Jagadish Shettar interview: ಮೋದಿ ಆಹ್ವಾನ ನೀಡಿದರೂ ಬಿಜೆಪಿಗೆ ಹೋಗಲ್ಲ: ಸಂದರ್ಶನದಲ್ಲಿ ಶೆಟ್ಟರ್ ಹೇಳಿದ್ದೇನು?
ಬೆಂಗಳೂರು,ಏಪ್ರಿಲ್24: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಟಿಕೆಟ್ ಹಂಚಿಕೆಯಿಂದಾಗಿ ಹಲವು ಮೂಲ ಬಿಜೆಪಿ ನಾಯಕರು ಗುಡ್ ಬೈ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಿಂದ ಆರು ಬಾರಿ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಈ ಬಾರೀ ಟಿಕೆಟ್ ಕೈ ತಪ್ಪಿದಕ್ಕೆ ಕಮಲ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಿದ್ದು, ಬಿಜೆಪಿ ಮುಗಿದ ಅಧ್ಯಾಯ, ನಾನು ಕಾಂಗ್ರೆಸ್ಗೆ ಬದ್ಧ. ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿಗೆ ಆಹ್ವಾನ ನೀಡಿದರೂ ಮತ್ತೆ ಬಿಜೆಪಿಗೆ ಹೋಗಲ್ಲ ಎಂದು ಡೆಕ್ಕನ್ ಹೆರಾಲ್ಡ್ ಸಂದರ್ಶನದಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಡೆಕ್ಕನ್ ಹೆರಾಲ್ಡ್ ಸಂದರ್ಶನದಲ್ಲಿ ಶೆಟ್ಟರ್ ಹೇಳಿದ್ದೇನು?
ರಾಜ್ಯಸಭಾ ಸ್ಥಾನದಂತಹ ಬಿಜೆಪಿಯ ಆಫರ್ಗಳನ್ನು ಏಕೆ ತಿರಸ್ಕರಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿನಾಕಾರಣ ಏಕಾಏಕಿ ಟಿಕೆಟ್ ನಿರಾಕರಿಸಿದ್ದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ಕ್ಷೇತ್ರದ ಜನತೆಗೆ ಅವಮಾನ ಮಾಡಲಾಗಿದೆ.
ಇನ್ನು ಆರು ತಿಂಗಳಾದರೂ ಶಾಸಕನಾಗುವ ಅವಕಾಶ ಕೋರಿ ರಾಜಕೀಯದಿಂದ ಗೌರವಯುತವಾಗಿ ನಿರ್ಗಮಿಸಲು ಯತ್ನಿಸಿದ್ದೆ. ಹೈಕಮಾಂಡ್ನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಮರುದಿನವೇ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಿದ್ದು ಯಾಕೆ? ಸ್ವತಂತ್ರವಾಗಿ ಸ್ಪರ್ಧಿಸುವುದು ಆಯ್ಕೆ ಇರಲಿಲ್ಲವೇ ಎಂದ ಪ್ರಶ್ನೆಗೆ ಉತ್ತರಿಸಿ, ನಾನು ರಾಷ್ಟ್ರೀಯ ಪಕ್ಷದಿಂದ ಬಂದಿದ್ದೇನೆ ಮತ್ತು ನಾನು ಇನ್ನೊಂದು ರಾಷ್ಟ್ರೀಯ ಪಕ್ಷದೊಂದಿಗೆ ಇರಲು ಬಯಸುತ್ತೇನೆ, ಆದ್ದರಿಂದ ನನ್ನ ಹೋರಾಟಕ್ಕಾಗಿ ಹೋರಾಡುವ ಶಕ್ತಿ ನನಗೆ ಇದೆ.
ನಾನು ಸ್ವತಂತ್ರವಾಗಿ ಸ್ಪರ್ಧಿಸಿದರೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ನನ್ನ ಸುತ್ತಮುತ್ತಲಿನವರಿಗೆ ಬೆದರಿಕೆ ಹಾಕಿ ನನ್ನನ್ನು ಪ್ರತ್ಯೇಕಿಸುತ್ತಿದ್ದರು. ನನ್ನನ್ನು ಗೌರವದಿಂದ ಕಾಣುವಂತೆ ನಾನು ಕಾಂಗ್ರೆಸ್ಗೆ ಕೇಳಿಕೊಂಡಿದ್ದೇನೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಹಂತದಲ್ಲೂ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.

ಆರ್ಎಸ್ಎಸ್ ಸಂಬಂಧದಿಂದ ಹೊರಬರುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿ, ಬಸವಣ್ಣನವರ ತತ್ವಗಳನ್ನು ಪಾಲಿಸುತ್ತೇನೆ. ಅವರ ಸಮಾನತೆ ಮತ್ತು ಸೌಹಾರ್ದತೆಯ ತತ್ವಗಳನ್ನು ಅನುಸರಿಸುವವರಿಗೆ ಯಾವುದೇ ಸಂಘಟನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ನಾನು RSS ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ.
ಬಿಜೆಪಿ ಅಧಿಕಾರಕ್ಕಾಗಿ ಕಾಂಗ್ರೆಸ್ ಶಾಸಕರನ್ನು ಸ್ವಾಗತಿಸಿತ್ತು. ಆಗ ಸಿದ್ಧಾಂತ ಎಲ್ಲಿತ್ತು? ನಾನು ನನ್ನ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದೇನೆ ಮತ್ತು ನನ್ನ ಆರ್ಎಸ್ಎಸ್ ಹಿನ್ನೆಲೆಯಿಂದಾಗಿ ಕಾಂಗ್ರೆಸ್ನಲ್ಲಿ ಮುಜುಗರದ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವು ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನನ್ನ ನಿಲುವು ತಿಳಿಸುತ್ತೇನೆ ಎಂದರು.
ಮೋದಿ ಮತ್ತು ಶಾ ವಿರುದ್ಧ ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಮರಳುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಮೋದಿ ಹಾಗೂ ಅಮಿತ್ ಶಾ ವ್ಯಕ್ತಿತ್ವದಿಂದ ನನಗೆ ಅವರ ಬಗ್ಗೆ ಗೌರವವಿದೆ. ಆದರೆ ರಾಜ್ಯ ಬಿಜೆಪಿ ಕೇವಲ ಒಬ್ಬ ವ್ಯಕ್ತಿಯ (ಬಿ.ಎಲ್.ಸಂತೋಷ್) ಕಪಿಮುಷ್ಠಿಯಲ್ಲಿದೆ.
ತನ್ನ ಸಹಾಯಕರ ಬೆಳವಣಿಗೆಗಾಗಿ ಇದೆಲ್ಲವನ್ನೂ ಮಾಡುತ್ತಿದ್ದಾರೆ. ಇವೆಲ್ಲವೂ ಮೋದಿ ಮತ್ತು ಶಾ ಅವರ ಅರಿವಿನಿಂದ ನಡೆದಿದ್ದಾರೋ ಇಲ್ಲವೋ ಎಂಬ ಅನುಮಾನವಿದೆ. ಮೋದಿ ಆಹ್ವಾನ ನೀಡಿದರೂ ಮತ್ತೆ ಬಿಜೆಪಿಗೆ ಹೋಗುವುದರಲ್ಲಿ ಅರ್ಥವಿಲ್ಲ. ಅದೊಂದು ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ, ಮೋದಿ, ಶೆಟ್ಟರ್ ಅವರನ್ನು ಇಷ್ಟ ಪಡುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆ ಸಂಯೋಜನೆಗೆ ತೊಂದರೆಯಾದಾಗ, ಜನರು ನನ್ನನ್ನು ಬೆಂಬಲಿಸುತ್ತಾರೆ. ಎಲ್ಲಾ ಬಿಜೆಪಿ ಅಭ್ಯರ್ಥಿಗಳು 1994 ರ ಮೊದಲು ಠೇವಣಿ ಕಳೆದುಕೊಂಡರು. ಬಿಜೆಪಿಗೆ ಯಾವುದೇ ಆಧಾರವಿಲ್ಲ ಮತ್ತು ನಾನು ಅದನ್ನು ರಚಿಸಿದೆ. ಕ್ಷೇತ್ರದಲ್ಲಿ ಜನರು ನನ್ನ ನಿರ್ಧಾರ ಸರಿಯಾಗಿದೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಬಿಜೆಪಿಯ ಬೆಂಬಲಕ್ಕಿಂತ ಶೆಟ್ಟರ್ ಅವರ ಬೆಂಬಲ ದೊಡ್ಡದಿದೆ ಎಂದರು.
ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆ ಚುನಾವಣೆಯ ಮೇಲೆ ಪ್ರಭಾವದ ಬಗ್ಗೆ ಲಿಂಗಾಯತರ ಪ್ರತಿಕ್ರಿಯೆ ಏನು? ಎಂಬ ಬಗ್ಗೆ ಮಾತನಾಡಿ, ನಮ್ಮಂತಹವರನ್ನು ಹೊರಗೆ ಕಳುಹಿಸಿ ಕೆಲವರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಅನುಕೂಲ ಮಾಡಿಕೊಡುವ ಷಡ್ಯಂತ್ರ ನಡೆದಿದೆ.
ಲಿಂಗಾಯತ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಿದ್ದು, ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ತಮಗೆ ಅನ್ಯಾಯವಾಗಿದೆ. 25-30 ಕ್ಷೇತ್ರಗಳಲ್ಲಿ ಲಿಂಗಾಯತ ಮುಖಂಡರು ಕಾಂಗ್ರೆಸ್ಗೆ ಬರುವುದಾಗಿ ಹೇಳುತ್ತಿದ್ದಾರೆ. ಇದು ಬಿಜೆಪಿ ಮೇಲೆ ಪರಿಣಾಮ ಬೀರಲಿದೆ ಎಂದರು.
ನಮ್ಮನ್ನ ಬೆಂಬಲಿಸಿದ ಕಾರ್ಪೋರೇಟರ್ ಗಳು ಮಾನಸಿಕವಾಗಿ ನನ್ನೊಂದಿಗಿದ್ದಾರೆ. ಅವರನ್ನು ಬಲವಂತವಾಗಿ ಅಲ್ಲಿಯೇ ಇರಿಸಲಾಗಿತ್ತು, ನಾನಿಲ್ಲದೇ ಬಿಜೆಪಿಯಲ್ಲಿ ಅನಾಥ ಎಂಬ ಭಾವನೆ ಮೂಡಿದ್ದು, ಈಗ ಹೊರಗೆ ಬಂದಿದ್ದಾರೆ ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಸರಿಯಾದ ಸಮಯಕ್ಕೆ ಕಾರ್ಪೊರೇಟರ್ಗಳೂ ನನ್ನ ಜೊತೆ ಸೇರುತ್ತಾರೆ ಎಂದರು.
ನೀವು ಕಾಂಗ್ರೆಸ್ ನಲ್ಲಿ ಸ್ಟಾರ್ ಪ್ರಚಾರಕರು. ಈ ಚುನಾವಣೆಯಲ್ಲಿ ನಿಮ್ಮ ಮೇಲಿರುವ ಜವಾಬ್ದಾರಿಗಳೇನು? ಎಂದ ಪ್ರಶ್ನೆಗೆ ಉತ್ತರಿಸಿ, ಹಲವು ಕ್ಷೇತ್ರದ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ನನ್ನನ್ನು ಕೇಳುತ್ತಿದ್ದಾರೆ. ಪಕ್ಷದ ತೀರ್ಮಾನದಂತೆ ಬೇರೆ ಬೇರೆ ಪ್ರದೇಶಗಳಿಗೆ ಪ್ರವಾಸ ಮಾಡುತ್ತೇನೆಯೇ ಹೊರತು ಸ್ವಇಚ್ಛೆಯಿಂದಲ್ಲ. ನನ್ನ ಕ್ಷೇತ್ರ ಮತ್ತು ಧಾರವಾಡ ಜಿಲ್ಲೆಯ ಮೇಲೆ ನನ್ನ ಗಮನ ಹೆಚ್ಚು ಇರುತ್ತದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications