ಕರ್ನಾಟಕ ಚುನಾವಣೆ 2023: ನೀತಿ ಸಂಹಿತೆ ಜಾರಿ ಬಳಿಕ ಹತ್ತೇ ದಿನದಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ, ವಿವರ
ಬೆಂಗಳೂರು, ಏಪ್ರಿಲ್ 10: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸರಿಯಾಗಿ ಒಂದು ತಿಂಗಳ ಮಾತ್ರವೇ ಬಾಕಿ ಇದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಮಾರ್ಚ್ 29ರಿಂದಲೇ ಜಾರಿಯಲ್ಲಿದೆ. ವಿಧಾನಸಭೆ ಚುನಾವಣೆ ಪಾರದರ್ಶಕತೆಯಿಂದ ನಡೆಯುವಂತೆ ಮತ್ತು ಅಕ್ರಮ ನಡೆಯದಂತೆ ರಾಜ್ಯ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.
ಈ ಸಂಬಂಧ ಅಬಕಾರಿ ಇಲಾಖೆ, ಪೊಲೀಸ್ ಅಧಿಕಾರಿಗಳು, ವಿಶೇಷ ಸ್ಕ್ವಾಡ್ಗಳು ಕಾರ್ಯನಿರತರಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿದ್ದು, ತಪಾಸಣೆ ತೀವ್ರಗೊಳಿಸಲಾಗಿದೆ. ಚುನಾವಣೆ ನೀತಿ ಸಂಹಿತಿ ಜಾರಿಯಾದಾಗಿನಿಂದ ಈವರೆಗಿನ 10 ದಿನದಲ್ಲಿ (ಏಪ್ರಿಲ್ 9ರವರೆಗೆ) ದಾಖಲೆ ಇಲ್ಲ ಶತಕೋಟಿ ರೂಪಾಯಿ ಮೌಲ್ಯದ ನಗದು ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ನಗದು ವಹಿವಾಟುಗಳ ಮೇಲೆ ಚುನಾವಣಾ ಆಯೋಗ ನಿಗಾ ಇರಿಸಿದ್ದು ಚೆಕ್ಪೋಸ್ಟ್ಗಳನ್ನು ನಿರ್ಮಿಸಿದೆ. ದಾಖಲೆ ರಹಿತ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಸಾಗಿಸುತ್ತಿದ್ದ ಉಡುಗೊರೆ ಹಾಗೂ ಇನ್ನಿತರ ವಸ್ತುಗಳನ್ನು ಸಹ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಳೆದ 10 ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಹಣ ಹಾಗೂ ಇನ್ನಿತರ ವಸ್ತುಗಳನ್ನು ಚುನಾವಣೆ ಆಯೋಗ ಜಪ್ತಿ ಮಾಡಿದೆ.
5.2 ಲಕ್ಷ ಲೀಟರ್ ಅಕ್ರಮ ಮದ್ಯ ವಶ
ದಿನನಿತ್ಯ ಆಯೋಗ ಹೊರಡಿಸಿರುವ ವರದಿ ಪ್ರಕಾರ, ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ ಜಾರಿ, ಅಂದಿನಿಂದ ಇಲ್ಲಿಯವರಿಗೆ ಒಟ್ಟು 99.18 ಕೋಟಿಗಳಷ್ಟು ಹಣ ಮತ್ತು ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೇವಲ ಹತ್ತೇ ದಿನಗಳಲ್ಲಿ 36.8 ಕೋಟಿ ರೂಪಾಯಿ ನಗದು, 15.46 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗೆಂದು ಸಾಗಿಸುತ್ತಿದ್ದ ವಸ್ತುಗಳು, 30 ಕೋಟಿ ರೂಪಾಯಿ ಮೌಲ್ಯದ 5.2 ಲಕ್ಷ ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.

ಅಷ್ಟೇ ಅಲ್ಲದೇ 15 ಕೋಟಿ ರೂಪಾಯಿ ಬೆಲೆಯ ಬಂಗಾರ ಹಾಗೂ 2.5 ಕೋಟಿ ರೂಪಾಯಿ ಬೆಲೆಯ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ವರದಿಯಲ್ಲಿ ತಿಳಿಸಿದೆ.
ಲಕ್ಷಾಂತರ ರೂ. ಮೌಲ್ಯದ ಟಿವಿಗಳು ಜಪ್ತಿ
ಏಪ್ರಿಲ್ 09ರಂದು ಭಾನುವಾರ ಕಲ್ಯಾಣ ಕರ್ನಾಟಕ ಭಾಗವಾದ ಯಾದಗಿರಿ ಜಿಲ್ಲೆಯಲ್ಲಿ 21 ಲಕ್ಷ ರೂ. ಮೌಲ್ಯದ 56 ಟಿವಿಗಳನ್ನು, 34 ಲಕ್ಷ ರೂಪಾಯಿ ನಗದು ಹಣವನ್ನು ಬೆಂಗಳೂರು ಗ್ರಾಮಾಂತರ ನೆಲಮಂಗಲ ಕ್ಷೇತ್ರದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ ವಶಪಡಿಸಿಕೊಂಡಿದೆ. ಅದೇ ರೀತಿ ಅಬಕಾರಿ ಇಲಾಖೆಯ ನಿಯೋಜಿತ ಅಧಿಕಾರಿಗಳು 1.62 ರೂಪಾಯಿ ಮೌಲ್ಯದ 54,282 ಲೀಟರ್ ನಷ್ಟು ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದೆ.
ರಾಜ್ಯ ಚುನಾವಣಾ ಆಯೋಗವು ಪಾರದರ್ಶಕತೆಗೆ ಆದ್ಯತೆ ನೀಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸೂಕ್ತ ದಾಖಲೆಗಳಿಲ್ಲದ ನಗದು ಹಾಗೂ ಮತದಾರರ ಮೇಲೆ ಪ್ರಭಾವ ಭೀತಿ ಓಲೈಕೆ ಮಾಡಲು ಯತ್ನಿಸು್ತಾರೆ. ಈ ಕಾರಣದಿಂದ ಅಂತಹ ಘಟನೆಗಳು ನಡೆಯದಂತೆ ತಡೆಯಲು ಹಾಗೂ ಪಾರದರ್ಶಕ ಮತದಾನ ನಡೆಯಲು ರಾಜ್ಯಾದ್ಯಂತ ನಿಗಾ ವಹಿಸಿದೆ.
ಕರ್ನಾಟಕದಲ್ಲಿರುವ ಒಟ್ಟು 224 ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಹಂತದಲ್ಲಿ ಮುಂದಿನ ತಿಂಗಳ ಮೇ 10 ರಂದು ಚುನಾವಣೆ ಜರುಗಲಿದೆ. ಬಳಿಕ ಮೇ 13 ರಂದು ಫಲಿತಾಂಶ ಘೋಷಣೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ.












Click it and Unblock the Notifications