ಇನ್ನು ಮೂರು ದಿನ ರಾಜ್ಯಾದ್ಯಂತ ಭಾರೀ ಮಳೆ
ಬೆಂಗಳೂರು, ಸೆಪ್ಟೆಂಬರ್. 28: ತಮಿಳುನಾಡು ಮತ್ತು ತೆಲಂಗಾಣ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದ ವಿವಿಧೆಡೆ ಇನ್ನು ಮೂರು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯಲಿದ್ದು, ಉತ್ತರ ಒಳನಾಡಿನಲ್ಲಿ ಮಳೆಯ ಸಾಧಾರಣ ಮಳೆ ಬೀಳಲಿದೆ ಎಂದು ತಿಳಿಸಿದೆ.
ಭಾನವಾರ ಸಿಡಿಲಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಮೂವರು, ತುಮಕೂರು ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಭಾವಿಕೆರೆ, ಅಜ್ಜಂಪುರ, ಯಾದಗಿರಿ ಜಿಲ್ಲೆ ಸೈದಾಪುರ, ಧರ್ಮಸ್ಥಳ, ಚಿಂಚೊಳ್ಳಿ, ಕಲಬುರಗಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮುಂಗಾರು ಅಂತ್ಯವಾಗಲಿದ್ದು ಹಿಂಗಾರು ಮಳೆ ಆರಂಭವಾಗಲಿದೆ.[ಮಳೆ ತಂದ ಆವಾಂತರದ ಚಿತ್ರಗಳು]

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಮಂಡ್ಯ,ಉತ್ತರ ಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲೂ ಮಳೆ ಸುರಿದಿದೆ.[ಮೈದುಂಬಿದ ಜೋಗ ನೋಡ್ಕಂಡ್ ಬನ್ನಿ]
ಬೆಂಗಳೂರು ಭಾನುವಾರ ಅಸ್ತವ್ಯಸ್ಥ
ಭಾನುವಾರ ಸಂಜೆ ಬೆಂಗಳೂರು ಮಹಾನಗರದಲ್ಲಿ ಆರಂಭವಾದ ಮಳೆ ರಾತ್ರಿವರೆಗೂ ಮುಂದುವರಿಯಿತು. ರಾಜಕಾಲುವೆಯಿಂದ ಉಕ್ಕಿ ಹರಿದು ಹೆಚ್ಚು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ನಂದಿನಿ ಬಡಾವಣೆಯ ವಿಜಯೇಂದ್ರ ನಗರ, ಬಾಗಲಗುಂಟೆ 12ನೇ ಅಡ್ಡರಸ್ತೆ, ಇಂದಿರಾನಗರ 2ನೇ ಹಂತದ 7ನೇ ಮುಖ್ಯರಸ್ತೆ, ಐಡಿಯಲ್ ಬಡಾವಣೆಯ 19ನೇ ಅಡ್ಡರಸ್ತೆ ಬಳಿ ಚರಂಡಿ ನೀರು ಮನೆಗೆ ನುಗ್ಗಿತು.
ಕೆಂಗೇರಿ ಉಪನಗರ, ಕೆಂಗೇರಿ ಮಾರುಕಟ್ಟೆ, ಜ್ಞಾನಭಾರತಿ ಬಡಾವಣೆ ಹಾಗೂ ಬಸವೇಶ್ವರನಗರ 8ನೇ ಮುಖ್ಯರಸ್ತೆಯಲ್ಲಿ ಮರಗಳು ಧರೆಗುರುಳಿದ ಪರಿಣಾಮ ವಾಹನ ಸವಾರರು ಪರದಾಡಬೇಕಾಯಿತು. ಸೋಮವಾರ ಸಂಜೆ ಸಹ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications