ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಹದೇಶ್ವರ ಸ್ವಾಮಿ ಜಾತ್ರೆಗೆ ನಿರ್ಬಂಧ
ಚಾಮರಾಜನಗರ, ನ.18: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆಗೆ ಈ ಬಾರಿ ರಾಜ್ಯ ಅರಣ್ಯ ಇಲಾಖೆಯು ಭಾರಿ ನಿರ್ಬಂಧಗಳನ್ನು ವಿಧಿಸಿದೆ. ಜಾನುವಾರು, ಎತ್ತಿನಗಾಡಿಗಳು, ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಸೇರಿದಂತೆ ಹಲವು ಆದೇಶಗಳನ್ನು ಜಾರಿಗೊಳಿಸುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬೇಲದಕುಪ್ಪೆ ದೇವಾಲಯದ ವಾರ್ಷಿಕ ಜಾತ್ರೆಯ ಕುರಿತು ಸರ್ಕಾರದಿಂದ ಸ್ಥಿತಿ ವರದಿಯನ್ನು ಕೋರಿತ್ತು. ಇದರ ನಂತರ, ರಾಜ್ಯ ಅರಣ್ಯ ಇಲಾಖೆಯು ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಹೇಳಿದೆ.
Bandipur Tiger Reserve : ರಾಜ್ಯದಲ್ಲೇ ಬಂಡೀಪುರ ಉತ್ತಮ ಹುಲಿ ಸಂರಕ್ಷಿತ ವಲಯ
ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಸ್ಥಾನವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಹುಲಿ ಆವಾಸಸ್ಥಾನವನ್ನು ರೂಪಿಸುವ ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇವಾಲಯದಲ್ಲಿ 2020 ಮತ್ತು 2021 ರಲ್ಲಿ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆ ಈ ಬಾರಿಯ ಜಾತ್ರೆ ಬಾರಿಯ ಜಾತ್ರೆ ಅದ್ಧೂರಿಯಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಬೇಲದಕುಪ್ಪೆ ಜಾತ್ರೆ
ನವೆಂಬರ್ 20 ರಿಂದ 23 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಪೂರ್ವಭಾವಿಯಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಅವರು ಮಂಗಳವಾರ ದೇವಾಲಯದ ಸ್ಥಳವನ್ನು ಪರಿಶೀಲಿಸಿದ್ದಾರೆ. ಜೊತೆಗೆ ದೇವಾಲಯದ ಟ್ರಸ್ಟಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಪ್ರತಿವರ್ಷ ಜಾತ್ರೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನ ಸೇರುತ್ತಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವವರು ಹೆಚ್ಚಿನವರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಾತ್ರೆ ಸಮಯದಲ್ಲಿ ಬೆಂಗಳೂರು, ಮಂಡ್ಯ ಮುಂತಾದ ಕಡೆಯಿಂದ ಜನರು ಸೇರುತ್ತಾರೆ.
ಅರಣ್ಯದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ
''ಧ್ವನಿವರ್ಧಕಗಳು ಮತ್ತು ಜನರೇಟರ್ಗಳ ಬಳಕೆಗೆ ಯಾವುದೇ ಅನುಮತಿ ನೀಡಲಾಗುವುದಿಲ್ಲ. ಖಾಸಗಿ ವಾಹನಗಳನ್ನೂ ಅರಣ್ಯದೊಳಗೆ ಬಿಡುವುದಿಲ್ಲ. ಖಾಸಗಿ ವಾಹನಗಳನ್ನು ಅರಣ್ಯದ ಹೊರವಲಯದಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ಬಿಡುತ್ತೇವೆ. ಈ ಸಂಬಂಧ ಎನ್ಟಿಸಿಎಗೆ ಸ್ಥಿತಿ ವರದಿ ಸಲ್ಲಿಸುತ್ತೇನೆ. ಜಾತ್ರೆಯ ಸಮಯವು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಇರುತ್ತದೆ" ಎಂದು ನಿರ್ದೇಶಕ ರಮೇಶ್ ಕುಮಾರ್ ಹೇಳಿದ್ದಾರೆ.
2016ರ ನವೆಂಬರ್ನಲ್ಲಿ ದೇವಸ್ಥಾನದ ಜಾತ್ರೆ ವೇಳೆ ಖಾಸಗಿ ವಾಹನಗಳನ್ನು ನಿಷೇಧಿಸಿದ್ದರೂ ಎಚ್.ಡಿ.ಕೋಟೆಯ ಅಂದಿನ ಶಾಸಕ ದಿವಂಗತ ಚಿಕ್ಕಮಾದು ಎಸ್ ಅವರು ನೂರಾರು ಬೆಂಬಲಿಗರೊಂದಿಗೆ ಅರಣ್ಯ ಪ್ರವೇಶಿಸಿ ಖಾಸಗಿ ವಾಹನಗಳ ಬಳಕೆಗೆ ಪ್ರಚೋದನೆ ನೀಡಿದ್ದರು.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾತ್ರೆಯ ಕುರಿತ ವರದಿಗೆ ಎನ್ಟಿಸಿಎಆದೇಶ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಬಂಡೀಪುರದೊಳಗಿನ ವಾರ್ಷಿಕ ದೇವಾಲಯದ ಜಾತ್ರೆಯ ಬಗ್ಗೆ ವಾಸ್ತವ ಸ್ಥಿತಿಯ ವರದಿಯನ್ನು ಒದಗಿಸುವಂತೆ ನವೆಂಬರ್ 11 ರಂದು ಸರ್ಕಾರಕ್ಕೆ ಸೂಚಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇವಸ್ಥಾನದ ಜಾತ್ರೆಯನ್ನು ನಡೆಸುವುದರಿಂದ ಆಗುವ ಪರಿಣಾಮಗಳ ಕುರಿತು ವನ್ಯಜೀವಿ ಸಂರಕ್ಷಣಾಧಿಕಾರಿ ಗಿರಿಧರ್ ಕುಲಕರ್ಣಿ ಅವರು ಅಕ್ಟೋಬರ್ನಲ್ಲಿ ಎನ್ಟಿಸಿಎಗೆ ವಿವರವಾದ ಪತ್ರವನ್ನು ಬರೆದಿದ್ದರು. ಇದರ ನಂತರ ಈ ಬೆಳವಣಿಗೆ ನಡೆದಿದೆ.
"ವಾರ್ಷಿಕ ಜಾತ್ರೆಯಲ್ಲಿ ಎತ್ತಿನ ಗಾಡಿಗಳು ಮತ್ತು ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು, ಜೀಪುಗಳು, ಕಾರುಗಳು, ಟ್ರಾಕ್ಟರ್ಗಳು, ಲಾರಿಗಳು, ಬಸ್ಗಳು ಸೇರಿದಂತೆ ಖಾಸಗಿ ವಾಹನಗಳು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ. ಜನಸಂದಣಿಯನ್ನು ನಿಯಂತ್ರಿಸುವುದು ಅರಣ್ಯ ಮತ್ತು ಇತರ ಇಲಾಖೆಗಳಿಗೆ ತುಂಬಾ ಕಷ್ಟಕರವಾಗಿದೆ" ಎಂದು ಕುಲಕರ್ಣಿ ಎನ್ಟಿಸಿಎಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅರಣ್ಯದಲ್ಲಿ ವಾಹನ ಚಾಲನೆ, ಹಾರ್ನ್ ಮಾಡುವುದು ಅಪಾಯಕಾರಿ
''ವಾರ್ಷಿಕ ಜಾತ್ರೆಗೆ ಬರುವ ಜನರು ಆಹಾರ ತಯಾರಿಸಲು ಬೃಹತ್ ಪಾತ್ರೆಗಳು, ನೀರಿನ ಕ್ಯಾನ್ಗಳು ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ಟ್ರ್ಯಾಕ್ಟರ್/ವಾಹನಗಳಲ್ಲಿ ತರುತ್ತಾರೆ. ಯಾತ್ರಾರ್ಥಿಗಳ ದೊಡ್ಡ ಗುಂಪುಗಳು, ಜಾನುವಾರುಗಳು, ವಾಹನಗಳ ಪ್ರವೇಶ ಮತ್ತು ಸಂಪನ್ಮೂಲ ಬಳಕೆ ಮತ್ತು ಅಂಗಡಿಗಳನ್ನು ಇಡಲು ಸಸ್ಯಗಳನ್ನು ತೆರವುಗೊಳಿಸುವುದು ಸೇರಿ ಪರಿಸರವನ್ನು ಹಾನಿಗೊಳಿಸಿದೆ" ಎಂದಿದ್ದಾರೆ.
ಜಾತ್ರೆಗಾಗಿ ನೂರಾರು ಅಂಗಡಿಗಳು ಮತ್ತು ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಟ್ರಾಕ್ಟರ್ಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ವಾರ್ಷಿಕ ಕಾರ್ಯಕ್ರಮದಲ್ಲಿ ಸುಮಾರು 15,000 ವಾಹನಗಳು ಮತ್ತು ಸಾವಿರ ಜಾನುವಾರುಗಳನ್ನು ಕಾಣಬಹುದು. ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶದಲ್ಲಿ ವಾಹನಗಳ ಚಲನೆ ಮತ್ತು ಹಾರ್ನ್ ಮಾಡುವ ಮೂಲಕ ಗದ್ದಲದ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ವನ್ಯಜೀವಿ ಸಂರಕ್ಷಣಾಕಾರರು ತಿಳಿಸಿದ್ದಾರೆ.
ಪ್ರಮುಖವಾಗಿ ಜಾತ್ರೆಯ ಸಮಯದಲ್ಲಿ ಜನರು ಬಳಸಿ ಉಳಿದ ಆಹಾರ ಪದಾರ್ಥಗಳು ಕಾಡು ಪ್ರಾಣಿಗಳನ್ನು ಆಕರ್ಷಿಸುತ್ತವೆ. ಅವು ಬೇಯಿಸಿದ ಆಹಾರಕ್ಕೆ ಅಭ್ಯಾಸವಾಗುತ್ತವೆ. ಹೀಗಾಗಿ ಅದನ್ನು ಹುಡುಕಲು ಊರುಗಳಿಗೆ ನುಗ್ಗಬಹುದು ಎಂಬ ಅತಂಕವನ್ನು ಹೊರಹಾಕಿದ್ದಾರೆ
(ಮಾಹಿತಿ ಕೃಪೆ- ದಿ ಇಂಡಿಯನ್ ಎಕ್ಸ್ಪ್ರೆಸ್)