'ಮಾಡಿದ್ದುಣ್ಣೋ ಮಹಾರಾಯ': ಬಿಜೆಪಿಯ ಮುನಿರತ್ನ ಬಂಧನ ಆರೋಪಕ್ಕೆ ಕಾಂಗ್ರೆಸ್ ಸಚಿವರ ತಿರುಗೇಟು
ಬೆಂಗಳೂರು, ಸೆಪ್ಟಂಬರ್ 15: ಕಮಿಷನ್ಗೆ ಬೇಡಿಕೆ ಇಟ್ಟು ಗುತ್ತೆಗೆದಾರನಿಗೆ ಜೀವ ಬೆದರಿಕೆ ಹಾಕಿ ಮತ್ತು ಜಾತಿ ನಿಂದನೆ ಮಾಡಿದ್ದಾರೆಂದು ಬಿಜೆಪಿ ಶಾಸಕ ಮುನಿರತ್ನ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಕೋಲಾರ ಬಳಿ ಪೊಲೀಸರು ನೆನ್ನೆ ಬಂಧಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಸಚಿವರು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಶಾಸಕರ ಬಂಧನ ಕುರಿತಂತೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನಾವು ಶಾಸಕ ಮುನಿರತ್ನ ಅವರಿಗೆ ಬೈಯ್ಯುವಂತೆ ಹೇಳಿದ್ದೆವಾ? ಸಿಕ್ಕ ಸಿಕ್ಕ ಹಾಗೇ ಬಾಯಿಗೆ ಬಂದ ಹಾಗೇ ಬೈಯ್ಯವಂತೆ ಹೇಳಿರಲಿಲ್ಲ. ಕಾಂಗ್ರೆಸ್ ನವರು, ಬಿಜೆಪಿಯವರು, ಜೆಡಿಎಸ್ ನವರು ಯಾರು ಸಹ ಬೈಯ್ಯಲು ಹೇಳಿಲ್ಲ. ನಾವು ಅವರನ್ನು ತರಾತುರಿಯಲ್ಲಿ ಬಂಧಿಸಿಲ್ಲ ಎಂದು ಬಂಧನವನ್ನು ಸಮರ್ಥಿಸಿಕೊಂಡರು.

ಬಂಧಿಸಿದರೆ ಕಾಂಗ್ರೆಸ್ನವರು ಬಂಧಿಸಿದರು ಎನ್ನುತ್ತಾರೆ. ಬಂಧಿಸದೇ ಇದ್ದಾರೆ ಬಂಧಿಸಲಾಗಲಿಲ್ಲ ಎಂದು ಹೇಳುತ್ತಾರೆ ಎಂದು ಅವರು ವ್ಯಂಗ್ಯವಾಡಿದರು. ಈ ವಿಚಾರದಲ್ಲಿ ಸರ್ಕಾರ ಸರಿಯಾಗಿದೆ ಎಂದರು.
ಆಕಸ್ಮಿಕವಾಗಿ ಗಲಾಟೆ ಆಗಿರಬಹುದು: ಜಾರಕಿಹೊಳಿ
ಪ್ರಧಾನಿ ಭಾಷಣದಲ್ಲಿ ನಾಗಮಂಗಲ ಗಲಾಟೆ ವಿಷಯ ಪ್ರಸ್ತಾಪವಾಗಿದೆ. ಅದನ್ನ ಬಿಟ್ಟು ಅವರಿಗೆ ಬೇರೆ ಏನು ಹೇಳುವುದಿದೆ. ರಾಜ್ಯದಲ್ಲಿ ಅರವತ್ತು ಸಾವಿರ ಗಣಪತಿಗಳು ಪ್ರತಿಷ್ಠಾಪನೆಗೊಂಡಿವೆ. ಎಲ್ಲೋ ಒಂದು ಕಡೆ ಆಕಸ್ಮಿಕವಾಗಿ ಗಲಾಟೆ ಆಗಿರಬಹುದು. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಅದನ್ಯಾಕೆ ಇಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಇನ್ನು ಮುನಿರತ್ನ ಬಂಧನ ಕುರಿತು ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ಜಾತಿ ನಿಂದನೆ ಪ್ರಕರಣದಲ್ಲಿ ಬಂಧನವಾಗಿದೆ. ದೇಶದಲ್ಲಿ ಯಾರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ ನಮಗೂ ಗೊತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.
ಶಾಸಕ ಮುನಿರತ್ನ ಅವರಿಗೆ ನಾವೇನು ಜಾತಿ ನಿಂದನೆ ಮಾಡುವಂತೆ ಹೇಳಿದ್ದೆವಾ?. ಗುತ್ತಿಗೆದಾರರನ್ನು ಬ್ಲ್ಯಾಕ್ ಮೇಲ್ ಮಾಡು ಅಂತ ಹೇಳಿದ್ದೆವಾ ಇಲ್ಲವಲ್ಲ. ನಾವೇನು ಹೇಳಿಲ್ಲ. ಮಾಡಿದ್ದುಣ್ಣೊ ಮಾರಾಯ ಎಂಬಂತಾಗಿದೆ, ಅವರೇ ಮಾಡಿದ್ದನ್ನು ಅವರು ಇದೀಗ ಅನುಭವಿಸುತ್ತಿದ್ದಾರೆ ಎಂದರು.
ಯಾವುದೇ ಆಗಲಿ ಸತ್ಯಾಸತ್ಯತೆ ಪ್ರಮಾಣಿಕರಿಸಿ ನೋಡಬೇಕು. ಮುನಿರತ್ನ ಮಾತನಾಡಿದ ಆಡಿಯೋದಲ್ಲಿ ಏನಿದೆ ನಿಮ್ಮಲ್ಲರಿಗೂ ಗೊತ್ತಿದೆ. ಇದಕ್ಕೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ ಎಂದು ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.
ಯಾರೇ ಆಗಲಿ ಹೀಗೆ ಮಾತನಾಡಬಾದರು: ಲಾಡ್
ಇದೇ ವಿಚಾರವಾಗಿ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದ್ದು, ಮುನಿರತ್ನ ವಿಚಾರದಲ್ಲಿ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ. ಜನಪ್ರತಿನಿಧಿಯೇ ಆಗಿರಲಿ ಯಾರೇ ಇರಲಿ ಈ ರೀತಿ ಪದ ಬಳಕೆ ಮಾಡಬಾರದು. ಮುನಿರತ್ನ ಧ್ವನಿ ಓರಿಜನಲ್ ಇದೆಯಾ, ನಕಲಿಯಾ ಎಂಬುದು ಮುಂದೆ ಗೊತ್ತಾಗುತ್ತದೆ. ದೂರಿನ ಆಧಾರದಲ್ಲಿ ಈ ಬಂಧನವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಈ ರೀತಿ ಪದ ಬಳಕೆ ಮಾಡಬಾರದು. ಅವಸರದಲ್ಲಿ ಬಂಧನ ಮಾಡಲಾಗಿದೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಬೆಳಗ್ಗೆ ಬಂಧನ ಮಾಡಿದರೆ ಬೇಗ ಎನುತ್ತಾರೆ. ತಡವಾದರೆ ಇಷ್ಟು ತಡವಾಗಿ ಬಂಧನವೇಕೆ ಎಂದು ಪ್ರಶ್ನಿಸುತ್ತಾರೆ ಎಂದು ತಿರುಗೇಟು ಕೊಟ್ಟರು.
ಯಾವಾಗ ಬಂಧನ ಮಾಡಬೇಕು ಎಂದು ಬಿಜೆಪಿಯವರನ್ನೇ ಕೇಳಬೇಕು. ಅವರಿಗೆ ಬರೆದು ಕೊಡಲು ಹೇಳಬೇಕು ಐಪಿಸಿ ಸೆಕ್ಷನ್ ಗಳನ್ನು ತಿದ್ದುಪಡಿ ಮಾಡಿ ಕೊಡೋಕೆ ಹೇಳಿ ಬಿಡಿ ಎಂದು ವ್ಯಂಗ್ಯವಾಡಿದರು.












Click it and Unblock the Notifications