ಜಾತಿ ಗಣತಿ : ಲಾಂಛನ, ಘೋಷವಾಕ್ಯ ರಚಿಸಿ, ಬಹುಮಾನ ಗೆಲ್ಲಿ
ಬೆಂಗಳೂರು, ಫೆ.2 : ಕರ್ನಾಟಕ ಸರ್ಕಾರವು ಕೈಗೊಳ್ಳಲಿರುವ ಜಾತಿವಾರು ಜನಗಣತಿ ಕಾರ್ಯಕ್ರಮಕ್ಕೆ ಲಾಂಛನ ಮತ್ತು ಘೋಷವಾಕ್ಯವನ್ನು ಸೂಚಿಸಲು ಸಾರ್ವಜನಿಕರಿಗೆ ಮುಕ್ತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಯ್ಕೆಯಾದ ಲಾಂಛನಕ್ಕೆ 50,000 ರೂ. ಹಾಗೂ ಘೋಷವಾಕ್ಯಕ್ಕೆ 30,000 ರೂ. ಬಹುಮಾನ ನೀಡಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.11ರಿಂದ 30ರ ತನಕ ಜಾತಿ ಗಣತಿ ನಡೆಯಲಿದೆ ಎಂದು ಹೇಳಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಜಾತಿ ಗಣತಿ ನಡೆಸಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. [ಏ.11ರಿಂದ ಮಹತ್ವಾಕಾಂಕ್ಷಿ ಜಾತಿ ಗಣತಿ ಆರಂಭ]

ವಿವಿಧ ಜಾತಿ, ಜನಾಂಗಗಳ ಅಭಿವೃದ್ಧಿಯಲ್ಲಿ ವ್ಯತ್ಯಾಸಗಳನ್ನು ಕಡಿಮೆ ಮಾಡಲು, ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಈ ಜಾತಿವಾರು ಜನಗಣತಿ ಬಹುದೊಡ್ಡ ಸಾಧನವಾಗಲಿದೆ. ಇದು ಸಮಾನ ಬೆಳವಣಿಗೆಯ ಪ್ರತೀಕವೂ ಆಗಲಿದೆ. ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳನ್ನು ತಲುಪಿಸಲು ಇದು ಸಹಕಾರಿಯಾಗಲಿದೆ. [ಕರ್ನಾಟಕದಲ್ಲಿ ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]
ಜಾತಿವಾರು ಜನಗಣತಿ ಕಾರ್ಯಕ್ರಮಕ್ಕೆ ಸರ್ಕಾರ ಸಾರ್ವಜನಿಕರಿಂದ ಘೋಷಣೆ ಮತ್ತು ಲಾಂಛನವನ್ನು ಆಹ್ವಾನಿಸಿದೆ. ಆಯ್ಕೆಯಾದ ಲಾಂಛನಕ್ಕೆ 50,000 ರೂ. ಹಾಗೂ ಘೋಷವಾಕ್ಯಕ್ಕೆ 30,000 ರೂ.ಗಳ ಬಹುಮಾನವನ್ನು ನೀಡಲಾಗುತ್ತದೆ.
ಲಾಂಛನ ಮತ್ತು ಘೋಷವಾಕ್ಯವು ಸ್ವಂತದ್ದಾಗಿದ್ದು, ಸುಲಭವಾಗಿ ಅರ್ಥೈಸಿಕೊಳ್ಳುವಂತಿರಬೇಕು. ಲಾಂಛನ ಮತ್ತು ಘೋಷವಾಕ್ಯವನ್ನು ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 15. ಹೆಚ್ಚಿನ ವಿವರಗಳಿಗಾಗಿ 080-22268578 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಕಳುಹಿಸಲು ವಿಳಾಸ : ಆಸಕ್ತರು ತಾವು ರಚಿಸಿದ ಲಾಂಛನ ಮತ್ತು ಘೋಷವಾಕ್ಯವನ್ನು, ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇ-ಮೇಲ್ ವಿಳಾಸ ಇತ್ಯಾದಿಗಳನ್ನು ವಿವರಗಳೊಂದಿಗೆ ಆಯುಕ್ತರು, ಹಿಂದುಳಿದ ವರ್ಗಗಳ ಆಯೋಗ, 16ಡಿ, 3ನೇ ಮಹಡಿ, ಡಿ. ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬೆಡ್ ರಸ್ತೆ, ವಸಂತನಗರ, ಬೆಂಗಳೂರು- 560001 ಇವರಿಗೆ ಕಳುಹಿಸಬೇಕು.












Click it and Unblock the Notifications