ಔಷಧ ಖರೀದಿಗೆ 30 ಕೋಟಿ ರೂ.ಅನುದಾನ: ಆಸ್ಪತ್ರೆಗಳಲ್ಲಿ ಪರದಾಡುತ್ತಿದ್ದ ರೋಗಿಗಳಿಗೆ ನೆಮ್ಮದಿ
ಬೆಂಗಳೂರು: ಕರ್ನಾಟಕ ಸರ್ಕಾರ ಬುಧವಾರ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಔಷಧಿಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳ ಅತ್ಯಗತ್ಯ ಔಷಧಿಗಳ ಖರೀದಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಬರೋಬ್ಬರಿ 30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಔಷಧಿ ಸಂಬಂಧ ಕೆಲವು ಆಸ್ಪತ್ರೆಗಳಲ್ಲಿ ಪರದಾಡುತ್ತಿದ್ದ ರೋಗಿಗಳಿಗೆ ಸರ್ಕಾರದ ಆದೇಶ ನೆಮ್ಮದಿ ನೀಡಿದೆ.
ಸರ್ಕಾರಿ ಆರೋಗ್ಯ ಸಂಸ್ಥೆಗಳಾದ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಇತರೆ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಔಷಧಿಗಳ ಖರೀದಿಗಾಗಿ ಹೆಚ್ಚಿನ ಅನುದಾನ ಪಡೆಯಲಿವೆ. ಉಚಿತ ಔಷಧಿ ಯೋಜನೆ (Free Drugs Scheme) ಹಾಗೂ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK) ಅಡಿಯಲ್ಲಿ ನೀಡಲಾಗುವ ಅನುದಾನ ಬಳಸಿಕೊಂಡು ಆಸ್ಪತ್ರೆಗಳಲ್ಲಿ ಸ್ಥಳೀಯವಾಗಿ ಎರಡು ತಿಂಗಳ ಅವಧಿಯಲ್ಲಿ ಅತ್ಯಗತ್ಯ ಔಷಧಿಗಳ ಖರೀದಿಗೆ ಈ ಅನುದಾನ ಬಳಕೆಗೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಯೋಜನೆಯಾದ NHM ವತಿಯಿಂದ ಈ ಅನುದಾನ ಬಿಡುಗಡೆಯಾಗದ್ದನ್ನು ಉಲ್ಲೇಖಿಸಿ ಮತ್ತು ರಾಜ್ಯದ ಜಿಲ್ಲಾ, ತಾಲ್ಲೂಕು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳ ಹಿತದೃಷ್ಟಿಯಿಂದ ಅಗತ್ಯ ಔಷಧಗಳನ್ನು ಪೂರೈಸಲು ಹೆಚ್ಚುವರಿ ಅನುದಾನ ಬಿಡುಗಡೆಗೆ ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಎರಡು ತಿಂಗಳ ಔಷಧಿ ಖರೀದಿ
ಆರೋಗ್ಯ ಸಂಸ್ಥೆಗಳಲ್ಲಿನ ನಗದು ವರ್ಗಾವಣೆ ಸ್ಥಿತಿಯನ್ನು ಸುಧಾರಿಸಲು ಹಾಗೂ ಮುಂದಿನ ಎರಡು ತಿಂಗಳ ಅವಧಿಗೆ ಅಂದರೆ, ಮಾರ್ಚ್ ಅಂತ್ಯಕ್ಕೆ KSMSCL ವತಿಯಿಂದ ಅಗತ್ಯ ಔಷಧಗಳನ್ನು ಪೂರೈಸಲು ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಹಣ ಬಿಡುಗಡೆಗೆ ಆದೇಶಿಸಿದ್ದು, ಹಣಕಾಸು ಇಲಾಖೆ ಆಸ್ಪತ್ರೆಗಳಿಗೆ ಔಷಧಿ ಖರೀದಿಗೆ ಹಣ ಒದಗಿಸಲಿದೆ.
ಆದೇಶದಲ್ಲಿ ಕರ್ನಾಟಕದ ವೈದ್ಯಕೀಯ ಸರಕು ಸರಬರಾಜು ನಿಗಮ ನಿಯಮಿತದಿಂದ 30 ಕೋಟಿ ರೂಪಾಯಿ ಹಣವನ್ನು ತಕ್ಷಣವೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಸರ್ಕಾರಿ ಆಸ್ಪತ್ರೆಗಳು ಸರ್ಕಾರಿ ಇ ಮಾರ್ಕೆಟ್ ಪ್ಲೇಸ್, ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ವ್ಯವಸ್ಥೆಯ ಮೂಲಕವೇ ಖರೀದಿಬೇಕು. ಇಲ್ಲವೇ ಕೆಟಿಪಿಪಿ ಕಾಯ್ದೆ 1999 ಮತ್ತು ನಿಯಮ 2000ರ ಅನ್ವಯ ಖರೀದಿ ಪ್ರಕ್ರಿಯ ನಡೆಸಬೇಕು. ಅನುದಾನವು ಆಯಾ ಸದುದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂದು ಸೂಚಿಸಿದೆ.
ಯಾವೆಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇತ್ತು, ಅಥವಾ ಔಷಧಿಗಳನ್ನು ಪಡೆಯಲು ರೋಗಿಗಳ ಹರಸಾಹ ಪಡುತ್ತಿದ್ದರೋ ಅಂತಹ ಸಮಸ್ಯೆಗಳು ತಪ್ಪಲಿದೆ. ಮುಂದಿನ ಎರಡು ತಿಂಗಳಿಗೆ ಬೇಕಾದ ಅಗತ್ಯ ಔಷಧಿ ಖರೀದಿ ಪ್ರಕ್ರಿಯೆ ಇನ್ನೇನು ಶುರುವಾಗಲಿದೆ.












Click it and Unblock the Notifications