ಭರವಸೆಯ ಮಹಾಪೂರ ಹರಿಸಿದ ಯಡಿಯೂರಪ್ಪ
ಬೆಂಗಳೂರು, ಆಗಸ್ಟ್ 15: ಮಾಣಿಕ್ ಷಾ ಪೆರೆಡ್ ಮೈದಾನದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಸಿಎಂ ಯಡಿಯೂರಪ್ಪ ಅವರು ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣದಲ್ಲಿ ರಾಜ್ಯದ ಗರಿಮೆಯನ್ನು ಮತ್ತೊಮ್ಮೆ ನೆನಪಿಸಿಕೊಟ್ಟ ಯಡಿಯೂರಪ್ಪ ಅವರು, ರಾಜ್ಯದ ಜನರಿಗೆ ಭರವಸೆಯ ಮಹಾಪೂರವನ್ನೇ ಹರಿಸಿದರು. ಮೋದಿ ಅವರ ಹೆಸರನ್ನು ಹಲವು ಭಾರಿ ಉಲ್ಲೇಖಿಸಿ ಗುಣಗಾನ ಮಾಡಿದ ಯಡಿಯೂರಪ್ಪ, ಕೇಂದ್ರ ರಾಜ್ಯ ಸರ್ಕಾರ ಸೇರಿ ರಾಜ್ಯವನ್ನು ನಂ 1 ಅನ್ನಾಗಿಸಲಿದ್ದೇವೆ ಎಂದರು.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ ಅವರು ಸರ್ಕಾರವು ಪ್ರವಾಹ ಪೀಡಿತರ ರಕ್ಷಣೆ, ಅವರ ಮುಂದಿನ ಜೀವನ, ಆಗಿರುವ ಹಾನಿಗಳನ್ನು ಸರಿ ಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಹೇಳಿದರು.
ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ: ಚಿತ್ರಗಳು
ರಾಜ್ಯದ ಉದ್ಯೋಗಗಳು ರಾಜ್ಯದವರಿಗೆ ದೊರೆಯಬೇಕು ಎಂಬ ಬಗ್ಗೆ ಎದ್ದಿರುವ ಕೂಗನ್ನು ಸರ್ಕಾರ ಗುರುತಿಸಿದೆ ಎಂದ ಯಡಿಯೂರಪ್ಪ ಅವರು, 'ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ದೊರೆಯಬೇಕು ಎಂಬುದು ಸರ್ಕಾರದ ನಿಲವು ಸಹ ಆಗಿದೆ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಹೊರಗಿನವರಿಗೂ ಅವಕಾಶ ಮಾಡಿಕೊಡಲು ನಾವು ಸಿದ್ಧರಿದ್ದೇವೆ' ಎಂದು ಹೇಳಿದರು.

'ರೈತರ ಆದಾಯ ದ್ವಿಗುಣಗೊಳಿಸಲು ಮೋದಿಗೆ ಸಹಾಯ'
ರೈತರನ್ನು ವಿಶೇಷವಾಗಿ ನೆನೆದ ಯಡಿಯೂರಪ್ಪ, ರೈತರ ಆದಾಯ ದ್ವಿಗುಣಗೊಳಿಸುವ ಮೋದಿ ಅವರ ಕನಸಿಗೆ ರಾಜ್ಯವು ಬೆಂಬಲ ನೀಡಲಿದ್ದು, ಅದಕ್ಕೆಂದೆ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯಸರ್ಕಾರದಿಂದ ಹೆಚ್ಚುವರಿ ಅನುದಾನ ನೀಡಲು ಸಿಎಂ ಆದ ಮೊದಲ ದಿನವೇ ನಿರ್ಧರಿಸಿದೆ ಎಂದು ಹೇಳಿದರು.

ರೈತರ ಸಹಾಯಕ್ಕೆ ಸರ್ಕಾರ ಸದಾ ಸಿದ್ಧ: ಯಡಿಯೂರಪ್ಪ
ರೈತರು ಬೆಳೆದ ಹಸಿರು ಮೇವನ್ನು ಹೆಚ್ಚಿನ ಹಣ ನೀಡಿ ಸರ್ಕಾರ ಖರೀದಿಸಲಿದೆ. ರೈತರಿಗೆ ಸೂಕ್ತ ಸಮಯದಲ್ಲಿ ಬೀಜ, ಗೊಬ್ಬರ ತಲುಪಿಸಲು ಸರ್ಕಾರ ಬದ್ಧವಾಗಿದೆ. ಬೆಳೆ ಮಾರಾಟ ಮಾಡಲು ಆನ್ಲೈನ್ ವ್ಯವಸ್ಥೆ ಇನ್ನಷ್ಟು ಗಟ್ಟಿ ಮಾಡಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು, ಗೋಧಾಮು ಸೌಲಭ್ಯ ಮತ್ತು ಬೆಳೆ ಕುಸಿತದ ಸಮಯದಲ್ಲಿ ಸರ್ಕಾರವು ಬೆಂಬಲಕ್ಕೆ ಬರುವುದು ಎಂದು ಯಡಿಯೂರಪ್ಪ ಅವರು ರೈತರಿಗೆ ಭರವಸೆ ನೀಡಿದರು.

ತಾಲ್ಲೂಕು, ಜಿಲ್ಲಾ ಮಟ್ಟದ ಆಡಳಿತಕ್ಕೆ ಬಲ: ಯಡಿಯೂರಪ್ಪ
ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಆಡಳಿತಕ್ಕೆ ಚುರುಕು ನೀಡಿ, ಜನರು ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿಗೆ ಬಾರದೆ, ತಾಲ್ಲೂಕು, ಜಿಲ್ಲೆಗಳಲಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

'ನಗರ ಮತ್ತು ಗ್ರಾಮದ ಮೂಲಭೂತ ಸೌಕರ್ಯ ಅಭಿವೃದ್ಧಿ'
ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ಸಹ ಹೆಚ್ಚಾಗಿದ್ದು, ಹೀಗಾಗಿ ನಗರದಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಿ ವ್ಯವಸ್ಥಿತವಾಗಿ ನಗರ ಬೆಳವಣಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಯಡಿಯೂರಪ್ಪ ಹೇಳಿದರು.

'ಕೈಗಾರಿಕಾ ಅಭಿವೃದ್ಧಿಯಲ್ಲಿ ರಾಜ್ಯ ನಂಬರ್ ಒನ್ ಆಗಿದೆ'
ಕೈಗಾರಿಕೆ ಅಭಿವೃದ್ಧಿಯಲ್ಲಿ ರಾಜ್ಯ ನಂ 1 ಸ್ಥಾನದಲ್ಲಿದ್ದು, ಇದನ್ನು ಉತ್ತಮ ಪಡಿಸಲು ಸರ್ಕಾರ ಬದ್ಧವಾಗಿದೆ. ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸುವುದಲ್ಲದೆ. ಕೈಗಾರಿಕೆಗೆ ಬೇಕಾದ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿಯೇ ಹೊಂದಾಣಿಕೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

'ಅಧಿಕಾರ ವಹಿಸಿ ಮೂರು ವಾರದಲ್ಲಿಯೇ ನೆರೆ ಬಂದಿದೆ'
ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಗುರಿ ಸರ್ಕಾರಕ್ಕೆ ಇದ್ದು, ಪೋಷಕರ ಸಹಕಾರವಿಲ್ಲದೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಲಾರವು ಎಂದು ಯಡಿಯೂರಪ್ಪ ಹೇಳಿದರು. 'ನಾನು ಅಧಿಕಾರ ವಹಿಸಿಕೊಂಡು ಮೂರು ವಾರವಷ್ಟೆ ಆಗಿದೆ, ಬರ ಹಾಗೂ ನೆರೆಯಿಂದ ರಾಜ್ಯ ತತ್ತರಿಸಿದೆ, ಇಂತಹಾ ಸಂಕಷ್ಟದ ಸಮಯದಲ್ಲಿ ರಾಜ್ಯದ ಜನರು ಒಂದಾಗಿ ನೆರವು ನೀಡಿದ್ದಾರೆ' ಎಂದು ಯಡಿಯೂರಪ್ಪ ಜನರ ಔದಾರ್ಯ ಸ್ಮರಿಸಿದರು.

'ಮೋದಿ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು'
ಭಾಷಣದ ಅಂತ್ಯದಲ್ಲಿ ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಯಡಿಯೂರಪ್ಪ ಅವರು, 'ನೆರೆಯ ರಾಷ್ಟ್ರದ ಕುಮ್ಮಕ್ಕಿನಿಂದ ಭಾರತದ ಧ್ವಜ ಹಾರದಂತಹಾ ಸ್ಥಿತಿ ಜಮ್ಮು ಕಾಶ್ಮೀರದಲ್ಲಿ ಇತ್ತು. ಅಲ್ಲಿನ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿತ್ತು, ಅಲ್ಲಿನ ಮೂಲ ನಿವಾಸಿಗಳನ್ನು ಹೊರಗೆ ಹಾಕಲಾಗಿತ್ತು. ಆದರೆ ಈಗ ಮೋದಿ ಅವರ ದಿಟ್ಟ ನಿರ್ಧಾರದಿಂದ ಜಮ್ಮು ಕಾಶ್ಮೀರ ಮುಖ್ಯವಾಹಿನಿಗೆ ಬಂದಿದೆ. ಮೋದಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದಿಡುವ ನಿರ್ಧಾರ ಇದಾಗಿದೆ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications