ಅತಿಥಿ ಉಪನ್ಯಾಸಕರು ಶೂ ಪಾಲಿಶ್ ಮಾಡಿದ್ದೇಕೆ?
ಬೆಂಗಳೂರು/ಶಿರಸಿ, ಜನವರಿ, 21: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಉದ್ಯೋಗ ಕಾಯಂಗೊಳಿಸುವುದು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ತರಗತಿಗಳನ್ನು ಬಹಿಷ್ಕಾರ ಮಾಡಿದ್ದಾರೆ.
ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಉಪನ್ಯಾಸಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಶಿರಸಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಗಂಗಾವತಿ, ಕಲಬುರಗಿ ಕೊಪ್ಪಳ, ಕೋಲಾರ,ರಾಯಚೂರು ಸೇರಿದಂತೆ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ 9 ನೇ ದಿನಕ್ಕೆ ಕಾಲಿರಿಸಿದೆ.[ಬೆಳೆಗಾರರಿಗೆ ಹೊಸ ತಾಜಾತನ ನೀಡಲಿದೆಯೇ ಅಡಿಕೆ ಟೀ]
ಕಲಬುರಗಿಯಲ್ಲಿ ಅತಿಥಿ ಉಪನ್ಯಾಸಕರು ಶೂ ಪಾಲಿಶ್ ಮಾಡಿ ಆಕ್ರೋಶ ಹೊರ ಹಾಕಿದರು. ಬೀದಿಯಲ್ಲೇ ಪಾಠ ಮಾಡಿ, ಮೆರವಣಿಗೆ ಮಾಡಿ, ಬೋರ್ಡ್ ನೇತುಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಬೇಡಿಕೆಗಳೇನು?
ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು, 4 ತಿಂಗಳ ಬಾಕಿ ವೇತನವನ್ನು ಕೂಡಲೇ ಪಾವತಿ ಮಾಡಬೇಕು, ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸಿ, ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆ ನೀಡಬೇಕು.
ಶಿರಸಿಯಲ್ಲಿ ಪ್ರತಿಭಟನೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದಾರೆ. ಕಾಲೇಜು ತರಗತಿಗಳನ್ನು ಬಹಿಷ್ಕಾರ ಮಾಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ.
ಸರ್ಕಾರಕ್ಕೆ ಮನವಿ
ಶಿರಸಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅತಿಥಿ ಉಪನ್ಯಾಸಕರು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದರು.
ಎಲ್ಲ ಉಪನ್ಯಾಸಕರು ಭಾಗಿ
130 ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪರಿಣಾಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸುಮ್ಮನೆ ಕಾಲೇಜಿಗೆ ಬಂದು ಹೋಗುವಂತೆ ಆಗಿದೆ.
ನ್ಯಾಯಯುತ ಬೇಡಿಕೆ
ನಮ್ಮದು ನ್ಯಾಯಯುತ ಬೇಡಿಕೆ. ಪ್ರತಿ ಸಾರಿಯೂ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ. ಅತಿಥಿ ಉಪನ್ಯಾಸಕರನ್ನು ಸುಮ್ಮನೆ ಸತಾಯಿಸಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಎಲ್ಲ ಕಾಲೇಜಿನ ಉಪನ್ಯಾಸಕರು
ಉತ್ತರ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿನಾಯಕ ಭಟ್, ಪ್ರಸನ್ನ ನಾಯ್ಕ್, ಅಶ್ವಿನಿ ಹೆಗಡೆ, ಪೂರ್ಣಿಮಾ ಹೆಬ್ಬಾರ್, ಶಹೀನಾ, ಮಧುಕೇಶ್ವರ ಹೆಗಡೆ ಸೇರಿದಂತೆ ಅನೇಕ ಉಪನ್ಯಾಸಕರು ಘೋಷಣೆ ಕೂಗಿದರು.