ಪತ್ರಿಕೆಗಳ ಕವರ್ ಪೇಜ್ ಜಾಹೀರಾತು ಹಂಚಿಕೊಂಡು ಬಿಜೆಪಿಗೆ ಪ್ರಶ್ನಿಸಿದ ಕಾಂಗ್ರೆಸ್- ಏನಿದು ಕೋಲಾಹಲ ಸೃಷ್ಟಿಸಿದ ಟ್ವೀಟ್?
ಬಿಜೆಪಿಯು ಪತ್ರಿಕೆಗಳಿಗೆ ನೀಡಿರುವ ಕವರ್ ಪೇಜ್ ಜಾಹೀರಾತುಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಈ ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲ ಸೃಷ್ಟಿಸಿದೆ. ಹಾಗಾದರೆ, ಈ ಟ್ವೀಟ್ನಲ್ಲಿ ಏನಿದೆ ಎಂಬುದರ ಬಗ್ಗೆ ನೀವು ತಿಳಿಯಿರಿ
ಬೆಂಗಳೂರು, ಜನವರಿ 24: ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ, ರಾಜಕೀಯ ಪಕ್ಷಗಳ ನಡುವಿನ ಟ್ವೀಟ್ ವಾರ್ ಜೋರಾಗಿ ನಡೆದಿದೆ. ಇದರ ಭಾಗವಾಗಿ ಕರ್ನಾಟಕ ಕಾಂಗ್ರೆಸ್ ಘಟಕವು ಬಿಜೆಪಿ ವಿರುದ್ಧ ಟೀಕೆಯ ಟ್ವೀಟ್ಗಳ ಸುರಿಮಳೆಯನ್ನು ಗೈಯುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪಿಎಸ್ಐ ಹಗರಣ, ಸ್ಯಾಂಟ್ರೋ ರವಿ ಪ್ರಕರಣ, ಪಾರ್ಟಿ ಪರ್ಸೆಂಟ್ ಕಮಿಷನ್ ಆರೋಪಗಳ ಬಗ್ಗೆ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಕಾಂಗ್ರೆಸ್ ರಾಜ್ಯ ಘಟಕವು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೂ ಮುಂದೆ ಹೋಗಿ ಇಂದಿನ ಎಲ್ಲಾ ಪತ್ರಿಕೆಗಳಿಗೆ ಬಿಜೆಪಿ ನೀಡಿರುವ ಜಾಹೀರಾತುಗಳ ಕವರ್ ಜಾಕೆಟ್ ಪೇಜ್ಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಸರ್ಕಾರದ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದಿಂದ ಬೆಂಗಳೂರಿನ ಅವ್ಯವಸ್ಥೆಗಳ ಬಗ್ಗೆ ನಿನ್ನೆ ಕಾಂಗ್ರೆಸ್ ಪ್ರತಿಭಟಿಸಿದ ಬೆನ್ನಲ್ಲೇ ಇಂದು ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಸುಳ್ಳುಗಳ ಜಾಹೀರಾತು ನೀಡಿದೆ. ಸರ್ಕಾರಿ ಶಾಲೆಗಳಿಗೆ ಚಾಕ್ಪೀಸ್ ಕೊಳ್ಳಲೂ ಹಣ ನೀಡದೆ ಜಾಹಿರಾತು ನೀಡಿದ ಬಸವರಾಜ ಬೊಮ್ಮಾಯಿ ಅವರೇ, ಈ ಸುಳ್ಳುಗಳಿಗೆ ಮಾಡಿದ ಖರ್ಚು ಎಷ್ಟು?' ಎಂದು ಕಾಂಗ್ರೆಸ್ ಕೇಳಿದೆ.
ಸರ್ಕಾರದ 40% ಕಮಿಷನ್ ಭ್ರಷ್ಟಾಚಾರದಿಂದ ಬೆಂಗಳೂರಿನ ಅವ್ಯವಸ್ಥೆಗಳ ಬಗ್ಗೆ ನಿನ್ನೆ ಕಾಂಗ್ರೆಸ್ ಪ್ರತಿಭಟಿಸಿದ ಬೆನ್ನಲ್ಲೇ ಇಂದು ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಸುಳ್ಳುಗಳ ಜಾಹಿರಾತು ನೀಡಿದೆ.
— Karnataka Congress (@INCKarnataka) January 24, 2023
ಸರ್ಕಾರಿ ಶಾಲೆಗಳಿಗೆ ಚಾಕ್ಪೀಸ್ ಕೊಳ್ಳಲೂ ಹಣ ನೀಡದೆ ಜಾಹಿರಾತು ನೀಡಿದ @BSBommai ಅವರೇ,
ಈ ಸುಳ್ಳುಗಳಿಗೆ ಮಾಡಿದ ಖರ್ಚು ಎಷ್ಟು? pic.twitter.com/4aXMC6vFAn
'PSI ಹಗರಣ, ಸ್ಯಾಂಟ್ರೋ ರವಿ ಹಗರಣಗಳನ್ನು ಮುಚ್ಚಿಹಾಕುವುದು ನಿಶ್ಚಿತ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಅವರ ಹೇಳಿಕೆಗೆ ಪೂರಕವಾಗಿಯೇ ಘಟನೆಗಳು ನಡೆಯುತ್ತಿವೆ. ಬಸವರಾಜ ಬೊಮ್ಮಾಯಿ ಅವರ 'ಪಾರದರ್ಶಕ, ಪ್ರಾಮಾಣಿಕ' ತನಿಖೆಯ ಅಸಲಿಯತ್ತು ಬಯಲಾಗಿದೆ. ಸಿಎಂಗೆ ದಮ್ಮು, ತಾಕತ್ತು ಇದ್ದರೆ PSI ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ' ಎಂದು ಕೆಪಿಸಿಸಿ ಟ್ವೀಟಿಸಿದೆ.
'PSI ಹಗರಣದ ತನಿಖೆಯನ್ನೇ ತನಿಖೆಗೊಳಪಡಿಸುವ ಅಗತ್ಯವಿದೆ. ಆರೋಪಿಗಳಿಗೆ ಜಾಮೀನು ಸಿಗುವ ರೀತಿ ಅಸಮರ್ಥ ವಾದ ಮಂಡಿಸಿತ್ತು ಸರ್ಕಾರ. ಆಡಿಯೋ ಒಂದರಲ್ಲಿ ಗೃಹಸಚಿವರೇ ಈ ವೈಫಲ್ಯವನ್ನು ಒಪ್ಪಿದ್ದರು. ಸಿಐಡಿ ಅಧಿಕಾರಿಗಳು ಆರೋಪಿಯನ್ನು ಪರಾರಿಯಾಗಲು ಬಿಡುತ್ತಾರೆ. ಇದು ಪಾರದರ್ಶಕ ತನಿಖೆಯೇ ಬಸವರಾಜ ಬೊಮ್ಮಾಯಿ ಅವರೇ ನ್ಯಾಯಾಂಗ ತನಿಖೆಗೆ ಹಿಂದೇಟು ಏಕೆ?' ಎಂದು ಪ್ರಶ್ನಿಸಿದೆ.
'PSI ಹಗರಣದ ಆರೋಪಿ RD ಪಾಟೀಲ್ ಹಗರಣ ಮುಚ್ಚಲು ಸಿಐಡಿ ಅಧಿಕಾರಿಗಳಿಗೆ 76 ಲಕ್ಷ ಕೊಟ್ಟಿದ್ದೇನೆ ಎಂದಿದ್ದಾನೆ, ಆ ಹಣದ ಋಣದಿಂದಲೇ ಆತನನ್ನು ಪರಾರಿಯಾಗಲು ಸಿಐಡಿ ಪೊಲೀಸರೇ ವ್ಯವಸ್ಥೆ ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರೇ? ಈತನಿಗೂ ಸಿಎಂಗೂ ನಿಕಟ ಸಂಬಂಧವಿರುವುದು ಸ್ವಾಗತದ ಬ್ಯಾನರ್ನಲ್ಲೇ ಸಾಬೀತಾಗಿದೆ. ಈಗ ಬೊಮ್ಮಾಯಿಯವರೇ ಉತ್ತರಿಸಬೇಕು' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಇದೇ ವೇಳೆ, ಸಚಿವ ಮಾಧುಸ್ವಾಮಿ ಅವರ ಹೇಳಿಕೆಯ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ. 'ಹೆಜ್ಜೆ ಹೆಜ್ಜೆಗೂ ಹಗರಣಗಳು, ಎಲ್ಲೆಲ್ಲೂ ಲಂಚಾವತಾರ, ಎಲ್ಲದರಲ್ಲೂ ವೈಫಲ್ಯ, ಸ್ವತಃ ಬಿಜೆಪಿಗರಲ್ಲೇ ಅಸಮಧಾನ, ಹೀಗಿರುವಾಗ ಬಿಜೆಪಿಗರು ಏನೆಂದು ಮಾತಾಡಬಲ್ಲರು. ಇದೇ ಮಾಧುಸ್ವಾಮಿಯವರು ತಳ್ಳುವ ಸರ್ಕಾರ, ಮ್ಯಾನೇಜ್ಮೆಂಟ್ ಸರ್ಕಾರ ಎಂದಿದ್ದರು. ಈಗ ಪರೋಕ್ಷವಾಗಿ ಬೊಮ್ಮಾಯಿ ನಾಯಕತ್ವ ವಿಫಲ ಎಂದಿದ್ದಾರೆ. ಅಲ್ಲವೇ ಬಿಜೆಪಿಯವರೇ?' ಎಂದು ಪ್ರಶ್ನಿಸಿದೆ.
ಬಿಜೆಪಿಗರ ಮೈಯ್ಯಲ್ಲಿ ಹರಿಯುವ ರಕ್ತದಲ್ಲಿ ತುಂಬಿರುವುದೇ "ವಿಟಮಿನ್ ಬಿ", ಅರ್ಥಾತ್ ಭ್ರಷ್ಟಾಚಾರದ ವಿಟಮಿನ್. ಬಿಜೆಪಿಗರು 'ಕಳ್ಳನ ಮನಸು ಹುಳ್ಳುಳ್ಳಗೆ' ಎಂಬ ಸ್ಥಿತಿಯಲ್ಲಿ ಇರುವಾಗ ಏನು ಮಾತಾಡಬಲ್ಲರು. ಅವರು ಮಾತಾಡಲಿ ಎಂದು ಇವರು, ಇವರು ಮಾತಾಡಲಿ ಎಂದು ಅವರು ಪರಸ್ಪರ ಬೆರಳು ತೋರುತ್ತಿರುವುದೇ ಬಿಜೆಪಿ ಸೋಲಿನ ಮೊದಲ ಹಂತ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
'ಚುನಾವಣೆಗಾಗಿ ಕರ್ನಾಟಕ ಟೂರಿಸ್ಟ್ಗಳಾಗಿರುವ ಮೋದಿ, ಶಾ ಒಂದೊಂದು ಬಾರಿ ಕರ್ನಾಟಕಕ್ಕೆ ಬಂದಾಗಲೂ ಕರ್ನಾಟಕಕ್ಕೆ ಒಂದೊಂದು ದ್ರೋಹ ಎಸಗುತ್ತಿದ್ದಾರೆ. ಈಗ ಫಾರ್ಮಾ ಪಾರ್ಕ್ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ ದ್ರೋಹ, ಗುಜರಾತ್ ಮೇಲೆ ಮೋಹ. ಕರ್ನಾಟಕ ಸೂಕ್ತವಾಗಿಲ್ಲ ಎಂದರೆ ಬಸವರಾಜ ಬೊಮ್ಮಾಯಿ ಅವರ ವೈಫಲ್ಯವೇ, ಕೇಂದ್ರದ ದ್ರೋಹವೇ?' ಎಂದು ಕಾಂಗ್ರೆಸ್ ಕೇಳಿದೆ.