ಸಂಪುಟ ರಚನೆ ಒಪ್ಪಂದ ಅಂತಿಮ: ಜೆಡಿಎಸ್ ಬಿಗಿಪಟ್ಟಿಗೆ ಮಣಿದ ಕಾಂಗ್ರೆಸ್
ಬೆಂಗಳೂರು, ಮೇ 31: ಸಂಪುಟ ರಚನೆ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುತೇಕ ಸಹಮತಕ್ಕೆ ಬಂದಿದ್ದು, ಅಂತಿಮ ಪಟ್ಟಿ ಸಿದ್ಧವಾಗಿದೆ.
ಜೆಡಿಎಸ್ ಹಣಕಾಸು ಖಾತೆಯನ್ನು ತನ್ನಲ್ಲಿ ಇರಿಸಿಕೊಳ್ಳಲಿದೆ. ಕಾಂಗ್ರೆಸ್ ಗೃಹಖಾತೆಯನ್ನು ಪಡೆದುಕೊಳ್ಳಲಿದೆ ಎಂದು ಮೂಲಗಳು 'ಒನ್ ಇಂಡಿಯಾ'ಕ್ಕೆ ತಿಳಿಸಿವೆ.
ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಅಸಮಾಧಾನ?
ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ನೂತನ ಸಚಿವ ಸಂಪುಟವು ವಾರಾಂತ್ಯದ ವೇಳೆಗೆ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. ಒಪ್ಪಂದ ಪ್ರಕಾರ ಕಾಂಗ್ರೆಸ್ ಭಾರಿ ಕೈಗಾರಿಕೆ, ಐಟಿ/ಬಿಟಿ, ಶಿಕ್ಷಣ ಮತ್ತು ಪ್ರವಾಸೋದ್ಯಮಗಳನ್ನು ತನ್ನಲ್ಲಿ ಉಳಿಸಿಕೊಳ್ಳಲಿದೆ.
ಇನ್ನೊಂದೆಡೆ ಜೆಡಿಎಸ್ ಲೋಕೋಪಯೋಗಿ, ಸಹಕಾರ ವ್ಯವಹಾರ ಮತ್ತು ಕಂದಾಯ ಖಾತೆಗಳನ್ನು ಪಡೆದುಕೊಳ್ಳಲಿದೆ. ಮುಖ್ಯಮಂತ್ರಿ ಸೇರಿದಂತೆ ಜೆಡಿಎಸ್ 12 ಖಾತೆಗಳನ್ನು ಹೊಂದಲಿದೆ. ಉಪಮುಖ್ಯಮಂತ್ರಿ ಸೇರಿದಂತೆ 22 ಖಾತೆಗಳು ಕಾಂಗ್ರೆಸ್ ಪಾಲಾಗಲಿವೆ.
ಮೈತ್ರಿ ಸರಕಾರವೇನೂ ನಿದ್ದೆ ಮಾಡ್ತಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ
ತೀವ್ರ ಚರ್ಚೆಯ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಖಾತೆ ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಂದಿದ್ದಾರೆ. ನವದೆಹಲಿಯಲ್ಲಿ ಗುಲಾಂ ನಬಿ ಆಜಾದ್ ಜತೆ ನಡೆಸಿದ ಸಭೆ ವೇಳೆ ಹಣಕಾಸು ಖಾತೆಯನ್ನು ತಮ್ಮ ಪಕ್ಷಕ್ಕೆ ನೀಡದೆ ಇದ್ದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.
ಹಣಕಾಸು ಖಾತೆಯನ್ನು ತಮಗೆ ನೀಡಿದರೆ ಪ್ರಣಾಳಿಕೆಯಲ್ಲಿ ನೀಡಿದ 53,000 ಕೋಟಿ ರೂ. ರೈತರ ಸಾಲಮನ್ನಾ ಭರವಸೆಯನ್ನು ಅನುಷ್ಠಾನಗೊಳಿಸಲು ಸಾಧ್ಯ ಎಂಬ ಸಲುವಾಗಿ ಕುಮಾರಸ್ವಾಮಿ ಅವರು ಪಟ್ಟುಹಿಡಿದಿದ್ದರು.
ಸಾಲಮನ್ನಾ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಎರಡು ಹಂತಗಳಲ್ಲಿ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಅದರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ಕೇಳಿದ್ದಾರೆ.
ಸಂಪುರ ರಚನೆ ಸಂಬಂಧ ಈಗಾಗಲೇ ಸಾಕಷ್ಟು ನಕಾರಾತ್ಮಕ ಅಭಿಪ್ರಾಯಗಳಿಗೆ ಒಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವು ಇನ್ನೂ ವಿಳಂಬ ಮಾಡಲು ಬಯಸಿಲ್ಲ. 2019ರ ಲೋಕಸಭೆ ಚುನಾವಣೆ ವೇಳೆಗೆ ಸಮ್ಮಿಶ್ರ ಸರ್ಕಾರದ ಉಳಿವು ಎರಡೂ ಪಕ್ಷಗಳಿಗೆ ಮಹತ್ವದ್ದಾಗಿದೆ.