ಗುರುವಾರದ ಸಂಪುಟ ಸಭೆಯ ನಿರ್ಣಯಗಳು
ಬೆಂಗಳೂರು, ಡಿ. 19 : ಗುಲ್ಬರ್ಗಾದಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯುವುದು, ಗದಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಭವನ ಸ್ಥಾಪನೆಗೆ 15 ಕೋಟಿ ಅನುದಾನ, ಕೋಟ್ಯಾಂತರ ರೂ. ಅಕ್ರಮ ಎಸಗಿದ ತಪಿತಸ್ಥ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಗುರುವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಸಚಿವ ಸಂಪುಟ ಸಭೆಯ ವಿವರಗಳನ್ನು ನೀಡಿದರು. ಗುಲ್ಬರ್ಗಾದಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.[ಹಿಂದಿನ ಸಂಪುಟ ಸಭೆಯ ನಿರ್ಣಯಗಳು]
ಕರ್ನಾಟಕ ವಿದ್ಯುತ್ ನಿಗಮ ಅಡಿಯಲ್ಲಿ ಸ್ಥಾಪಿತವಾಗಿದ್ದ ಕರ್ನಾಟಕ ಕಲ್ಲಿದ್ದಲು ಗಣಿ ಇಲಾಖೆಯನ್ನು ರದ್ದು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದಾವಣಗೆರೆ ಮತ್ತು ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ 5 ಕೋಟಿ ರೂ. ಅನುದಾನ ನೀಡಲು ತಿರ್ಮಾನಿಸಲಾಗಿದೆ ಎಂದು ಜಯಚಂದ್ರ ಮಾಹಿತಿ ನೀಡಿದರು. ಸಚಿವ ಸಂಪುಟ ಸಭೆಯ ನಿರ್ಣಯಗಳು
ಇಬ್ಬರು ಸರ್ಕಾರಿ ಅಧಿಕಾರಿಗಳ ಅಮಾನತು
ಕೋಟ್ಯಾಂತರ ರೂ. ಅಕ್ರಮ ಎಸಗಿದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅಕ್ರಮ ಭೂಮಿ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದ ಶಿರಸಿ ಎಪಿಎಂಸಿ ಸಹಾಯಕ ನಿರ್ದೇಶಕಿ ಸುಧಾಭಾಯಿ ಹಿರೇಮಠ್ ಹಾಗೂ ಕುಡಿಯುವ ನೀರಿನ ಹಣ ದುರ್ಬಳಕೆ ಮಾಡಿಕೊಂಡ ರಾಯಚೂರು ಜಿಪಂ ಸಹಾಯಕ ಎಂಜಿನಿಯರ್ ಬಿ.ಪಿ.ಮಲ್ಲಣ್ಣ ಅವರನ್ನು ಸೇವೆಯಿಂದ ವಜಾಗೊಳಿಸಲು ತೀರ್ಮಾನಿಸಲಾಗಿದೆ.
ಸಹಾಯಧನ ಏರಿಕೆ
ಪಶು ಸಂಗೋಪನೆ ಇಲಾಖೆಯ ಜಾನುವಾರು ಅಭಿವೃದ್ಧಿ ಅಧಿಕಾರಿಗಳಿಗೆ ನೀಡುತ್ತಿದ್ದ 400 ರೂ. ಸಹಾಯಧನವನ್ನು 500 ರೂ.ಗೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಕೌಶಲ್ಯ ತರಬೇತಿ ಶಿಬಿರ
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಲು ಸರ್.ಎಂ.ವಿಶ್ವೇಶ್ವರಯ್ಯ ಅಕಾಡೆಮಿ ಸ್ಥಾಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಲಭ್ಯವಿದ್ದು, ಇದರಲ್ಲಿ ಶೇ.20 ರಷ್ಟು ಬಳಸಲು ಅನುಮತಿ ಇದೆ ಎಂದು ಜಯಚಂದ್ರ ಮಾಹಿತಿ ನೀಡಿದರು.
ಕೊಳಗೇರಿ ಮುಕ್ತ ಯೋಜನೆಗೆ ಒಪ್ಪಿಗೆ
ಕೊಳಗೇರಿ ಮುಕ್ತ ಯೋಜನೆಗೆ ಅನುದಾನ ಬಳಕೆ ಮಾಡಲು ಸಂಪುಟ ಸಭೆ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ 10, 752 ಕೋಟಿ ರೂ.ಗಳನ್ನು ನೀಡಲಿದೆ. ಮೂಲ ಸೌಲಭ್ಯಕ್ಕೆ 1480 ಕೋಟಿ ರೂ., ವಸತಿಗೆ 750 ಕೋಟಿ ರೂ., ಸಾಮಾಜಿಕ ಮೂಲಸೌಲಭ್ಯಕ್ಕೆ 120 ಕೋಟಿ ರೂ. ನೀಡಲು ತಿರ್ಮಾನಿಸಲಾಗಿದೆ. ಚಿತ್ರದುರ್ಗ, ಭದ್ರಾವತಿ, ಹಾಸನ, ಮಡಿಕೇರಿ, ಬಾಗಲಕೋಟೆ, ರಾಯಚೂರು, ರಾಮನಗರ, ಶಿರಾ ಸೇರಿದಂತೆ 161 ನಗರ, ಪಟ್ಟಣ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ಇಲಾಖಾ ಕಾರ್ಯದರ್ಶಿಗಳಿಗೆ ನೋಟಿಸ್
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶೇ 50 ಕ್ಕಿಂತ ಕಡಿಮೆ ಕಡತ ವಿಲೇವಾರಿ ಮಾಡಿರುವ ಇಲಾಖಾ ಕಾರ್ಯದರ್ಶಿಗೆ ನೋಟಿಸ್ ಕೊಡಲು ತೀರ್ಮಾನಿಸಲಾಗಿದೆ. ಕಡತ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿ ಆಯಾ ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಜಯಚಂದ್ರ ಹೇಳಿದ್ದಾರೆ.
ಸಿಎಂ ಹೆಗಲಿಗೆ ಜವಾಬ್ದಾರಿ
ವಿಧಾನಸಭೆಗೆ ಆಂಗ್ಲೋ ಇಂಡಿಯನ್ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗೆ ನೀಡಿದೆ.
1000 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು
ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿರುವಂತೆ 1000 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಸ್ಥಾಪಿಸಲು 179 ಕೋಟಿ ರೂಪಾಯಿ ವೆಚ್ಚ ಮಾಡುವುದಕ್ಕೆ ಸಚಿವ ಸಂಪುಟ ಅನುಮತಿ ನೀಡಿದೆ. ಒಂದೊಂದು ಘಟಕಕ್ಕೆ ಸುಮಾರು 17 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲು ತೀರ್ಮಾನಿಸಲಾಗಿದೆ.
ವಿಮಾನ ನಿಲ್ದಾಣದ ಕನಸು ದೂರ
ಬಿಜಾಪುರ ವಿಮಾನನಿಲ್ದಾಣದ ನಿರ್ಮಾಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಮೆ.ಮಾರ್ಗ್ ಸಂಸ್ಥೆಯೊಂದಿಗಿನ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ. ಇದಕ್ಕೆ 2.5 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ನೀಡಿರುವುದನ್ನೂ ವಾಪಸ್ ಪಡೆಯಲು ಸಂಪುಟ ತೀರ್ಮಾನಿಸಿದೆ.