JDS Manifesto 2023: ಇಂಧನ ವಲಯಕ್ಕೆ ಯಾವ ಭರವಸೆಗಳು
ಬೆಂಗಳೂರು, ಏಪ್ರಿಲ್ 27; ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮೇ 10ರಂದು ನಡೆಯುವ ಚುನಾವಣೆಗೆ 207 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 123 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಪಕ್ಷ ಜನರ ಮುಂದೆ ಹಲವಾರು ಭರವಸೆಗಳನ್ನು ನೀಡಿದೆ.
ಗುರುವಾರ ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ 2023ರ ಚುನಾವಣೆಗೆ ಜೆಡಿಎಸ್ ಪ್ರಣಾಳಿಕೆ 'ಜನತಾ ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ. ಎಂ. ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.

ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಇಂಧನ ಕ್ಷೇತ್ರಕ್ಕೆ ಸಾಕಷ್ಟು ಭರವಸೆಗಳನ್ನು ನೀಡಲಾಗಿದೆ. ಜಲ, ಸೌರ, ಪವನ ವಿದ್ಯುತ್ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಕೇಂದ್ರ ವಿದ್ಯುಚ್ಛಕ್ತಿ ಕಾಯಿದೆ 2022ರ ಅನುಷ್ಠಾನಕ್ಕೆ ಪಕ್ಷ ವಿರೋಧ ವ್ಯಕ್ತಪಡಿಸಿದೆ.
ಇಂಧನ ವಲಯದ ಭರವಸೆಗಳು
* ರಾಜ್ಯವನ್ನು ಹಸಿರು ಇಂಧನ ವಲಯವನ್ನಾಗಿ ರೂಪಿಸಲು ಅಸಂಪ್ರದಾಯಿಕ ಇಂಧನ ಉತ್ಪಾದನೆಗೆ ಒತ್ತು ನೀಡಲಾಗುವುದು.
* ಉದ್ಯಮಗಳು ಕಡ್ಡಾಯವಾಗಿ ಖರೀದಿಸಬೇಕಾಗಿರುವ ಅಸಂಪ್ರದಾಯಿಕ ವಲಯದ ಇಂಧನ ಪ್ರಮಾಣವನ್ನು ಶೇ 15ರಷ್ಟು ಏರಿಸುವುದು. ಉದ್ಯಮಗಳು ಹಸಿರು ಇಂಧನವನ್ನು ಹೆಚ್ಚುಗೊಳಿಸಲು ಪ್ರೋತ್ಸಾಹ ಕ್ರಮ ಕೈಗೊಳ್ಳಲಾಗುವುದು.
* ಐರೋಪ್ಯ ದೇಶಗಳಲ್ಲಿ ಈಗಾಗಲೇ ಜಾರಿಗೆ ಬಂದಿರುವ (CBAM)ಹೊಸ ಕಾನೂನಿನನ್ವಯ ಮಾನದಂಡವನ್ನು ತಲುಪಲು, ನಮ್ಮ ಉದ್ಯಮಗಳ ವಸ್ತುಗಳನ್ನು ರಫ್ತುಗೊಳಿಸಲು ಸುರಕ್ಷಿತಗೊಳಿಸುವ ಕಾರ್ಬನೀಕರಣ ಇಲ್ಲದಂತೆ ಮಾಡಲು ಸರಕಾರ ವತಿಯಿಂದ ಪ್ರೋತ್ಸಾಹಿತ ಕಾರ್ಯ ಕ್ರಮ ಕೈಗೊಳ್ಳಲಾಗುವುದು.
* ಐಟಿ, ಇ-ಕಾಮರ್ಸ್ ಮತ್ತು ಡಾಟಾ ಸೆಂಟರ್ಗಳಲ್ಲಿ ಪೂರ್ಣ ಹಸಿರು ಇಂಧನ ಬಳಕೆಯನ್ನು ಮಾಡುವಂತಾಗಲು ವಿಶೇಷ ಯೋಜನೆ.
* ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಅನ್ನು ರಾಜ್ಯದಲ್ಲಿ ಹೆಚ್ಚು ಮಾಡಲು ಉತ್ತರ ಕರ್ನಾಟಕ ಭಾಗದಲ್ಲಿ ಸೋಲಾರ್ ಪಾರ್ಕ್ ಹಾಗೂ ಹೈಬ್ರಿಡ್ ಪಾರ್ಕ್ ಸ್ಥಾಪನೆ.
* ಸಣ್ಣ ಪ್ರಮಾಣದ ಪವನ ವಿದ್ಯುತ್ ಉದ್ಯಮಿದಾರರಿಗೆ (25mw) ಪವನ ವಿದ್ಯುತ್ ಅನ್ನು ಸ್ಥಾಪಿಸಲು ಪ್ರೋತ್ಸಾಹಿಸುವ FIT (Feed in tariff) ನಲ್ಲಿ PPA (Power Purchase Agreement) ಮಾಡಿ ಸ್ಥಾಪಿಸಲು ಉತ್ತೇಜನ ನೀಡಲು ಕ್ರಮ ಕೈಗೊಳ್ಳುವುದು.
ಕೇಂದ್ರದ ಕಾಯಿದೆಗೆ ವಿರೋಧ; ಜೆಡಿಎಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೇಂದ್ರ ವಿದ್ಯುಚ್ಛಕ್ತಿ ಕಾಯಿದೆ 2022ರ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ 2003ರ ಅನುಷ್ಠಾನದಲ್ಲಿ ವಿದ್ಯುಚ್ಛಕ್ತಿ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಹುನ್ನಾರವಿದ್ದು ಇಂತಹ ವ್ಯವಸ್ಥೆಯಲ್ಲಿ ರಾಜ್ಯದ ವಿದ್ಯುತ್ ಕಂಪನಿಗಳಿಗೆ, ರಾಜ್ಯದ ರೈತರಿಗೆ, ಗ್ರಾಹಕರಿಗೆ ಹಾಗೂ ಕೈಗಾರಿಕೆ ಉದ್ಯಮಿಗಳಿಗೆ ಅಪಾರ ನಷ್ಟ ಉಂಟಾಗುತ್ತದೆ ಎಂದು ಹೇಳಿದೆ.
ಖಾಸಗೀಕರಣದಿಂದ ವಿದ್ಯುಚ್ಛಕ್ತಿ ಕಂಪನಿಗಳ ನೌಕರರ ಉದ್ಯೋಗಕ್ಕೆ ಮತ್ತು ಗ್ರಾಹಕರ ಹಿತಕ್ಕೆ ಧಕ್ಕೆ ಉಂಟಾಗುವ ಕಾಯ್ದೆಯನ್ನು ವಿರೋಧಿಸಿ, ಎಲ್ಲಾ ವರ್ಗದ ಜನರ ಹಿತ ಕಾಪಾಡಲು ಖಾಸಗೀಕರಣಗೊಳಿಸಲು ಉದ್ದೇಶಿಸಿರುವ ಕೇಂದ್ರ ವಿದ್ಯುಚ್ಛಕ್ತಿ ಕಾಯಿದೆ-2022 ಅನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವುದನ್ನು ವಿರೋಧಿಸುತ್ತೇವೆ ಮತ್ತು ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಕ್ಷ ತಿಳಿಸಿದೆ.












Click it and Unblock the Notifications