ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಮಾರು, ಕಾರಣಗಳು ಆರು
ಬೆಂಗಳೂರು, ಮೇ 15 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷ ನಾಯಕರು, ಹೀನ ರಾಜಕಾರಣ ಮಾಡುವ ಬದಲು ತಮ್ಮ ಸೋಲಿಗೆ ಈಗ ಕಾರಣಗಳನ್ನು ಕಂಡುಕೊಳ್ಳಬೇಕಿದೆ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ತಕ್ಕ ಸಮಯ ಕೂಡ.
ಯಡಿಯೂರಪ್ಪ ನೇತೃತ್ವದ ಯಡಿಯೂರಪ್ಪ 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ಹೇಳಿ ಎಂದು ದುರಹಂಕಾರದಿಂದ ಮಾತನ್ನಾಡಿದ್ದ ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಜನರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು ಕಟ್ಟಿಟ್ಟ ಬುತ್ತಿ.
ಗುಜರಾತ್ ನಂತೆ ಬಿಜೆಪಿಗೆ ಭಾರೀ ಪೈಪೋಟಿ ನೀಡುವುದು ಮಾತ್ರವಲ್ಲ, ಅಲ್ಲಿಂಗ ಅಭೂತಪೂರ್ವವಾದ ಗೆಲುವು ಸಾಧಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಪಟಾಲಂ ಟಾಂಟಾಂ ಹೊಡೆಯುತ್ತಿತ್ತು. ಇದೀಗ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನಕ್ಕೆ ಮತ್ತೊಂದು ರಾಜ್ಯ ಸೇರ್ಪಡೆಯಾದಂತಾಗಿದೆ.
ಹಾಗೆ ನೋಡಿದರೆ, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ರಾಜ್ಯಗಳು ಅಥವಾ ಕಾಂಗ್ರೆಸ್ ಪ್ರಬಲವಾಗಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಅತ್ಯಂತ ಭದ್ರವಾಗಿ ತಳವೂರಿತ್ತು. ಬಿಜೆಪಿಯನ್ನು ನಿರ್ನಾಮ ಮಾಡುವ ಉತ್ಸಾಹದಿಂದಲೇ ರಾಹುಲ್ ಗಾಂಧಿಯವರು ಕೂಡ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಈ ಪರಿಯ ಸೋಲು ಕಾಣಲು ಕಾರಣಗಳೇನು? ಕಾಂಗ್ರೆಸ್ ನ ಸೋಷಿಯಲ್ ಸ್ಟ್ರಾಟಜಿ ಎಲ್ಲಿ ಕೈಕೊಟ್ಟಿತು? ಕಾಂಗ್ರೆಸ್ ನಾಯಕರ ಮಾತುಗಳೇ ಅವರಿಗೆ ಮುಳುವಾದವೆ? ಅಥವಾ ಮೋದಿಯವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಯಿತೆ? ಆತ್ಮವಿಮರ್ಶೆಗೆ ಇದು ಸಕಾಲ.

ಪ್ರಧಾನಿ ಮೋದಿ ಮೇಲೆ ಏಕವಚನದಲ್ಲಿ ಪ್ರಹಾರ
ಚುನಾವಣಾ ಭಾಷಣಗಳಲ್ಲೆಲ್ಲ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಯಡಿಯೂರಪ್ಪನವರನ್ನು ಏಕವಚನದಲ್ಲಿ ದಾಳಿ ನಡೆಸಿದ್ದರು. ಇದಕ್ಕೆ ಸಾಮಾಜಿಕ ತಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಕೆಲವರು ಸಿದ್ದರಾಮಯ್ಯನವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದರು ಕೂಡ. ಆದರೆ, ಪ್ರಧಾನಿಯಂಥವರನ್ನು ಏಕವಚನದಲ್ಲಿ ಕರೆದದ್ದು ಎಷ್ಟು ಸರಿ ಎಂಬ ಆಕ್ರೋಶದ ನುಡಿಗಳು ಕೇಳಿಬಂದಿದ್ದವು. ಇದಕ್ಕೆ ಸಿದ್ದರಾಮಯ್ಯ ಬೆಲೆ ತೆತ್ತಿದ್ದಾರೆ.

ಜಿಟಿಡಿಯನ್ನು ಏಕವಚನದಲ್ಲಿ ಹೀಯಾಳಿಸಿದ್ದ ಸಿದ್ದು
ನಾನು ಗೆದ್ದಾಗ ಜಿಟಿ.ದೇವೇಗೌಡನಂತವರು ನೂರು ಮಂದಿ ಇದ್ದರು. ಆ ನೂರು ಜನರಲ್ಲಿ ಜಿಟಿ.ದೇವೇಗೌಡ ಒಬ್ಬ. ಆತ ಆಗ ಕೇವಲ ಸೊಸೈಟಿ ಮೆಂಬರ್ ಆಗಿದ್ದ. ಆತನಿಗೆ ಎಷ್ಟು ಜನಪ್ರಿಯತೆ ಇರಲು ಸಾಧ್ಯ ಹೇಳಿ? ಎಂದು ತಮ್ಮ ವಿರುದ್ಧ ಸ್ಪರ್ಧಿಸುತ್ತಿದ್ದ ಜಿಟಿ ದೇವೇಗೌಡರನ್ನು ಏಕವಚನದಲ್ಲಿ ಹೀಯಾಳಿಸಿದ್ದಲ್ಲದೆ, ಅವರನ್ನು ಕೇವಲವಾಗಿ ಕಂಡಿದ್ದಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಜನರೇ ತಕ್ಕಪಾಠ ಕಲಿಸಿದ್ದಾರೆ. 37 ಸಾವಿರ ಮತಗಳಿಂದ ಸಿದ್ದರಾಮಯ್ಯನವರನ್ನು ಮಣ್ಣು ಮುಕ್ಕಿಸಿದ್ದಾರೆ.

ರಾಹುಲ್ ಸರ್, ಜನ ಕಿವಿ ಮೇಲೆ ಹೂವಿಟ್ಟುಕೊಂಡಿಲ್ಲ
ಕರ್ನಾಟಕದುದ್ದಕ್ಕೂ ಅತ್ಯಂತ ಉತ್ಸಾಹದಿಂದ ಅಡ್ಡಾಡುತ್ತ, ದೇಗುಲ, ಮಸೀದಿ, ಇಗರ್ಜಿಗಳಿಗೆ ಎಡತಾಕುತ್ತಿದ್ದ ರಾಹುಲ್ ಗಾಂಧಿಯವರು ತಮ್ಮ ಭಾಷಣದುದ್ದಕ್ಕೂ ಹೇಳಿದ್ದನ್ನೇ ಹೇಳುತ್ತ, ಅಪನಗದೀಕರಣ, ಜಿಎಸ್ಟಿ, ಮೋದಿ ರೈತರಿಗೆ ಏನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳನ್ನೇ ಪ್ರತಿಬಾರಿ ಕೇಳುತ್ತಿದ್ದುದು ಕೇಳುಗರಿಗೆ ಬೋರು ಹೊಡೆಸುವಂತಿತ್ತು. ಹಲವಾರು ಬಾರಿ ಕನ್ನಡಿಗರ ಹೆಸರು ಹೇಳಲು ಅವರು ತಡಕಾಡಿದ್ದು ಅಪಹಾಸ್ಯಕ್ಕೀಡಾಗಿತ್ತು.

ಕಾಂಗ್ರೆಸ್ಸಿಗೆ ಕೈಕೊಟ್ಟ ಪ್ರಜ್ಞಾವಂತ ಹಳ್ಳಿ ಜನ
ಕಾಂಗ್ರೆಸ್ಸಿಗೆ ಭಾರೀ ಹೊಡೆತ ನೀಡಿದ್ದೆಂದರೆ, ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು, ಅವರ ಸುತ್ತಮುತ್ತ ಜೈಲಿಗೆ ಹೋಗುವವರೇ ಸೇರಿಕೊಂಡಿದ್ದಾರೆ ಎಂದು ಪ್ರತಿ ಭಾಷಣದಲ್ಲೂ ಉಲಿಯುತ್ತಿದ್ದುದಕ್ಕೆ ಕೇಳುಗರು ಕಿವಿ ಕೊಟ್ಟಿಲ್ಲ ಮತ್ತು ಕೇಳುಗರು ಕಿವಿ ಮೇಲೆ ಹೂವನ್ನೂ ಇಟ್ಟುಕೊಂಡಿರಲಿಲ್ಲ. ಹಳ್ಳಿ ಜನರಾದರೇನು ಕರ್ನಾಟಕದ ಜನ ಪ್ರಜ್ಞಾವಂತರು. ತಮ್ಮ ಪಕ್ಷದಲ್ಲೇ ಹಲವಾರು ಅಪರಾಧ ಹಿನ್ನೆಲೆಯವರಿದ್ದು, ಇತರ ಪಕ್ಷದವರನ್ನು ಹೀಗಳಿದರೆ ಮತದಾರರು ಕೇಳುತ್ತಾರೆಯೆ?

ನಾನೇ ಮುಂದಿನ ಪ್ರಧಾನಿ ಎಂಬ ರಾಹುಲ್ ನುಡಿ
ಭಾಷಣಗಳ ನಡುವೆ ಮಾತುಮಾತಿನಲ್ಲಿ, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ ನಾನು ಪ್ರಧಾನ ಮಂತ್ರಿಯಾಗಲು ಸಿದ್ಧ ಎಂದು ರಾಹುಲ್ ಗಾಂಧಿಯವರು ಘಂಟಾಘೋಷವಾಗಿ ಸಾರಿದ್ದು ಕಾಂಗ್ರೆಸ್ಸಿಗೆ ಮುಳುವಾಗಿದೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರಾರೂ ಬಾಯಿ ಬಿಟ್ಟಿರಲಿಲ್ಲ, ಆದರೆ ಇದನ್ನೆಲ್ಲ ಗಮನ ಹರಿಸುತ್ತಿರುವ ಮತದಾರರು ತಮಗೆ ಎಂಥ ಸರಕಾರ ಬೇಕು, ಎಂಥ ನಾಯಕರಿರಬೇಕು ಎಂಬುದನ್ನು ಅಳೆದುತೂಗಿ ಆರಿಸಿದ್ದಾರೆ.

ಆ ಭಾಗ್ಯ, ಈ ಭಾಗ್ಯಕ್ಕೆ ಮರುಳಾಗಿಲ್ಲ ಜನ
ಇಪ್ಪತ್ತೆಂಟು ಭಾಗ್ಯಗಳನ್ನು ಕರುಣಿಸಿದ್ದು ಮಾತ್ರವಲ್ಲದೆ, ರಾಜ್ಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರಿಗೆ ಭರ್ಜರಿ ಬಳುವಳಿಗಳನ್ನು ಕೊಟ್ಟು, ಕರ್ನಾಟಕ ರಾಜ್ಯಾದ್ಯಂತ ಸಾಧನೆಗಳ ಬಗ್ಗೆ ಹೇಳಿಕೊಂಡು ಬಂದಿದ್ದ ಸಿದ್ದರಾಮಯ್ಯನವರ ಅತಿಯಾದ ಆತ್ಮವಿಶ್ವಾಸವೇ ಅವರಿಗೆ ಮುಳುವಾಗಿದೆ. ಜನರು ತಮಗೆ ಬರಬೇಕಾದ ಬಳುವಳಿಗಳನ್ನು ಇಸಿದುಕೊಳ್ಳುತ್ತಾರಷ್ಟೇ, ಆದರೆ, ಮತ ಹಾಕುವುದು ತಮಗೆ ಬೇಕಾದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ.












Click it and Unblock the Notifications