ಪ್ರಕಾಶ್ ರೈ ಹೊಸ ವಿಡಿಯೋ... ಇದು ವಿವಾದವಲ್ಲ, ಕಳಕಳಿ!
'ಈ ದೇಶ, ಈ ರಾಜ್ಯ ಈಗ ನಿಮ್ಮ ಕೈಯಲ್ಲಿದೆ. ಯೋಚಿಸಿ ಮತಹಾಕಿ' ಎನ್ನುತ್ತಲೇ ತಮ್ಮ ಹೊಸ ವಿಡಿಯೋದಲ್ಲಿ ಮಾತು ಆರಂಭಿಸಿದ್ದಾರೆ ನಟ ಪ್ರಕಾಶ್ ರೈ.
ಕಳೆದ ಹಲವು ದಿನಗಳಿಂದ ಟ್ವಿಟ್ಟರ್ ನಲ್ಲಿ ನಿರಂತರವಾಗಿ ವಿಡಿಯೋ ಹಾಕುತ್ತಲೇ ಇದ್ದ ಪ್ರಕಾಶ್ ರೈ ಇಂದು ವಿವಾದಕ್ಕೆ ಎಡೆಮಾಡಿಕೊಡದ, ಶುದ್ಧ ಕಳಕಳಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
'ಈ ಕಳ್ಳರು ನಮ್ಮನ್ನು ಆಳಬೇಕಾ?', 'ನಿಮಗೆ ಓಟು ಹಾಕೋದು ನಾಯಿಯಲ್ಲ, ಮನುಷ್ಯರು' ಎನ್ನುತ್ತ ದಿನೆ ದಿನೇ ಪ್ರಚೋದನಾತ್ಮಕ ವಿಡಿಯೋ ಹಾಕಿ ಹಲವರ ಕೆಂಗಣ್ಣಿಗೂ, ಮತ್ತೆ ಕೆಲವರ ಶಿಳ್ಳೆ-ಚಪ್ಪಾಳೆಗೂ ಗುರಿಯಾಗಿದ್ದ ಪ್ರಕಾಶ್ ರೈ, ರಾಜಕಾರಣಿಗಳು ಬಹಿರಂಗ ಪ್ರಚಾರಕ್ಕೆ ಮಂಗಳ ಹಾಡುತ್ತಿದ್ದಂತೆಯೇ ವಿವಾದಗಳಿಗೆಲ್ಲ ತೆರೆ ಎಳೆದು, ಕಳಕಳಿಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಪ್ರಕಾಶ್ ರೈ ಹೇಳಿದ್ದೇನು? ಕೇಳಿ...
| Array |
ದೇಶ ರಾಜ್ಯ ನಿಮ್ಮ ಕೈಲಿದೆ
"ಚುನಾವಣಾ ಪ್ರಚಾರ ಮುಗಿದಿದೆ. ಇಷ್ಟು ದಿನ ಕೇಳಿಸಿಕೊಳ್ಳಬೇಕಾಗಿದ್ದು, ಕೇಳಿಸಿಕೊಳ್ಳಲೇ ಬಾರದ್ದನ್ನೂ ಕೇಳಿಸಿಕೊಂಡಿದ್ದೀರಿ. ನೋಡಬೇಕಾದ್ದು, ನೋಡಲೇಬಾರದ್ದು ಎಲ್ಲವನ್ನೂ ನೋಡಿದ್ದೀರಿ. ಈಗ ದೇಶ, ರಾಜ್ಯ ನಿಮ್ಮ ಕೈಯಲ್ಲಿದೆ. ಯಾರು ಎಷ್ಟೇ ಮಾತನಾಡಿದ್ದರೂ ನಿರ್ಧಾರ ನಿಮ್ಮದು. ಏಕೆಂದರೆ ಇದು ನಿಮ್ಮ ದೇಶ, ನಿಮ್ಮ ಸಮಾಜ."
-ಪ್ರಕಾಶ್ ರೈ

ಸಮರ್ಥರನ್ನು ಚುನಾಯಿಸಿ
"ಎಲ್ಲ ಮಾತುಗಳನ್ನೂ ಮತ್ತೊಮ್ಮೆ ಕೇಳಿಸಿಕೊಳ್ಳಿ. ನಮ್ಮ ಮುಂದಿನ ಅಭಿವೃದ್ಧಿಯ ಸಮಾಜಕ್ಕಾಗಿ, ನಮ್ಮ ಇಂದಿನ ನಾಳಿನ ಭವಿಷ್ಯಕ್ಕಾಗಿ ನೀವು ಚುನಾಯಿಸುವ ಪ್ರತಿನಿಧಿಗಳು ಬಹಳ ಮುಖ್ಯ, ಅವರು ಚುನಾಯಿತರಾದ ನಂತರ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ರಾಜ್ಯ ನಮ್ಮ ದೇಶ ಯಾವ ಕಡೆ ಸಾಗಬೇಕು, ಯಾವುದನ್ನು ಆರಸಿ ಹೋಗಬೇಕು ಎಂಬುದನ್ನು ನಿರ್ಧರಿಸುವವರು ಅವರು. ಆದ್ದರಿಂದ ಸಮರ್ಥರನ್ನು ಚುನಾಯಿಸುವ ಹೊಣೆ ನಿಮ್ಮ ಕೈಲಿದೆ. ಯೋಚಿಸಿ, ನಿರ್ಧರಿಸಿ ಮತಚಲಾಯಿಸಿ."
|
ಈಗ ನೀವು ಹೇಳಬೇಕು
ನಮಸ್ಕಾರ, ಎಲ್ಲವನ್ನೂ ನೋಡಿದ್ದೀರಿ, ಎಲ್ಲರನ್ನೂ ಕೇಳಿಸಿಕೊಂಡಿದ್ದೀರಿ, ಚುನಾವಣೆಯ ಅಬ್ಬರ, ಸುಳ್ಳುಗಳ ಸರಮಾಲೆ ಅಂತಃಕರಣದ ಮಾತುಗಳು, ಸುಳ್ಳು ಆಶ್ವಾಸನೆ ಎಲ್ಲವೂ ಮುಗಿದಿದೆ. ಇನ್ನು ಮೇಲೆ ನಿಮ್ಮನ್ನು ಯಾರೂ ಕೇಳಲ್ಲ. ಮಾತನಾಡೋಲ್ಲ. ಈಗ ನೀವು ಹೇಳಬೇಕು. ಅವಕಾಶ ನಿಮ್ಮ ಕೈಲಿದೆ. ಮತ ಹಾಕುವ ಮೊದಲು ಯೋಚಿಸಿ, ಅಭಿವೃದ್ಧಿಯ ಭಾರತ ಯಾರ ಕೈಲಿದೆ. ಸೌಹಾರ್ದಯುತ ಭಾರತ ಯಾರ ಕೈಯಲ್ಲಿದೆ ಮತ್ತು ನಮ್ಮನ್ನು ಪ್ರತಿನಿಧಿಸುವವರು ಯಾರು? ನಿಮ್ಮ ನಿಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ಮಾತು, ನಡೆಗಳನ್ನು ಒಮ್ಮೆ ನೆನಪಿಸಿಕೊಂಡು ನಂತರ ಮತಚಲಾಯಿಸಿ. ಸುಂದರ, ಅದ್ಭುತ ಸಮಾಜಕ್ಕಾಗಿ, ದೇಶಕ್ಕಾಗಿ ಮತಚಲಾಯಿಸಿ.

ದಾಖಲೆಯ ಮತದಾನದ ನಿರೀಕ್ಷೆ
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12 ರಂದು ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿರುವ ಕರ್ನಾಟಕ ಚುನಾವಣೆಯಲ್ಲಿ ದಾಖಲೆಯ ಮತದಾನ ನಡೆಸಬೇಕೆಂಬ ಉದ್ದೇಶದಿಂದ ಈಗಾಗಲೇ ಚುನಾವಣಾ ಆಯೋಗ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕವೂ ಸಾಕಷ್ಟು ಪ್ರಚಾರ ನೀಡಲಾಗಿದೆ. ಸಂವಿಧಾನ ನೀಡಿದ ಅತ್ಯಮೂಲ್ಯ ಹಕ್ಕನ್ನು ಕರ್ನಾಟಕದ ಜನತೆ ಹೇಗೆ ಬಳಸಿಕೊಳ್ಳುತ್ತದೆ ಎಂಬುದು ನಾಳೆ ತಿಳಿಯಲಿದೆ. ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.












Click it and Unblock the Notifications