ವಿಧಾನಸಭಾ ಚುನಾವಣೆ: ಬಿಜೆಪಿಯ ರಾಷ್ಟ್ರೀಯ ನಾಯಕರ ಕಣ್ಣು ಮಲ್ಲಿಕಾರ್ಜುನ ಖರ್ಗೆ ತವರಿನ ಮೇಲೆ!
ಬೆಂಗಳೂರು, ಏಪ್ರಿಲ್. 25: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿಯಲ್ಲಿ ಈ ಬಾರಿ ಚುನಾವಣೆಯನ್ನು ತಲೆ ಮೇಲೆ ಹೊತ್ತು ಸಾಗುತ್ತಿರುವುದು ರಾಷ್ಟ್ರೀಯ ನಾಯಕರು ಎಂಬುದನ್ನು ವಿವರಿಸಬೇಕಿಲ್ಲ. ಈ ದೆಹಲಿಯ ದಂಡು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ನೆಲದ ಮೇಲೆ ಕಣ್ಣಿಟ್ಟಿರುವುದು ಮಾತ್ರ ಸ್ಪಷ್ಟವಾಗಿ ಕಾಣುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಳೆದ ಮೂರು ತಿಂಗಳಲ್ಲಿ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಪದೇ ಪದೇ ಮೂರು ಮಂದಿ ಭೇಟಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕವನ್ನು ಗೆಲ್ಲಲು ನೋಡುತ್ತಿರುವ ಬಿಜೆಪಿ ಯಾವುದೇ ಚಿಕ್ಕ ಅವಕಾಶವನ್ನು ಬಿಡುತ್ತಿಲ್ಲ.

ಈ ಜಿಲ್ಲೆಗಳ ಕ್ಷೇತ್ರಗಳನ್ನು ಟಾರ್ಗೆಟ್ ಮಾಡುತ್ತಿರುವ ದೆಹಲಿಯ ದಂಡು, ಮಂಗಳವಾರ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಈಗ ಪ್ರಚಾರ ಅಭಿಯಾನದಲ್ಲಿ ಕಣಕ್ಕಿಳಿಸಿದ್ದಾರೆ. ಮಂಗಳವಾರ ಜಿಲ್ಲೆಯ ಉದ್ಯಮ ಮತ್ತು ವಾಣಿಜ್ಯ ಪ್ರತಿನಿಧಿಗಳೊಂದಿಗೆ ನಿರ್ಮಲಾ ಸೀತಾರಾಮನ್ ಸಂವಾದ ನಡೆಸಲಿದ್ದಾರೆ. ನಂತರ ಮಹಿಳಾ ಸಮಾವೇಶ ಮತ್ತು ಮನೆ-ಮನೆ ಪ್ರಚಾರ ಮಾಡಿ, ಬಿಜೆಪಿಗೆ ಮತ ನೀಡುವಂತೆ ಕೇಳಲಿದ್ದಾರೆ.
ಬೀದರ್ ಮತ್ತು ಕಲಬುರಗಿಯ ಬಿಜೆಪಿ ಅಭ್ಯರ್ಥಿಗಳು ರಾಜ್ಯ ಸರ್ಕಾರದ ರಿಪೋರ್ಟ್ ಕಾರ್ಡ್ನೊಂದಿಗೆ ಜನರ ಬಳಿಗೆ ಮತ ಕೇಳಲು ಹೋಗುತ್ತಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ ಮತಯಾಚನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
"ಪ್ರಧಾನಿ ಮೋದಿಯನ್ನು ವಿಶ್ವ ನಾಯಕ ಎಂದು ಒಪ್ಪಿಕೊಳ್ಳಲಾಗಿದೆ. ಅವರು ನಮ್ಮ ಕ್ಷೇತ್ರಕ್ಕೆ ಬಂದರೆ ನಮ್ಮ ಮೇಲೆ ಹಾಗೂ ಪಕ್ಷದ ಮೇಲೆ ಭಾರಿ ಪರಿಣಾಮ ಬೀರಲಿದೆ. ಅಮಿತ್ ಶಾ ಮತ್ತು ಜೆಪಿ ನಡ್ಡಾ ತಮ್ಮ ರಾಜಕೀಯ ಕಾರ್ಯತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.
ಈ ಎಲ್ಲ ಅಂಶಗಳು ಈ ಜಿಲ್ಲೆಗಳಲ್ಲಿ ಬಿಜೆಪಿಯ ಹಿಡಿತಕ್ಕೆ ಕಾರಣವಾಗಲಿದೆ ಎನ್ನಲಾಗಿದೆ. ಆದರೆ, ವಾಸ್ತವವಾಗಿ, ಬಿಜೆಪಿಯು ಈ ಪ್ರದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪ್ರಭಾವವನ್ನು ಕಡಿತಗೊಳಿಸಲು ಬಯಸಿದೆ ಎಂಬುದೆ ನಿಜವಾದ ಕಾರಣ. ಹೀಗಾಗಿಯೇ ರಾಷ್ಟ್ರೀಯ ನಾಯಕರು ಸತತವಾಗಿ ಈ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ಸಾಧನೆಗಳನ್ನು ಜನರ ಮುಂದಿಡುತ್ತಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ಸುಮಾರು 1 ಲಕ್ಷ ಮತಗಳ ಅಂತರದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಈ ವರ್ಷದ ಫೆಬ್ರವರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೇಲ್ಮನೆಯಲ್ಲಿ ನರೇಂದ್ರ ಮೋದಿ ತಮ್ಮ ತವರು ಕ್ಷೇತ್ರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೇ, ಸಂಸತ್ ಅಧಿವೇಶನ ನಡೆಯುತ್ತಿರುವಾಗಲೂ ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರಕ್ಕೆ ಹೋಗಿದ್ದರು ಎಂಬುದು. ಇದನ್ನು ಸ್ವತಃ ಖರ್ಗೆಯವರೆ ಹೇಳಿದ್ದಾರೆ. ಇನ್ನು, ಜನವರಿಯಿಂದ ಬಿಜೆಪಿಯ ಪ್ರಮುಖ ಮೂವರು ನಾಯಕರು ಬಹುತೇಕ ಪ್ರತಿ ತಿಂಗಳು ಬೀದರ್ ಮತ್ತು ಕಲಬುರಗಿಗೆ ಬಂದು ಭೇಟಿ ನೀಡುತ್ತಿದ್ದಾರೆ.
ಜನವರಿಯಲ್ಲಿ ಕಲಬುರಗಿಯಲ್ಲಿ ಲಂಬಾಣಿ ಸಮುದಾಯಕ್ಕೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದ್ದ ನರೇಂದ್ರ ಮೋದಿ, ಈ ತಿಂಗಳಾಂತ್ಯಕ್ಕೆ ಮತ್ತೆ ಬೀದರ್ಗೆ ಆಗಮಿಸಲಿದ್ದಾರೆ. ಮಾರ್ಚ್ನಲ್ಲಿ, ಗೃಹ ಸಚಿವ ಅಮಿತ್ ಶಾ ಬೀದರ್ಗೆ ಎರಡು ಬಾರಿ ಭೇಟಿ ನೀಡಿದರು . ಮಾರ್ಚ್ 3 ರಂದು ವಿಜಯ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಮತ್ತು ಮಾರ್ಚ್ 26 ರಂದು 103 ಅಡಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಗೋರಟಾ ಮೈದಾನದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮಾರಕವನ್ನು ಉದ್ಘಾಟಿಸಲು ಭೇಟಿ ನೀಡಿದ್ದರು.
ಜನವರಿಯಲ್ಲಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಕಲಬುರಗಿಗೆ ಬಂದಿದ್ದರು. ಇದಲ್ಲದೆ ಕಳೆದ ಶುಕ್ರವಾರ ಬೀದರ್ನಲ್ಲಿದ್ದರು. ಬೀದರ್ ಮತ್ತು ಕಲಬುರಗಿ ತೆಲಂಗಾಣದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಹೈದರಾಬಾದ್ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ, ರಾಜ್ಯದ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಲ್ಲಿದೆ.












Click it and Unblock the Notifications