ಇಂದಿರಾ ಕ್ಯಾಂಟೀನ್ ಯೋಜನೆ ವಿಸ್ತರಣೆ, ಇತರ ಸಂಪುಟದ ನಿರ್ಧಾರಗಳು
ಬೆಂಗಳೂರು, ಜನವರಿ 31 : ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ವಿಸ್ತರಣೆಯಾಗಲಿದೆ. 173ತಾಲೂಕುಗಳಲ್ಲಿ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು.
'ತಾಲೂಕು ಮತ್ತು 173ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಪರಿಷ್ಕೃತ ನಿಯಮಾವಳಿಗಳಿಗೆ ಅನುಮೋದನೆಯನ್ನು ನೀಡಲಾಗಿದೆ. 171 ಅಡುಗೆ ಕೋಣೆ ರಹಿತ ಕ್ಯಾಂಟೀನ್ ನಿರ್ಮಿಸಲಾಗುತ್ತದೆ' ಎಂದು ವಿವರಿಸಿದರು.

ಸಭೆಯ ವಿವರಗಳು
* ಬೆಂಗಳೂರಿನ 345 ಟ್ರಾಫಿಕ್ ಸಿಗ್ನಲ್ ಉನ್ನತೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ.
ಹೊಸ 100 ಸಿಗ್ನಲ್ ಗಳಿಗೆ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತದೆ.
* ಲೋಕಾಯುಕ್ತ ವರದಿಗಳನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲು ಅನುಮೋದನೆ ಸಿಕ್ಕಿದೆ. ಎಸ್ಐಟಿಗೆ ನೀಡಿರುವ ಗಣಿಗಾರಿಕೆ ಅಕ್ರಮಗಳ ತನಿಖೆಗೆ ನೀಡಿದ್ದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
* ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗೆ ರಚನೆಗೊಂಡ ಎಸ್ಐಟಿ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ. ಜನವರಿ 28ಕ್ಕೆ ತನಿಖಾ ಅವಧಿ ಮುಕ್ತಾಯಗೊಂಡಿತ್ತು.
* ಪ್ರಾಥಮಿಕ ಪ್ರೌಢ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ನೀತಿ ರಚನೆ ಮಾಡಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲು ಒಪ್ಪಿಗೆ ಸಿಕ್ಕಿದೆ.
1.15 ಕೋಟಿ ಶಾಲಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲಾ ಶಿಕ್ಷಣ ನೀತಿ ರೂಪಿಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚನೆಯಾಗಲಿದೆ.
* ಬೆಂಗಳೂರು ನಗರದಲ್ಲಿ ಬಿ-ಟ್ರಾಫಿಕ್ ಯೋಜನೆಯಡಿ 85.34 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಿಂಕ್ರೋನೈಸ್ಡ್ ಪಾದಚಾರಿ ಲೈಟ್ ಗಳು ಮತ್ತು ರಸ್ತೆ ಪರಿಕರಗಳ ಅಳವಡಿಸುವಿಕೆಗೆ ಒಪ್ಪಿಗೆ ನೀಡಲಾಗಿದೆ.
* ಎಸ್ಎಸ್ಎಲ್ಸಿ ಮತ್ತು ಪಿಯೂಸಿ ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆ"ಪ್ರಗತಿ" ಯೋಜನೆಯನ್ನು ಜಾರಿಗೊಳಿಸಲು ಒಪ್ಪಿಗೆ.
* 1745 ಕೋಟಿ ಅಂದಾಜು ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ಹಂತವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.












Click it and Unblock the Notifications