ನೋಟಾ ವೋಟು ಹಾಕಲು ರೈತ ಸಂಘದ ತಯಾರಿ
ಬೆಂಗಳೂರು, ಏ. 16 : ಗುರುವಾರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಆದರೆ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸದೆ ನೋಟಾ ಮತ ಚಲಾಯಿಸಲು ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಮಂಡ್ಯ, ಮೈಸೂರಿನಲ್ಲಿ ರೈತ ಸಂಘ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಲು ರೈತ ಸಂಘದ ಸದಸ್ಯರು ನೋಟಾ ಮತ ಚಲಾಯಿಸುವ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರ ಈ ಕುರಿತು ಮಂಡ್ಯದಲ್ಲಿ ಅವರು ಸಭೆಯನ್ನು ನಡೆಸಿದ್ದಾರೆ, ಸಭೆಯಲ್ಲಿ 300ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.

ರೈತ ಸಂಘದ ಈ ತೀರ್ಮಾನದ ಕುರಿತು ಮಾಹಿತಿ ನೀಡಿರುವ ವಕೀಲ ಮತ್ತು ರೈತ ಸಂಘದ ಮುಖಂಡ ಎನ್.ನಂಜೇಗೌಡ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಸುಮಾರು 300 ರೈತರು ಸೋಮವಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದ ಸದಸ್ಯರಿಗೆ ನಾವು ಸಭೆಯ ನಿರ್ಣಯಗಳನ್ನು ತಲುಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ. [ಗುರುವಾರ ಮತದಾನ ನೋಟಾ ಬಗ್ಗೆ ತಿಳಿದುಕೊಳ್ಳಿ]
ಸಭೆಯಲ್ಲಿ ವಿವಿಧ ಪಕ್ಷಗಳ ರೈತ ವಿರೋಧಿ ನೀತಿಯ ಕುರಿತು ನಾವು ಚರ್ಚೆ ನಡೆಸಿದೆವು. ಅಂತಿಮವಾಗಿ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸುವುದು ಬೇಡ ನೋಟಾ ಮತವನ್ನು ಚಲಾಯಿಸೋಣ ಎಂದು ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ರೈತ ಸಂಘದ ಕೆಲವು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ನಂಜೇಗೌಡ, ರೈತ ಸಂಘದ ಹುಟ್ಟು ಮತ್ತು ತತ್ವ ಸಿದ್ಧಾಂತಗಳನ್ನು ಕೆಲವರು ಮರೆತಿದ್ದಾರೆ. ಅವರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದ ಸಿದ್ಧಾಂತಗಳನ್ನು ಮರೆತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.
ಪುಟ್ಟಣ್ಣಯ್ಯ ಏನು ಮಾಡುತ್ತಾರೆ : ರೈತ ಸಂಘದ ಅಧ್ಯಕ್ಷ ಮತ್ತು ಶಾಸಕ ಕೆಎಸ್ ಪುಟ್ಟಣ್ಣಯ್ಯ ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ, ಮೈಸೂರು ಮತ್ತು ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಬೆಂಬಲ ಸೂಚಿಸಿದ್ದಾರೆ. ಈಗ ಕೆಲವು ರೈತ ಸಂಘದ ಸದಸ್ಯರು ನೋಟಾ ಮತ ಹಾಕಲು ತೀರ್ಮಾನಿಸಿರುವುದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ.












Click it and Unblock the Notifications