ಎಸ್ಎಂ ಕೃಷ್ಣ: ರಾಜಕೀಯ ನಿವೃತ್ತಿಯತ್ತ ಭಾರವಾದ ನಡಿಗೆ
ಮಂಡ್ಯ, ಜೂನ್ 13: ಪ್ರೊ. ರಾಜೀವ್ ಗೌಡ ಅವರು ಪ್ರಿಲಿಮ್ಸ್ ನಲ್ಲಿ ಫೇಲಾಗಿ ಮೈನ್ಸ್ ನಲ್ಲಿ ಪಾಸಾಗಿ ರಾಜಸ್ಯಭೆಗೆ ಆಯ್ಕೆಯಾಗಿದ್ದೇ ಬಂತು ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯೊಬ್ಬರು ರಾಜಕೀಯ ನಿವೃತ್ತಿಯತ್ತ ಭಾರವಾದ ಹೆಜ್ಜೆ ಹಾಕತೊಡಗಿದ್ದಾರೆ. ಹೌದು, ಎಸ್ಸೆಂ ಕೃಷ್ಣ ಎಂಬ ವರ್ಚಸ್ವಿ/ಪ್ರಭಾವಿ ರಾಜಕಾರಣಿಗೆ ಮೊನ್ನೆ ರಾಜ್ಯಸಭೆಗೆ ಟಿಕೆಟ್ ಪ್ರಾಪ್ತಿಯಾಗದೇ ಇಂತಹ ಸ್ಥಿತಿಯೊಂದು ಏರ್ಪಾಡಾಗುವಂತಾಗಿದೆ.
ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಐಟಿ ಕ್ಷೇತ್ರದಲ್ಲಿ ಉನ್ನತಸ್ತರಕ್ಕೆ ಕೊಂಡೊಯ್ದ ಕೀರ್ತಿ ಹೊಂದಿರುವ ಎಸ್ಸೆಂ ಕೃಷ್ಣ ಅವರು ರಾಜಕೀಯ ಗಾಂಭೀರ್ಯ ಮತ್ತು ಮುತ್ಸದ್ಧಿತನಕ್ಕೆ ಹೆಸರಾದವರು. ಪಕ್ಷದ ಅಧ್ಯಕ್ಷ, ಸ್ಪೀಕರ್, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ವಿದೇಶಾಂಗ ಸಚಿವದಂತಹ ಆಯಕಟ್ಟಿನ ಸ್ಥಾನಗಳಲ್ಲಿ ಅಕ್ಷರಶಃ ತಮ್ಮ ಗತ್ತು ಗೈರತ್ತನ್ನು ಮೆರೆದವರು.
ಇಂತಿಪ್ಪ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರಿಗೆ ಈ ಬಿರುದುಬಾವಲಿಗಳ ಜತೆ ಜತೆಗೆ 82 ವರುಷಗಳೂ ಸಂದಿದೆ. ಬಹುಶಃ ಅವರ ರಾಜಕೀಯ ಅವನತಿಗೆ ಇದೇ ಕಾರಣವಾ? ಎಂದು ಅವರ ಅಪ್ಪಟ ಅಭಿಮಾನಿಗಳನ್ನು ಕೇಳಿದರೆ 'ಇರಲೂಬಹುದು' ಎಂಬ ಉತ್ತರ ಬಂದೀತು. ಏನೇ ಆಗಲಿ ವಿದೇಶಾಂಗ ಸಚಿವರಾಗಿದ್ದಾಗಲೇ ಎಸ್ಸೆಂ ಕೃಷ್ಣ ಅವರ ರಾಜಕೀಯ ಅವಸಾನ ಶುರುವಾಗಿತ್ತು.
ಮುಖ್ಯವಾಗಿ ಅವರಿಗೆ ವಯಸ್ಸು ಕಂಟಕವಾಗಿತ್ತು ಅನ್ನವವರಿದ್ದಾರೆ. 2011ರಲ್ಲಿ ವಿಶ್ವಸಂಸ್ಥೆಯಲ್ಲಿ ಬೈಚಾನ್ಸೋ ಅಥವಾ ಮತ್ತೊಂದೋ ಅಂತೂ ತಮ್ಮ ಭಾಷಣ ಓದುವ ಬದಲು ಪೋರ್ಚುಗಲ್ ವಿದೇಶಾಂಗ ಸಚಿವರ ಭಾಷಣ ಓದತೊಡಗಿದಾಗ ಜನ 'ಕೃಷ್ಣಾಗೆ ವಯಸ್ಸಾಯಿತು' ಎಂದು ಮಾತನಾಡಿಕೊಂಡರು.

ಹಾಗಾದರೆ ಇದೀಗ ಎಸ್ಸೆಂ ಕೃಷ್ಣ ಅವರು ರಾಜಕೀಯವಾಗಿ ಕೊನೆಯ ಘಟ್ಟ ಪ್ರವೇಶಿಸಿದ್ದಾರಾ? ಮುಂದೇನು, ಮುಂದೆ ಮತ್ಯಾವ ಹುದ್ದೆ ಅವರನ್ನು ಅರಸಿಬರಲಿದೆ? ಅಥವಾ ಇಷ್ಟೇನಾ? ಎಂಬ ಪ್ರಶ್ನೆಗಳು ಕಾಡತೊಡಗಿದೆ.
ಹಾಗಂತ ಎಸ್ಸೆಂ ಕೃಷ್ಣ ಅವರಿಗೆ ಈ ಸೌಭಾಗ್ಯಗಳೆಲ್ಲಾ ಯಾರದೋ ಕೃಪಾಶೀರ್ವಾದದಿಂದ ಬಂದಂತಹುವುಗಳಲ್ಲ. ವಂಶಪಾರಂಪರ್ಯವಂತೂ ಅಲ್ಲ. ಅವರ ಶ್ರಮ/ ಶ್ರದ್ಧೆ ಅವರನ್ನು ಪಕ್ಷದಲ್ಲಿ ಉನ್ನತ ಹುದ್ದೆಗಳತ್ತ ಕೊಂಡೊಯ್ದಿದೆ.
ಆದರೆ ಪಕ್ಷದಲ್ಲಿ ಮತ್ತೊಂದು ವರ್ಗವೂ ಇದೆ. ಅವರ ಪ್ರಕಾರ ಎಸ್ಸೆಂ ಕೃಷ್ಣ ಅವರು ತಮ್ಮ 5 ದಶಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಎಲ್ಲವನ್ನೂ ಅನುಭವಿಸಿದ್ದಾರೆ. ಇನ್ನೂ ಏಕೆ ಅವರಿಗೆ ಹುದ್ದೆ/ಸ್ಥಾನಗಳ ಹಪಾಹಪಿ. ಇನ್ನಾದರೂ ನವಯುವಕರಿಗೆ ಮಾರ್ಗದರ್ಶಕರಾಗಿರಲಿ ಎಂದು ಹೇಳುವವರೂ ಇದ್ದಾರೆ.
ಏನೇ ಆಗಲಿ ಸದ್ಯದ ಕರ್ನಾಟಕ ರಾಜಕಾರಣದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಅವರ ಸ್ಥಾನ ತುಂಬಬಲ್ಲವರು ಯಾರೂ ಕಾಣುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಪಕ್ಷದಲ್ಲಿ ಮತ್ತಷ್ಟು ಖಾಲಿತನ ಸೃಷ್ಟಿಯಾಗುವುದು ಖಂಡಿತ.












Click it and Unblock the Notifications