ಡಿ.01ರಿಂದ ರಾಜ್ಯ ಸರ್ಕಾರದ 'ಅನಿಲ ಭಾಗ್ಯ' ಯೋಜನೆ ಜಾರಿಗೆ
ಬೆಂಗಳೂರು, ಅಕ್ಟೋಬರ್ 09 : ಕೇಂದ್ರ ಸರ್ಕಾರದ 'ಉಜ್ವಲ' ಯೋಜನೆಗೆ ಸೆಡ್ಡು ಹೊಡೆಯಲು ರಾಜ್ಯ ಸರ್ಕಾರ 'ಅನಿಲ ಭಾಗ್ಯ' ಯೋಜನೆ ಜಾರಿಗೆ ತರಲು ಮುಂದಾಗಿದೆ.
ಉಚಿತ ಎಲ್ಪಿಜಿ-ಸಿಎಂ ಅನಿಲ ಭಾಗ್ಯ ಘೋಷಿಸಿದ ಖಾದರ್
ಬಡವರಿಗೆ ಅನಿಲ ಸಿಲಿಂಡರ್ ಹಾಗೂ ಸ್ಟೌವ್ ನೀಡುವ 'ಅನಿಲ ಭಾಗ್ಯ' ಯೋಜನೆಯನ್ನು ಇದೇ ಡಿಸೆಂಬರ್ 1 ರಿಂದ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಆಹಾರ ಸರಬರಾಜು ಸಚಿವ ಯು.ಟಿ ಖಾದರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಯೋಜನೆಯ ಅನುಷ್ಠಾನ ಕುರಿತು ಇಂದು (ಸೋಮವಾರ) ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ತಿಂಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು ಎಂದು ಖಾದರ್ ಹೇಳಿದರು.
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಪ್ರಯೋಜನ ಪಡೆದವರನ್ನು ಹೊರತುಪಡಿಸಿ ಉಳಿದ ಎಲ್ಲಾ ಬಿಪಿಎಲ್ ಕಾರ್ಡುದಾರರು ಅನಿಲ ಭಾಗ್ಯ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯಿಂದ ಸ್ಟೌವ್, ಕನೆಕ್ಟರ್ ಹಾಗೂ ಮೊದಲ ಎರಡು ಗ್ಯಾಸ್ ಸಿಲಿಂಡರ್ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ. ಇದರ ಉಪಯೋಗವನ್ನು ಸುಮಾರು 15 ಲಕ್ಷ ಜನರು ಪಡೆದುಕೊಳ್ಳಲಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಉಜ್ವಲ' ಯೋಜನೆಯಡಿ ಅನಿಲ ಸಂಪರ್ಕ ದೊರೆಯದ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.
ಉಜ್ವಲದಲ್ಲಿ ಕೇವಲ ಅನಿಲ ಸಂಪರ್ಕ ಮಾತ್ರ ನೀಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆಯಲ್ಲಿ ಸ್ಟೌವ್ ಕೂಡಾ ವಿತರಣೆಯಾಗಲಿದೆ. ಆದರೆ ಯಾವುದಾದರೂ ಒಂದು ಯೋಜನೆಯಡಿ ಮಾತ್ರ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ ಎಂದರು.