ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಕುಗಳ ಸೇರ್ಪಡೆ: ಶತಕ ಮುಟ್ಟಿದ ಸಂಖ್ಯೆ
ಬೆಂಗಳೂರು, ಅಕ್ಟೋಬರ್ 15: ರಾಜ್ಯದಲ್ಲಿನ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ರಾಜ್ಯ ಸರ್ಕಾರ ಇನ್ನೂ 14 ತಾಲ್ಲೂಕುಗಳನ್ನು ಸೇರ್ಪಡೆಗೊಳಿಸಿದೆ.
ಕಳೆದ ಸೆಪ್ಟೆಂಬರ್ 25ರಂದು 26 ಜಿಲ್ಲೆಗಳ 86 ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಲುಗಳ ಹೆಸರನ್ನು ಸೇರಿಸಿರುವುದರಿಂದ ಪಟ್ಟಿಯಲ್ಲಿನ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 100ಕ್ಕೆ ಮುಟ್ಟಿದೆ.
ಪ್ರಸಕ್ತ ವರ್ಷ ರಾಜ್ಯದ ವಿವಿಧೆಡೆ ಅತಿವೃಷ್ಟಿಯಿಂದ ವಿಪರೀತ ಹಾನಿ ಸಂಭವಿಸಿದ್ದರೂ, ಅನೇಕ ಕಡೆ ಮುಂಗಾರು ಮಳೆ ಕೈಕೊಟ್ಟಿದೆ.
2016ರ ಬರ ಕೈಪಿಡಿ ಹಾಗೂ ಪರಿಷ್ಕೃತ ಮಾರ್ಗಸೂಚಿಯ ಮಾನದಂಡಕ್ಕೆ ಅನುಗುಣವಾಗಿ ವಾಡಿಕೆಗಿಂತ ಶೇ 60ರಷ್ಟು ಮಳೆ ಕೊರತೆ ಮತ್ತು ಸತತ ಮೂರು ವಾರದ ಅಥವಾ ತೀವ್ರ ಶುಷ್ಕ ವಾತಾವರಣವನ್ನು ಪರಿಗಣಿಸಿ ಈ ನೂತನ ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಟಿ. ನಾರಾಯಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದು ಹೊಸ ತಾಲ್ಲೂಕುಗಳು?
ಬೆಳಗಾವಿಯ ಅಥಣಿ, ಬಾಗಲಕೋಟೆಯ ಬೀಳಗಿ ಮತ್ತು ಮುದೋಳ, ಬೆಂಗಳೂರು ನಗರದ ಆನೇಕಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿತ್ರದುರ್ಗದ ಹೊಸದುರ್ಗ, ಹೊಳಲ್ಕೆರೆ, ತುಮಕೂರು ಜಿಲ್ಲೆಯ ತುರುವೇಕೆರೆ, ದಾವಣಗೆರೆಯ ದಾವಣಗೆರೆ, ಜಗಳೂರು, ಮಂಡ್ಯದ ಪಾಂಡವಪುರ, ಬೀದರ್ ಜಿಲ್ಲೆಯ ಔರಾದ್ ಮತ್ತು ಬಸವ ಕಲ್ಯಾಣ ಜಿಲ್ಲೆಗಳು.












Click it and Unblock the Notifications