ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರ ಹೊಸ ತಂತ್ರ
ಬೆಂಗಳೂರು, ಮೇ 29: ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಬಹುವಾಗಿ ಕಾಡುತ್ತಿದ್ದು, ಸರ್ಕಾರವನ್ನು ಉರಳಿಸಿಕೊಳ್ಳುವ ರಣತಂತ್ರ ಹೆಣೆಯಲು ಮೈತ್ರಿಯ ನಾಯಕರು ಸರಣಿ ಸಭೆಗಳನ್ನು ನಡೆಸಿ, ಹೊಸ ತಂತ್ರಗಳನ್ನು ಹೆಣೆದಿದ್ದಾರೆ.
ನಿನ್ನೆ ಮೊದಲಿಗೆ ದೇವೇಗೌಡರನ್ನು ಭೇಟಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಜೆ ವೇಳೆಗೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಹು ಸಮಯ ರಾಜ್ಯ ರಾಜಕಾರಣದ ಕುರಿತು ಮಾತುಕತೆ ನಡೆಸಿದರು.
ಮೈತ್ರಿ ಸರಕಾರ ಉಳಿಸಿಕೊಳ್ಳುವ ಕಸರತ್ತು, ಸರಣಿ ಸಭೆಗಳು!
ನಿನ್ನೆ ಸಂಜೆಯೇ ಹೈಕಮಾಂಡ್ನಿಂದ ಗುಲಾಂ ನಬಿ ಆಜಾದ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸಿದ್ದು, ಬಿರುಕು ಬಿಟ್ಟಿರುವ ಮೈತ್ರಿಗೆ ತೇಪೆ ಹಾಕುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ರಾಜ್ಯ ಬಿಜೆಪಿಯು ಆಪರೇಷನ್ ಕಮಲಕ್ಕೆ ಬಹು ನಾಜೂಕಾಗಿ ಕೈಹಾಕಿದ್ದು, ಯಶಸ್ಸು ಕಾಣುವ ಮುನ್ಸೂಚನೆ ಇದೆ ಎನ್ನಲಾಗಿದೆ. ಹಾಗಾಗಿಯೇ ಮೈತ್ರಿ ನಾಯಕರು ತುರ್ತಾಗಿ ಹೈಕಮಾಂಡ್ ನಾಯಕರಿಗೆ ಬುಲಾವ್ ನೀಡಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಹಲವು ಮುಖಂಡರಿಂದ ಇಂದು ಸಭೆ
ಇಂದು ಬೆಳಿಗ್ಗೆ ಸಹ ಸಿದ್ದರಾಮಯ್ಯ, ಕುಮಾರಸ್ವಾಮಿ, ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಪರಮೇಶ್ವರ್ ಅವರುಗಳು ಒಂದೆಡೆ ಸೇರಿ ಬಹುಮುಖ್ಯವಾದ ಸಭೆಯನ್ನು ನಡೆಸಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಂಪುಟ ವಿಸ್ತರಣೆಯೋ, ಪುನಾರಚನೆಯೋ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ನಾಳೆ ರಾಹುಲ್ ಭೇಟಿ ಆಗಲಿರುವ ಎಚ್ಡಿಕೆ
ನಾಳೆ ಬೆಳಿಗ್ಗೆ 11:30 ಸುಮಾರಿಗೆ ದೆಹಲಿಗೆ ತೆರಳಲಿರುವ ಕುಮಾರಸ್ವಾಮಿ ಅವರು ಅಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಲೋಕಸಭೆ ಚುನಾವಣೆ ರಾಜ್ಯ ಫಲಿತಾಂಶ, ರಾಜ್ಯ ರಾಜಕಾರಣ, ಆಪರೇಷನ್ ಕಮಲ ಕುರಿತು ವಿವರಣೆ ನೀಡಲಿದ್ದಾರೆ.
ಸರ್ಕಾರ ಉರುಳಲು ಬಿಡುವ ಮಾತಿಲ್ಲ
ಯಾವುದೇ ಸಂದರ್ಭದಲ್ಲೂ ಸರ್ಕಾರವನ್ನು ಉರುಳಲು ಬಿಡಬಾರದೆಂದು ಹೈಕಮಾಂಡ್ ಆದೇಶ ನೀಡಿರುವ ಕಾರಣ ಕಾಂಗ್ರೆಸ್-ಜೆಡಿಎಸ್ ನಾಯಕರು ಬಹು ಶಕ್ತಿಮೀರಿ ಸರ್ಕಾರದ ಉಳಿವಿಗಾಗಿ ಪ್ರಯತ್ನ ಪಡುತ್ತಿದ್ದಾರೆ.
ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ ಸೊಗಡು ಶಿವಣ್ಣ
ಸಂಪುಟ ವಿಸ್ತರಣೆಯ ದಾಳ
ಸಂಪುಟ ವಿಸ್ತರಣೆ ಮಾಡಿ, ಅತೃಪ್ತರನ್ನು ಒಲಿಸಿಕೊಳ್ಳುವ ಯೋಜನೆಯೊಂದನ್ನು ಮೈತ್ರಿ ನಾಯಕರು ಮಾಡಿದ್ದು, ಮಹೇಶ್ ಕುಮಟಳ್ಳಿ, ಸುಧಾಕರ್, ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಜೆಡಿಎಸ್ನಲ್ಲೂ ಅತೃಪ್ತ ದನಿಗಳು ಕೇಳುತ್ತಿದ್ದ ಅವನ್ನು ಹತ್ತಿಕ್ಕಲೂ ಸಹ ರಣತಂತ್ರ ಹೆಣೆಯಲಾಗುತ್ತಿದೆ.
ಆಪರೇಷನ್ ಕಮಲ ನಡೆಯುತ್ತಿದೆ?
ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಮುಂದಾಳುವನ್ನಾಗಿ ಮಾಡಿ ಬಿಜೆಪಿಯು ಆಪರೇಷನ್ ಕಮಲ ನಡೆಸುತ್ತಿದೆ ಎನ್ನಲಾಗಿದ್ದು, ರಮೇಶ್ ಅವರು ಈಗಾಗಲೇ ಸುಧಾಕರ್, ಪಕ್ಷೇತರ ಶಾಸಕರಾದ ಶಂಕರ್, ಕಾಂಗ್ರೆಸ್ನ ಮಹೇಶ್ ಕುಮಟಳ್ಳಿ ಅವರನ್ನು ಸಂಪರ್ಕಕ್ಕೆ ತೆಗೆದುಕೊಂಡು ಮನವೊಲಿಸಿದ್ದಾರೆ ಎನ್ನಲಾಗಿದೆ.