ಕರ್ನಾಟಕದಲ್ಲಿ ಇನ್ನೂ 4.2 ಕೋಟಿ ವಯಸ್ಕರಿಗೆ ಸಂಪೂರ್ಣ ಲಸಿಕೆ ನೀಡಬೇಕಿದೆ
ಬೆಂಗಳೂರು, ಆಗಸ್ಟ್ 16: ರಾಜ್ಯದಲ್ಲಿ ಇದುವರೆಗೂ 45 ಹಾಗೂ ಮೇಲ್ಪಟ್ಟ ವಯಸ್ಸಿನ ಕೇವಲ 33% ಮಂದಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದು, 18 ರಿಂದ 44 ವಯಸ್ಸಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆ ತಡವಾಗಿ ಆರಂಭವಾದ್ದರಿಂದ ಇಲ್ಲಿಯವರೆಗೆ ಕೇವಲ ಶೇ 3ರಷ್ಟು ಜನರು ಮಾತ್ರ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿದೆ.
ರಾಜ್ಯದಲ್ಲಿ 4.2 ಕೋಟಿಗೂ ಅಧಿಕ ವಯಸ್ಕರಿಗೆ ಇನ್ನೂ ಸಂಪೂರ್ಣ ಲಸಿಕೆ ನೀಡಲಾಗಿಲ್ಲ. ರಾಜ್ಯದಲ್ಲಿ ಕಳೆದ ಹದಿನಾಲ್ಕು ದಿನಗಳಲ್ಲಿ ಪ್ರತಿದಿನ ಸರಾಸರಿ ಮೂರು ಲಕ್ಷ ಕೊರೊನಾ ಲಸಿಕೆ ಡೋಸ್ಗಳನ್ನು ನೀಡುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಲಸಿಕೆ ನೀಡಿ ಪೂರೈಸಲು ಕರ್ನಾಟಕಕ್ಕೆ ಸುಮಾರು 141 ದಿನಗಳು ಹಿಡಿಯಬಹುದು ಎಂದು ಅಂದಾಜು ಮಾಡಲಾಗಿದೆ.

ಪ್ರಸ್ತುತ ಲಸಿಕೆಗಳ ಸೀಮಿತ ಪೂರೈಕೆಯಿಂದಾಗಿ ಲಸಿಕಾ ಕಾರ್ಯಕ್ರಮ ವೇಳಾಪಟ್ಟಿಯಂತೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಿರುವ ಬೆಂಗಳೂರು ನಗರ ಪ್ರದೇಶದಲ್ಲಿ ಕೂಡ ಕೆಲವು ವಿಧಾನಸಭಾ ಕ್ಷೇತ್ರಗಳು ಮೊದಲ ಡೋಸ್ ಲಸಿಕೆ ನೀಡುವಲ್ಲಿ ಕೂಡ ಹಿಂದೆ ಬಿದ್ದಿವೆ ಎನ್ನಲಾಗಿದೆ.
ಲಸಿಕಾ ಪ್ರಕ್ರಿಯೆಯಲ್ಲಿ ಉತ್ತರ ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರ ಕೆಳಗೆ ಉಳಿದಿದೆ.
ಆಗಸ್ಟ್ 10ರ ಹೊತ್ತಿಗೆ, 23.09%, ಅಂದರೆ 3,21,720 ಉದ್ದೇಶಿತ ಅರ್ಹ ಅಭ್ಯರ್ಥಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆಗಳ ಕೊರತೆಯೇ ಹಿಂದುಳಿಯಲು ಪ್ರಮುಖ ಕಾರಣ ಎಂದು ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಇದಕ್ಕೆ ತದ್ವಿರುದ್ಧ ಎಂಬಂತೆ ಶಿವಾಜಿನಗರದಲ್ಲಿ 99.8% ಪ್ರತಿಶತದಷ್ಟು ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಬಿಬಿಎಂಪಿ ದತ್ತಾಂಶ ತಿಳಿಸಿದೆ. "ಲಸಿಕೆ ನಿಯೋಜನೆ ಹಾಗೂ ಲಸಿಕೆ ಪಡೆಯಲು ಹಿಂಜರಿತದ ನಡುವೆಯೂ ತಳಮಟ್ಟದ ಲಸಿಕಾ ಅಭಿಯಾನದ ಮೂಲಕ ಈ ಸಂಖ್ಯೆಯನ್ನು ಸಾಧಿಸಲಾಗಿದೆ. ಸರ್ಕಾರದಿಂದ ಲಸಿಕೆ ಪೂರೈಕೆ ಕೊರತೆಯನ್ನು ನೀಗಿಸುವಲ್ಲಿ ಖಾಸಗಿ ವಲಯ ಹಾಗೂ ಸಿಎಸ್ಆರ್ ಮೂಲಕ ಲಸಿಕೆಗಳು ಕ್ಷೇತ್ರಕ್ಕೆ ದೊರೆತಿದ್ದು ನೆರವಾಗಿದೆ" ಎಂದು ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
"ಸರ್ಕಾರದಿಂದ ದಿನಕ್ಕೆ ಕೇವಲ 1 ಸಾವಿರದಿಂದ 2 ಸಾವಿರ ಲಸಿಕೆ ಡೋಸ್ಗಳು ಲಭ್ಯವಾಗುತ್ತಿವೆ. ಖಾಸಗಿ ವಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಗಳು ದೊರೆಯುತ್ತಿವೆ. ಎರಡನೇ ಡೋಸ್ ಲಸಿಕೆಯನ್ನೂ ನೀಡಲಾಗುತ್ತಿದ್ದು, ಈಗಾಗಲೇ 24% ಮಂದಿಗೆ ಲಸಿಕೆ ನೀಡಲಾಗಿದೆ" ಎಂದು ಅವರು ವಿವರಿಸಿದ್ದಾರೆ.
ನಗರದಲ್ಲಿ ಇದುವರೆಗೂ 45 ಮೇಲ್ಪಟ್ಟ ಅರ್ಧದಷ್ಟು ಜನರಿಗೆ ಮಾತ್ರ ಸಂಪೂರ್ಣ ಎರಡು ಡೋಸ್ ಲಸಿಕೆಯನ್ನು ನೀಡಲಾಗಿದೆ.
ಬಿಬಿಎಂಪಿ ಮಿತಿಯಲ್ಲಿ, 45 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ 21,90,307 ಮಂದಿಯಲ್ಲಿ 12,89,113 ಜನಕ್ಕೆ ಇನ್ನೂ ಎರಡನೇ ಡೋಸ್ ಲಸಿಕೆ ನೀಡಬೇಕಾಗಿದೆ. ಇದರಲ್ಲಿ 11,48,217 ಮಂದಿಗೆ ಈಗಾಗಲೇ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಸ್ಥಿತಿಗತಿ ಭಾನುವಾರ ಸ್ವಲ್ಪ ಸುಧಾರಿಸಿದಂತಿದೆ. ಶನಿವಾರ 1632 ಪ್ರಕರಣಗಳನ್ನು ದಾಖಲಿಸಿದ ರಾಜ್ಯದಲ್ಲಿ ಭಾನುವಾರ 1431 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.93ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.46ರಷ್ಟಿದೆ.
ಭಾನುವಾರ ರಾಜ್ಯದಲ್ಲಿ 1431 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1611 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 21 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36979 ಮಂದಿ ಸಾವನ್ನಪ್ಪಿದ್ದಾರೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2929464ಕ್ಕೆ ಏರಿಕೆಯಾಗಿದೆ. ಒಟ್ಟು 2869962 ಸೋಂಕಿತರು ಗುಣಮುಖರಾಗಿದ್ದು. 22497 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಲಸಿಕಾ ಕಾರ್ಯಕ್ರಮದ ವಿವರ:
ರಾಜ್ಯದಲ್ಲಿ ಈವರೆಗೂ 7,62,363 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 5,63,350 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,34,274 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 4,06,040 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,26,96,702 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 58,71,95 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 2,67,51,246 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 78,69,486 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.












Click it and Unblock the Notifications