40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ
ಬೆಂಗಳೂರು: ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ 40 ವರ್ಷ ಮೇಲ್ಪಟ್ಟ ವಯಸ್ಕರಿಗೆ ಕರ್ನಾಟಕ ಆರೋಗ್ಯ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ವಯಸ್ಸಾಗುತ್ತಿದ್ದಂತೆ ಸಹಜವಾಗಿ ಕಾಡುವ ದೃಷ್ಟಿದೋಷ ಹಾಗೂ ಓದುವ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ, 40 ವರ್ಷ ದಾಟಿದ ಪ್ರತಿಯೊಬ್ಬರಿಗೂ 'ಉಚಿತ ದೃಷ್ಟಿ ತಪಾಸಣೆ' ನಡೆಸಿ, ಅಗತ್ಯವಿರುವವರಿಗೆ ಉಚಿತವಾಗಿ ಓದುವ ಕನ್ನಡಕಗಳನ್ನು ವಿತರಿಸುವ ಮಹತ್ವದ ಯೋಜನೆಯೊಂದನ್ನು ಸರ್ಕಾರ ಜಾರಿಗೆ ತರುತ್ತಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಜನರಿಗೆ ಸುಲಭವಾಗಿ ನೇತ್ರ ಚಿಕಿತ್ಸೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆಯು ಈ ಹೆಜ್ಜೆ ಇಟ್ಟಿದೆ. ಈ ಬೃಹತ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತಿಷ್ಠಿತ 'ರಿಸ್ಟೋರಿಂಗ್ ವಿಷನ್' ಸಂಸ್ಥೆಯ ಜೊತೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಒಡಂಬಡಿಕೆ ಮಾಡಿಕೊಂಡಿದೆ. ಈ ವಿನೂತನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಇರುವ 'ಆಯುಷ್ಮಾನ್ ಆರೋಗ್ಯ ಮಂದಿರ' ಉಪ ಕೇಂದ್ರಗಳ ಮೂಲಕ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯನ್ನು ಪ್ರಾಯೋಗಿಕ ಜಾರಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

'ಆಶಾ ಕಿರಣ'ಯೋಜನೆಯ ಹಿನ್ನೆಲೆ
ಕರ್ನಾಟಕದಲ್ಲಿ ನೇತ್ರ ದೋಷ ನಿವಾರಣೆಗಾಗಿ ಕಳೆದ 2025ರ ಅಕ್ಟೋಬರ್ ತಿಂಗಳಿನಲ್ಲಿ 'ಆಶಾ ಕಿರಣ' ಎಂಬ ಬೃಹತ್ ಯೋಜನೆಯನ್ನು ಆರಂಭಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ವ್ಯಾಪಕವಾಗಿ ಕ್ಷೇತ್ರ ಮೌಲ್ಯಮಾಪನ ಮಾಡಲಾಗಿತ್ತು. ಈ ಮೌಲ್ಯಮಾಪನದ ವೇಳೆ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (AIIMS) ಒಳಗೊಂಡ ತಜ್ಞರ ಜಂಟಿ ತಂಡವು ರಾಜ್ಯದಲ್ಲಿನ ಕಣ್ಣಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿತ್ತು. ಆ ವರದಿ ಮತ್ತು ಶಿಫಾರಸುಗಳನ್ನು ಆಧರಿಸಿಯೇ ಇದೀಗ 40 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಓದುವ ಕನ್ನಡಕ ವಿತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮನೆ ಮನೆಗೆ ತೆರಳಿ ತಪಾಸಣೆ
ಈ ಯೋಜನೆಯ ಅನುಷ್ಠಾನ ಕೇವಲ ಆಸ್ಪತ್ರೆಗಳಿಗೆ ಅಥವಾ ಆರೋಗ್ಯ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಸಂಪರ್ಕ ಕಾರ್ಯಕ್ರಮದ ಪ್ರಮುಖ ಭಾಗವಾಗಲಿದ್ದಾರೆ. ಇವರು ನೇರವಾಗಿ ಜನರ ಮನೆ ಮನೆಗೆ ತೆರಳಿ ಪ್ರಾಥಮಿಕ ಹಂತದ ದೃಷ್ಟಿ ತಪಾಸಣೆ ನಡೆಸಲಿದ್ದಾರೆ. ದೃಷ್ಟಿದೋಷ ಕಂಡುಬಂದವರನ್ನು ನಿಖರವಾಗಿ ಗುರುತಿಸಿ ಅವರಿಗೆ ಸೂಕ್ತ ಅಳತೆಯ ಕನ್ನಡಕಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ.












Click it and Unblock the Notifications