Karnataka Cabinet: ಸಚಿವರು, ಮಂಡಳಿಯ ಮುಖ್ಯಸ್ಥರಿಗೂ 30-30 ಸೂತ್ರ ಅನ್ವಯ- ಇನ್ಸೈಡ್ ಸ್ಟೋರಿ
ಬೆಂಗಳೂರು, ಮೇ 20: ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಐದು ವರ್ಷಗಳ ಅವಧಿಯನ್ನು ಸಮಾನವಾಗಿ ಹಂಚಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮನವರಿಕೆ ಮಾಡಿಕೊಟ್ಟಿದೆ. ಸಚಿವರು, ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ಅದೇ ರೀತಿ ವಿಭಜಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ತಮ್ಮ ಅನೇಕ ಬೆಂಬಲಿಗರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲು ತೀವ್ರ ಲಾಭಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಿಗಮಗಳಿಗೆ ನಾಮನಿರ್ದೇಶನಗಳಲ್ಲಿಯೂ ತಮ್ಮ ಬೆಂಬಲಿಗರಿಗೆ ನೀಡಬೇಕೆಂದು ಈ ಇಬ್ಬರು ಪ್ರಭಾವಿ ನಾಯಕರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

30-30 ಸೂತ್ರದೊಂದಿಗೆ, ಕಾಂಗ್ರೆಸ್ ಹೊಸ ಶಾಸಕರಿಗೂ ಸಚಿವಾಲಯ ಅಥವಾ ನಿಗಮಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಿದೆ ಎಂದು ತಿಳಿದುಬಂದಿದೆ. ಶನಿವಾರ ಪ್ರಮಾಣ ವಚನ ಸ್ವೀಕರಿಸುವ ಸಚಿವರು ಮೊದಲ 30 ತಿಂಗಳ ನಂತರ ( 2026 ರ ಜನವರಿಯೊಳಗೆ ) ಹೊಸಬರಿಗೆ ದಾರಿ ಮಾಡಿಕೊಡಬೇಕಾಗುತ್ತದೆ. ಆಗ ಶಿವಕುಮಾರ್ ಅವರು ಸಂಪುಟದ ಪುನರ್ರಚನೆ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಈ ಸೂತ್ರವು ಬೋರ್ಡ್ಗಳು ಮತ್ತು ಕಾರ್ಪೊರೇಷನ್ಗಳಿಗೆ ಅನ್ವಯಿಸುತ್ತದೆ. ಸರ್ಕಾರ ರಚನೆಯ ಮೊದಲ ಹಂತದಲ್ಲಿ ಸಚಿವ ಸ್ಥಾನದಿಂದ ವಂಚಿತರಾದವರು ಅಸಮಾಧಾನ ವ್ಯಕ್ತಪಡಿಸುವುದು ಖಂಡಿತವಾಗಿದೆ. ಆ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಅಸಮಾಧಾನಗೊಂಡಿರುವವರಿಗೆ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಿಎಂ ಮತ್ತು ಉಪ ಮುಖ್ಯಮಂತ್ರಿ ನಡುವಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು, 30 ತಿಂಗಳ ನಂತರ ಸುಗಮ ಅಧಿಕಾರದ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಸಮನ್ವಯ ಸಮಿತಿಯನ್ನು ಸ್ಥಾಪಿಸಲು ಹಿರಿಯ ಪದಾಧಿಕಾರಿಗಳು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಈ ಕಲ್ಪನೆಯನ್ನು ವಿರೋಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಹೈಕಮಾಂಡ್ ಈ ಕೆಲಸವನ್ನು ಎಐಸಿಸಿಗೆ ವಹಿಸಿದೆ. ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರ ಮೂಲಕ ಇದೆಲ್ಲವನ್ನೂ ಬಗೆಹರಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.
ಕಾಂಗ್ರೆಸ್ ಹೈಕಮಾಂಡ್ ಆದೇಶದ ಹೊರತಾಗಿಯೂ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಐದು ವರ್ಷಗಳ ಮುಖ್ಯಮಂತ್ರಿ ಅವಧಿಯನ್ನು ಸಮಾನವಾಗಿ ವಿಭಜಿಸಲು ಒಪ್ಪಂದವಿನ್ನೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ.
ಸರದಿ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ. 'ನಾವು ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಬಾರದು. ಆದಾಗ್ಯೂ, ವಿಭಜನೆಯ ಅವಧಿಯ ಸೂತ್ರವು ಪಕ್ಷದ ಹಿತಾಸಕ್ತಿಯಿಂದ ಒಳ್ಳೆಯದು. ಈಗ ಅವಕಾಶ ಪಡೆಯುತ್ತಿರುವವರು 30 ತಿಂಗಳ ನಂತರ ಇತರರಿಗೆ ದಾರಿ ಮಾಡಿಕೊಡಬೇಕು' ಎಂದು ಶಂಕರ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಂಪುಟವನ್ನು ನೇಮಿಸುವಲ್ಲಿ ಸಮಾನ ಪಾಲುಗಾಗಿ ಚೌಕಾಶಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಹೈಕಮಾಂಡ್ನ ಕೆಲಸವನ್ನು ಕಷ್ಟಕರವಾಗಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ಹಿರಿಯ ನಾಯಕರು ಶುಕ್ರವಾರ ತಂಡ ರಚನೆ ಕುರಿತು ಸಮಾಲೋಚನೆ ನಡೆಸಿದ್ದಾರೆ.












Click it and Unblock the Notifications