ್ಕೆ ಸಿಲುಕಿರುವ ಮಲೆನಾಡಲ್ಲಿ ವಿದ್ಯುತ್ ಮಾಯವಾಗಿದೆ. ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೊಸನಗರ ತಾಲ್ಲೂಕಿನಲ್ಲಿ 400ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು ಹೋಗಿದ್ದು ನಾಗರಿಕರು ಪರಿತಪಿಸುವಂತಾಗಿದೆ.
ಸೇತುವೆಗಳು ಜಲಾವೃತ
ಕೃಷ್ಣಾ ಹಾಗೂ ಉಪ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಚಿಕ್ಕೋಡಿ ತಾಲೂಕಿನಲ ಸೇತುವೆಗಳು ಗುರುವಾರ ಜಲಾವೃತಗೊಂಡಿವೆ. ಕೃಷ್ಣಾ ನದಿ ಪ್ರವಾಹದಿಂದ ಕಲ್ಲೋಳ- ಯಡೂರ ಸೇತುವೆ, ವೇದಗಂಗಾ ನದಿಯಿಂದ ಜತ್ರಾಟ- ಭೀವಶಿ, ಅಕ್ಕೋಳ- ಸಿದ್ನಾಳ, ಭೋಜ್- ಕುನ್ನೂರ ಸೇತುವೆ ಮುಳುಗಿದೆ.
ರಂಗನತಿಟ್ಟು ಬೋಟಿಂಗ್ ಸ್ಥಗಿತ
ಶ್ರೀರಂಗಪಟ್ಟಣ ತಾಲೂಕಿನ ಪ್ರಮುಖ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಕೆಆರ್ಎಸ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಹೊರಬಿಡಲಾಗುತ್ತಿದ್ದು ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಪಾಯಿಂಟ್ನ ಮೆಟ್ಟಿಲು ತನಕ ನೀರು ಹರಿಯುತ್ತಿದೆ.
ಉಕ್ಕುತ್ತಿರುವ ಕುಮಾರಧಾರಾ
ಭಾರೀ ಮಳೆ ಪರಿಣಾಮ ಸುಬ್ರಹ್ಮಣ್ಯ-ಹೊಸಮಠ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಕಡಿತವಾಗಿದೆ. ತೀರ್ಥಹಳ್ಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿರಂತರ ಮಳೆ ಸುರಿಯುತ್ತಿದೆ.